ತುರಹಳ್ಳಿ ಅರಣ್ಯಕ್ಕೆ ಮತ್ತೆ ಬೆಂಕಿ: 4 ಎಕರೆ ಆಹುತಿ
ಕಿಡಿಗೇಡಿಗಳ ಕೃತ್ಯ ಶಂಕೆ| ಬೆಂಕಿ ನಂದಿಸಿದ 1 ಅಗ್ನಿಶಾಮಕ ದಳ, 25ಕ್ಕೂ ಹೆಚ್ಚು ಸ್ಥಳೀಯರು, 13 ಅರಣ್ಯ ಸಿಬ್ಬಂದಿ| ಸಂಜೆ ಎಂಟು ಗಂಟೆ ಸಮಯದಲ್ಲಿ ಕಾಣಿಸಿಕೊಂಡ ಬೆಂಕಿ| ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ ಅರಣ್ಯ ಇಲಾಖೆ ಅಧಿಕಾರಿಗಳು|
ಬೆಂಗಳೂರು(ಮಾ.28): ನಗರದ ತುರಹಳ್ಳಿ ಅರಣ್ಯದಲ್ಲಿ ಶನಿವಾರ ಸಂಜೆ ಕಾಣಿಸಿಕೊಂಡ ಬೆಂಕಿಯಿಂದ ಸುಮಾರು ನಾಲ್ಕು ಎಕರೆ ಅರಣ್ಯ ಪ್ರದೇಶ ಆಹುತಿಯಾಗಿದೆ.
ಸಂಜೆ ಎಂಟು ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ತಿಳಿದ ತಕ್ಷಣ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಅಗ್ನಿಶಾಮಕ ವಾಹನ, 25ಕ್ಕೂ ಹೆಚ್ಚು ಜನ ಸ್ಥಳೀಯರು ಹಾಗೂ 13 ಜನ ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
ತುರಹಳ್ಳಿ ಅರಣ್ಯಕ್ಕೆ ಬೆಂಕಿ: 30 ಎಕರೆಗೆ ಹಾನಿ
ಬೇಸಿಗೆ ಸಮೀಪಿಸುತ್ತಿರುವುದರಿಂದ ಹುಲ್ಲು ಒಣಗಿದೆ. ಇದರಿಂದ ಬೆಂಕಿಯ ಕೆನ್ನಾಲಿಗೆ ಶೀಘ್ರ ಹರಡಲಿದೆ. ಆದರೆ ಯಾವುದೇ ಪ್ರಾಣಿಗಳಿಗೆ ತೊಂದರೆಯಾಗಿಲ್ಲ. ಅಕ್ರಮವಾಗಿ ಒಳ ನುಗ್ಗಿರುವ ಕಿಡಿಕೇಡಿಗಳು ಬೆಂಕಿ ಹಚ್ಚಿರಬಹುದು. ಆರೋಪಿಗಳ ಪತ್ತೆ ಮಾಡಲು ಬಲೆ ಬೀಸಿರುವುದಾಗಿ ವಲಯ ಅರಣ್ಯಾಧಿಕಾರಿ ಗೋಪಾಲ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.