ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಸಣ್ಣ ನೀರಾವರಿ ಇಲಾಖೆಯ ಕೆರೆಗಳೆಲ್ಲ ತುಂಬಿದ್ದು ಬೆಲ್ಲದಮಡುಗು ಕೆರೆ ಹೊರತುಪಡಿಸಿ ಉಳಿದವು ಸುಭದ್ರವಾಗಿವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. 

ಮಧುಗಿರಿ (ಸೆ.05): ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಸಣ್ಣ ನೀರಾವರಿ ಇಲಾಖೆಯ ಕೆರೆಗಳೆಲ್ಲ ತುಂಬಿದ್ದು ಬೆಲ್ಲದಮಡುಗು ಕೆರೆ ಹೊರತುಪಡಿಸಿ ಉಳಿದವು ಸುಭದ್ರವಾಗಿವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ತಾಲೂಕಿನ ಕಸಬಾ ಬೆಲ್ಲದಮಡುಗು ಕೆರೆ ಕೋಡಿ ಹೊಡೆದ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಪಟ್ಟಣದ ಚೊಳೇನಹಳ್ಳಿ ಕೆರೆ ಕೋಡಿ ದುರಸ್ಥಿ ಕಾರ್ಯ ಹಾಗೂ ಕಾಳೇನಹಳ್ಳಿಯ ಬೃಹತ್‌ ಸೇತುವೆಗೆ ಆದ ಹಾನಿಯನ್ನು ಪರಿಶೀಲಿಸಿ ಇಮ್ಮಡಗೊಂಡನಹಳ್ಳಿಯಲ್ಲಿ ಉಂಟಾದ ನೆರೆ ಹಾನಿ ವೀಕ್ಷಿಸಿ ಮಾತನಾಡಿದರು.

Add Asianetnews Kannada as a Preferred SourcegooglePreferred

ನದಿಗಳಿಂದ ಹೆಚ್ಚುವರಿ ನೀರು ಹರಿದ ಪರಿಣಾಮ ಕೆಲವೆಡೆ ಸೇತುವೆ ಹಾಗೂ ರಸ್ತೆಗಳಿಗೆ ಹಾನಿಯಾಗಿದೆ. ಇದಕ್ಕಾಗಿ ಅಗತ್ಯ ನೆರವನ್ನು ಅಧಿಕಾರಿಗಳ ವರದಿ ಬಂದಾಕ್ಷಣ ಬಿಡುಗಡೆ ಮಾಡಲಾಗುವುದು. ಬೆಲ್ಲದಮಡುಗು ಕೆರೆ ಕೋಡಿ, ಚೊಳೇನಹಳ್ಳಿ ಕೆರೆ ಕೋಡಿಯ ದುರಸ್ಥಿ ಕಾರ್ಯವನ್ನು ಶೀಘ್ರವಾಗಿ ಕೈಗೊಂಡು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಚನ್ನಸಾಗರ, ಇಮ್ಮಡಗೊಂಡನಹಳ್ಳಿ ಹಾಗೂ ಕಾಳೇನಹಳ್ಳಿ ಸೇತುವೆಗೆ ಭಾರಿ ಹಾನಿಯಾಗಿದ್ದು,ಈ ಭಾಗದ ಜನರ ಸಮಸ್ಯೆಗೆ ಶೀಘ್ರ ಮುಂದಾಗಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಸಚಿವರನ್ನು ಒತ್ತಾಯಿಸಿದರು.

Tumakuru: ಮುದ್ದಹನುಮೇಗೌಡರ ಮನವೊಲಿಸುತ್ತೇವೆ: ಎಂ.ಬಿ.ಪಾಟೀಲ್‌

ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಹೇಳಲ್ಲ ಕೆಲಸ ಮಾಡಿ ತೋರಿಸುತ್ತೇನೆ. ಮಳೆಯಿಂದಾಗಿ ಕ್ಷೇತ್ರ ತಂಪಾಗಿದೆ. ಹಲವು ಕಡೆ ಮನೆಗಳು, ಸೇತುವೆ ಹಾಗೂ ರಸ್ತೆಗಳಿಗೆ ಹಾನಿಯಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳನ್ನು ಕರೆಸಿದ್ದು ಇಂದು ಸಚಿವರನ್ನು ಕರೆತಂದು ಎಲ್ಲ ಸಮಸ್ಯೆಗಳನ್ನು ಖುದ್ದು ತೋರಿಸಿದ್ದೇನೆ. ನಾನು ಹೇಳದೆ ಕೆಲಸ ಮಾಡುವವನು. ನನ್ನ ಜನರ ಕಷ್ಟಗಳಿಗೆ ಯಾವ ರೀತಿ ಪರಿಹಾರ ಕೊಡಿಸಬೇಕು ಎನ್ನುವುದು ತಿಳಿದಿದ್ದು, ಅದು ಶೀಘ್ರ ಕಾರ್ಯಗತವಾಗಲಿದೆ. ಪಟ್ಟಣದ ರಸ್ತೆಗಳಿಗೆ ನೂತನ ಸ್ಪರ್ಶ ನೀಡಲು ಮಳೆಯು ಅಡ್ಡಿಯಾಗಿದ್ದು ಮಳೆಗಾಲ ನಿಂತಾಕ್ಷಣ ಸುಂದರ ರಸ್ತೆ

ನಿರ್ಮಿಸಲು ಮುಂದಾಗುತ್ತೇವೆ. ವಿರೋಧಿಗಳು ಏನಂದರೂ ತಲೆಕೆಡಿಸಿಕೊಳ್ಳಲ್ಲ ಎಂದರು. ಈ ಸಂದರ್ಭದಲ್ಲಿ ಎಸಿ ಸೋಮಪ್ಪ ಕಡಕೋಳ, ತಹಸೀಲ್ದಾರ್‌ ಸುರೇಶಾಚಾರ್‌, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಸಿಇ ರಾಘವನ್‌, ಎಸ್‌ಇ ಸಂಜೀವರಾಜು, ಇಇ ರವಿ ಸೂರನ್‌, ಎಇಇ ರಂಗನಾಥ್‌, ಎಇಗಳಾದ ಮಂಜುಕಿರಣ್‌, ಜ್ಞಾನಮೂರ್ತಿ, ರಮೇಶ್‌ ಕುಮಾರ್‌, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಇದ್ದರು.

ಪರಿಹಾರಕ್ಕೆ ಸರ್ಕಾರದ ಜೊತೆ ಚರ್ಚಿಸುವೆ: ಮಳೆಯ ಪ್ರಭಾವದಿಂದ ತಾಲೂಕಿನ ಕೆರೆಗಳಿಗೆ ನೀರು ಸಂಗ್ರಹವಾಗಿದ್ದು, ಹೆಚ್ಚು ನೀರಿನ ಪ್ರಮಾಣದಿಂದ ಅನೇಕ ಕೆರೆಗಳು ಕೋಡಿ ಹರಿದಿವೆ. ತಾಲೂಕಿನ ಪಳವಳ್ಳಿ ದೊಡ್ಡ ಕೆರೆ, ನಾಗಲಮಡಿಕೆ ಉತ್ತರ ಪಿನಾಕಿನಿ ಮತ್ತು ಅಗಸರಕುಂಟೆ ಕೆರೆಗೆ ಬಾಗಿನ ಅರ್ಪಿಸಿದ್ದು, ಕೆರೆಗಳ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆಯಲಾಗಿದೆ. ಮಳೆಯ ಪ್ರಮಾಣದಿಂದ ಹಳ್ಳದ ನೀರು ನುಗ್ಗಿ ಮನೆಗಳ ಕುಸಿತ ಮತ್ತು ರೈತಾಪಿ ನೀರಾವರಿ ಜಮೀನುಗಳ ಮುಳುಗಡೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಜಿಲ್ಲಾಧಿಕಾರಿಗಳಿಗೆ ಆದೇಶಿಸುವ ಮೂಲಕ ಸೂಕ್ತ ಪರಿಹಾರಕ್ಕೆ ಸರ್ಕಾರದ ಜತೆ ಚರ್ಚಿಸುವುದಾಗಿ ಸಚಿವ ಮಾಧುಸ್ವಾಮಿ ಹೇಳಿದರು.

ಯುವಕರಿಗೆ ಉದ್ಯೋಗ ನೀಡಲು ಪಿಎಂಕೆವಿ ಯೋಜನೆ: ಸಂಸದ ಜಿ.ಎಸ್‌.ಬಸವರಾಜು

ಸಚಿವ ಜೆ.ಸಿ.ಮಾಧುಸ್ವಾಮಿ ಶನಿವಾರ ಪಾವಗಡಕ್ಕೆ ಭೇಟಿ ನೀಡಿ, ಶಾಸಕ ವೆಂಕಟರಮಣಪ್ಪ ಜತೆ ಇಲ್ಲಿನ ಅಗಸರಕುಂಟೆ, ತಾಲೂಕಿನ ಪಳವಳ್ಳಿ ಹಾಗೂ ನಾಗಲಮಡಿಕೆ, ಉತ್ತರ ಪಿನಾಕಿನಿ ಅಣೆಕಟ್ಟೆಯ ನೀರಿಗೆ, ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಶಾಸಕ ವೆಂಕಟರಮಣಪ್ಪ ಮಾತನಾಡಿ, ಭಾರಿ ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿ ಜನಸಾಮಾನ್ಯರ ಒಡಾಟಕ್ಕೆ ತೀವ್ರ ಆಡಚಣೆ ಎದುರಾಗಿದೆ. ಜಮೀನುಗಳಿಗೆ ನೀರು ನುಗ್ಗಿ ಶೇಂಗಾ, ಅಡಕೆ, ದಾಳಿಂಬೆ ಹಾಗೂ ತೆಂಗಿನ ತೋಟಗಳು ನಾಶವಾಗಿ, ಅಪಾರ ಪ್ರಮಾಣದ ನಷ್ಟಸಂಭವಿಸಿದೆ. ಕೆರೆ ಕಟ್ಟೆಗಳ ದುರಸ್ತಿ ಕಾರ್ಯವಾಗಬೇಕು. ಬೆಳೆ ನಾಶದ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದು, ಸಚಿವ ಮಾಧುಸ್ವಾಮಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಪರಿಹಾರ ಸೂಕ್ತ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿರುವುದಾಗಿ ತಿಳಿಸಿದರು.