ಕೃಷಿ ಪಂಪ್ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ, ಕಬ್ಬು, ಬಾಳೆ ಬೆಳೆಗಳು ಒಣಗುತ್ತಿವೆ. ಇಂಧನ ಇಲಾಖೆ ರೈತರನ್ನು ಕಗ್ಗತ್ತಲ್ಲಿಟ್ಟಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಮುಖಂಡರು ಆರೋಪಿಸಿದರು.

 ಟಿ.ನರಸೀಪುರ : ಕೃಷಿ ಪಂಪ್ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ, ಕಬ್ಬು, ಬಾಳೆ ಬೆಳೆಗಳು ಒಣಗುತ್ತಿವೆ. ಇಂಧನ ಇಲಾಖೆ ರೈತರನ್ನು ಕಗ್ಗತ್ತಲ್ಲಿಟ್ಟಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಮುಖಂಡರು ಆರೋಪಿಸಿದರು.

Add Asianetnews Kannada as a Preferred SourcegooglePreferred

ಜಿಲ್ಲೆಯಲ್ಲಿ ಹಾಗೂ ತಾಲೂಕಿನಲ್ಲಿ ಬರಗಾಲ ಕಾಡುತ್ತಿದೆ, ಹಳ್ಳಿಗಳಲ್ಲಿ ಕುಡಿಯುವ ನೀರು ದನಗಳಿಗೆ ಮೇವು ಸಿಗುತ್ತಿಲ್ಲ, ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ದೊಂಬರಾಟ ಆಡುತ್ತಿವೆ, ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿದ್ದಾರೆ. ರೈತರು ಸೊರಗುತ್ತಿದ್ದಾರೆ ಎಂದು ತಾಲೂಕು ಅಧ್ಯಕ್ಷ ಸಿದ್ದೇಶ್ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಪ್ರತಿಭಟನೆ ಮಾಡಿ ಕಬಿನಿ ಕಾವೇರಿ ನಾಲೆಗಳಲ್ಲಿ ನೀರು ಹರಿಸುವಂತೆ ಒತ್ತಾಯಿಸಿದರು ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ. ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಹಳ್ಳಿಗಳಿಗೆ ಮತ ಕೇಳಲು ಬರುವ ರಾಜಕೀಯ ಪಕ್ಷಗಳಿಗೆ ಛೀಮಾರಿ ಹಾಕಿ ಸಮಸ್ಯೆ ಗಮನ ಸೆಳೆಯ ಬೇಕಾಗುತ್ತದೆ.

ದೇಶದಲ್ಲಿ 70ರಷ್ಟು ಇರುವ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಬೆಲೆ ನಿಗದಿ ಮಾಡಿ ಎಂದರೆ ರೈತರ ಮೇಲೆ ಗೋಲಿಬಾರ್ ಮಾಡುತ್ತಾರೆ ಆದರೆ ಶೇ. 2ರಷ್ಟು ಇರುವ ಸರ್ಕಾರಿ ನೌಕರರಿಗೆ 58ರಷ್ಟು ಸಂಬಳ ಏರಿಕೆ ಮಾಡಬೇಕು ಎನ್ನುತ್ತ ವರದಿ ಸಲ್ಲಿಸುತ್ತಾರೆ, ಇಂತಹ ಪುರುಷಾರ್ಥಕ್ಕೆ ರೈತರು ಎಂಪಿಗಳನ್ನ ಗೆಲ್ಲಿಸಬೇಕೆ, ದೇಶದಲ್ಲಿ ಅನ್ನ ನೀಡುವ ರೈತನನ್ನು ಅನಾಥರಾಗಿ ಮಾಡಬಾರದು, ಅನ್ನದಾತರು ದೇಶಕ್ಕೆ ಆಶ್ರಯದಾತರಾಗಬೇಕು ಎಂದು ಹೇಳಿದರು.

ಬರಗಾಲದ ಬೇಗೆಯಲ್ಲಿ ಬಳಲುತ್ತಿರುವ ರೈತರು ಕುಡಿಯುವ ನೀರು ಮೇವು ಸಿಗುತ್ತಿಲ್ಲ, ಹಳ್ಳಿಗಳಲ್ಲಿ ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಛೀಮಾರಿ ಸ್ವಾಗತ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಾಯಕ್, ತಾಲೂಕು ಉಪಾಧ್ಯಕ್ಷ ನಂಜುಂಡಸ್ವಾಮಿ, ತಾಲೂಕು ಸಂಘಟನಾ ಕಾರ್ಯದರ್ಶಿ ಪ್ರದೀಪ್, ಅಪ್ಪಣ್ಣ, ಟೌನ್ ಅಧ್ಯಕ್ಷ ಲಿಂಗರಾಜು, ಕುಮಾರ್, ಗೌರಿಶಂಕರ್, ಉಮೇಶ್, ನಾಗರಾಜು ಇದ್ದರು.