Asianet Suvarna News Asianet Suvarna News

ಕೆಕೆಆರ್‌ಡಿಬಿಗೆ ಘೋಷಿಸಿದ 5,000 ಕೋಟಿ ಅನುದಾನ ಸಂಪೂರ್ಣ ಖರ್ಚಾಗಲಿ: ಮಲ್ಲಿಕಾರ್ಜುನ ಖರ್ಗೆ

ತಾವು ಈ ಹಿಂದೆ 9 ತಿಂಗಳು ಅಲ್ಪ ಕಾಲ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ರಾಜ್ಯದಲ್ಲಿ 37 ಹೊಸ ರೈಲು ಓಡಿಸಿದ್ದೆ. ಸಾವಿರಾರು ಕೋಟಿ ರೂ. ಅನುದಾನ ರಾಜ್ಯಕ್ಕೆ ತಂದು ರೈಲ್ವೆ ಮೂಲಸೌಕರ್ಯ ಬಲಪಡಿಸಿದ್ದೇನೆ. ಯಾವುದೇ ಕೆಲಸ ಆಗಬೇಕಾದರೆ ಇಚ್ಛಾಶಕ್ತಿ ತುಂಬಾ ಮುಖ್ಯ ಎಂದ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ 

AICC President Mallikarjun Kharge Talks Over KKRDB Grant grg
Author
First Published Aug 6, 2023, 9:15 PM IST | Last Updated Aug 6, 2023, 9:15 PM IST

ಕಲಬುರಗಿ(ಆ.06):  ರಾಜ್ಯ ಸರ್ಕಾರ ಕೆ.ಕೆ.ಆರ್‌.ಡಿ.ಬಿ. ಮಂಡಳಿಗೆ ಪ್ರಸಕ್ತ 2023-24ನೇ ಆಯವ್ಯಯದಲ್ಲಿ ಘೋಷಿಸಿರುವ 5,000 ಕೋಟಿ ರೂ. ಅನುದಾನ ಸಂಪೂರ್ಣವಾಗಿ ಇದೇ ವರ್ಷದಲ್ಲಿ ಖರ್ಚು ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರು ನಿರಂತರ ಈ ಬಗ್ಗೆ ಪ್ರಗತಿ ಪರಿಶೀಲನೆ ಮಾಡಬೇಕು ಎಂದು ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಲಬುರಗಿ ನಗರದ ಎನ್‌.ವಿ.ಮೈದಾನದಲ್ಲಿ ಶನಿವಾರ ಇಂಧನ ಇಲಾಖೆ ಆಯೋಜಿಸಿದ ಐತಿಹಾಸಿಕ ಗೃಹ ಜ್ಯೋತಿ ಚಾಲನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಭಾಗವಹಿಸಿ ಮಾತನಾಡಿದ ಅವರು, ಆಯವ್ಯಯದಲ್ಲಿ ಘೋಷಣೆಗೆ ಸೀಮಿತವಾಗದೇ ಪ್ರದೇಶದ ಅಭಿವೃದ್ಧಿಗೆ ಹಣ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಪ್ರದೇಶದ ಸಚಿವರು ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು.

ಬೇರೆ ರಾಜ್ಯಗಳ ಸಿಎಂಗಳೂ ಗ್ಯಾರಂಟಿ ಮೆಚ್ಚಿದ್ದಾರೆ: ಡಿ.ಕೆ. ಶಿವಕುಮಾರ್‌

ತಾವು ಈ ಹಿಂದೆ 9 ತಿಂಗಳು ಅಲ್ಪ ಕಾಲ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ರಾಜ್ಯದಲ್ಲಿ 37 ಹೊಸ ರೈಲು ಓಡಿಸಿದ್ದೆ. ಸಾವಿರಾರು ಕೋಟಿ ರೂ. ಅನುದಾನ ರಾಜ್ಯಕ್ಕೆ ತಂದು ರೈಲ್ವೆ ಮೂಲಸೌಕರ್ಯ ಬಲಪಡಿಸಿದ್ದೇನೆ. ಯಾವುದೇ ಕೆಲಸ ಆಗಬೇಕಾದರೆ ಇಚ್ಛಾಶಕ್ತಿ ತುಂಬಾ ಮುಖ್ಯ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸರ್ಕಾರದ ಹೆಚ್ಚಿನ ಆದ್ಯತೆ ನೀಡಬೇಕು, ಮೂಲಸೌಕರ್ಯ ಹೆಚ್ಚಿಸಬೇಕು. ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದು 2 ತಿಂಗಳಾಗಿವೆ. ಈಗಲೇ 5 ವರ್ಷಗಳ ಯೋಜನೆಗಳು ಜಾರಿಗೆ ವಿರೋಧ ಪಕ್ಷಗಳು ಒತ್ತಾಯ ಮಾಡುತ್ತಿರುವುದು ಹಾಸ್ಯಸ್ಪದವಾಗಿದೆ. 5 ವರ್ಷದ ಕೆಲಸಗಳನ್ನು 2 ತಿಂಗಳಲ್ಲಿ ಮಾಡಲು ಇದು ಜಾದೂ ಅಲ್ಲ ಎಂದ ಅವರು, ಹಂತ-ಹಂತವಾಗಿ ಚುನಾವಣಾ ಪೂರ್ವ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುತ್ತದೆ ಎಂದರು.

ರಾಷ್ಟ್ರೀಯ ಹೆದ್ದಾರಿಗಳು ಮೇಲ್ದರ್ಜೇಗೇರಿಸಿ:

ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ದ್ವಿಪಥದಿಂದ ಆರು ಪಥಕ್ಕೆ ಮೇಲ್ದರ್ಜೇಗೇರಿಸಬೇಕು. ಬೆಂಗಳೂರು-ಮೈಸೂರು 10 ಪಥ ಇವೆ. ಇಲ್ಲಿ ದ್ವಿಪಥ ರಸ್ತೆಗಳೇ ಸರಿಯಾಗಿಲ್ಲ. ರಸ್ತೆ ಅಭಿವೃದ್ಧಿಯ ಪ್ರತೀಕವಾಗಿವೆ. ಈ ನಿಟ್ಟಿನಲ್ಲಿ ಸರ್ಕಾರದಿಂದಾಗಲಿ, ಜಂಟಿ ಸಹಭಾಗಿತ್ವ, ಪಿಪಿಪಿ ಮಾಡೆಲ್‌ ಯಾವುದೇ ವಿಧದಲ್ಲಿ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದರು.

ಗ್ಯಾರಂಟಿಗೆ ಇಡೀ ದೇಶದ ಜನರ ಮೆಚ್ಚುಗೆ: ಮಲ್ಲಿಕಾರ್ಜುನ ಖರ್ಗೆ

ನುಡಿದಂತೆ ನಡೆಯುವ ಸಂಪ್ರದಾಯ ಮುಂದುರಿಸಿದ್ದೇವೆ: ಡಾ. ಶರಣ ಪಾಟೀಲ್‌

ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಚುನಾವಣಾ ಪೂರ್ವ ನೀಡಿದ ವಾಗ್ಧಾನದಂತೆ 3 ತಿಂಗಳಿನಲ್ಲಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಜ್ಯೋತಿ ಪ್ರಮುಖ ಮೂರು ಗ್ಯಾರಂಟಿ ಜಾರಿಗೆ ತಂದಿದ್ದೇವೆ. 2013-18 ಅವಧಿಯಲ್ಲಿ ನಮ್ಮ ಸರ್ಕಾರ ಇದ್ದಾಗಲು ಸಹ ನಾವು ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇವೆ. ಅದೇ ಭರವಸೆ ಮೇರೆ ಜನರು ನಮಗೆ ಆಶೀರ್ವಾದ ನೀಡಿದ್ದು, ನುಡಿದಂತೆ ನಡೆಯುವ ಸಂಪ್ರದಾಯ ಈಗಲೂ ಮುಂದುವರಿಸಿದ್ದೇವೆ ಎಮದರು.

ಚುನಾವಣಾ ಪೂರ್ವ ಇದೇ ಮೈದಾನದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಕೆಕೆಆರ್‌ಡಿಬಿ ಮಂಡಳಿಗೆ 5 ಸಾವಿರ ಕೋಟಿ ರು. ನೀಡಲಾಗುವುದು ಎಂದು ಘೋಷಿಸಿದರು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಆಯವ್ಯಯದಲ್ಲಿ ಪ್ರದೇಶದ ಅಭಿವೃದ್ಧಿಗೆ 5 ಸಾವಿರ ಕೋಟಿ ರು. ಅನುದಾನ ಮೀಸಲಿರಿಸಿದ್ದಾರೆ. 371ಜೆ ಅನ್ವಯ ಸ್ಥಳೀಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ 371ಜೆ ಅನುಷ್ಠಾನ ಸಚಿವ ಸಂಪುಟ ಉಪ ಸಂಪುಟ ಸಮಿತಿ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ ಈಗಾಗಲೇ ಇಲಾಖಾವಾರು ಸಭೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುಂದಿನ ದಿನದಲ್ಲಿ ಸ್ಥಳೀಯರಿಗೆ ಉದ್ಯೋಗ ಭಾಗ್ಯ ಸಿಗಲಿದೆ ಎಂದರು.

Latest Videos
Follow Us:
Download App:
  • android
  • ios