ಉದ್ಯಮಿ ಅದಾನಿ ಆದಾಯ ಹೆಚ್ಚಳ ಕುರಿತು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಆಗ್ರಹಿಸಿದರು. 

ಹುಬ್ಬಳ್ಳಿ (ಫೆ.13): ಉದ್ಯಮಿ ಅದಾನಿ ಆದಾಯ ಹೆಚ್ಚಳ ಕುರಿತು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಆಗ್ರಹಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಾನಿ ಆದಾಯ ಹೆಚ್ಚಳದ ಕುರಿತು ಸಿಬಿಐ ತನಿಖೆ ಮಾಡುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಆದರೆ ಯಾವುದೇ ತನಿಖೆಯಾಗಿಲ್ಲ. ಈಗ ಪಾರ್ಲಿಮೆಂಟ್‌ ಜಂಟಿ ಸಮಿತಿಯಿಂದ ತನಿಖೆ ಮಾಡಿಸುವುದಾಗಿ ಕೇಂದ್ರ ಹೇಳುತ್ತಿದೆ. ಇದರಿಂದ ಯಾವುದೇ ಪರಿಣಾಮ ಆಗಲ್ಲ. ಹಾಗಾಗಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆದರೆ ಸತ್ಯ ಹೊರಬರಲಿದೆ ಎಂದರು.

Add Asianetnews Kannada as a Preferred SourcegooglePreferred

2014ರಲ್ಲಿ ಅದಾನಿ ಅವರ ಬಂಡವಾಳ 8 ದಶಲಕ್ಷ ಕೋಟಿ ಲಕ್ಷ ಇತ್ತು. ಅದು 8 ವರ್ಷಗಳಲ್ಲಿ . 140 ದಶಲಕ್ಷ ಕೋಟಿಗೆ ಹೇಗೆ ಏರಿಕೆಯಾಯಿತು? ವಿಮಾನ ನಿಲ್ದಾಣ ನಿರ್ವಹಣೆ ಮಾಡುವ ಅನುಭವ ಇಲ್ಲವಾದರೂ ಅದಾನಿ ಅವರಿಗೆ ಅನುಕೂಲ ಮಾಡಲು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. 2004ರಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಪ್ರಪಂಚದಲ್ಲಿ 600ನೇ ಸ್ಥಾನದಲ್ಲಿದ್ದ ಅದಾನಿ ಇಂದು 2ನೇ ಸ್ಥಾನದಲ್ಲಿ ಬರಬೇಕಾದರೆ ಕಾರಣ ಏನು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದರು.

ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಪ್ರಣಾಳಿಕೆ: ಸಚಿವ ಸುಧಾಕರ್‌

ನರೇಂದ್ರ ಮೋದಿ ಸರ್ಕಾರ ಬಡವರ ಪರ ಹಾಗೂ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಕೇಳಿದ ಪ್ರಶ್ನೆಗೆ ಮೋದಿ ಸರ್ಕಾರ ಉತ್ತರ ಕೊಡುತ್ತಿಲ್ಲ. ಪ್ರಧಾನ ಮಂತ್ರಿ ಕಚೇರಿಯಿಂದ ದೇಶದ್ರೋಹಿ ಕೆಲಸ ನಡೆಯುತ್ತಿದೆ ಎಂದು ದೂರಿದರು. ಎಲ್‌ಐಸಿ ಹಾಗೂ ಎಸ್‌ಬಿಐನಲ್ಲಿ ಜನಸಾಮಾನ್ಯರು ಹಣ ಇಟ್ಟಿದ್ದಾರೆ. 75 ಸಾವಿರ ಕೋಟಿ ಹಾನಿಯಾಗಿದೆ. ಯಾವ ರೀತಿ ಹಾನಿಯಾಗಿದೆ? ಇದಕ್ಕೆ ಯಾರು ಹೊಣೆಗಾರರು? ಎಂದು ಪಾರ್ಲಿಮೆಂಟ್‌ನಲ್ಲಿ ಸರ್ಕಾರ ಉತ್ತರ ಕೊಡಲಿ ಎಂದು ಒತ್ತಾಯಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಖ್ಯಮಂತ್ರಿ ಆಗುವ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಯಾವುದೇ ಜಾತಿ, ಧರ್ಮದ ವಿಷಯ ಬರುವುದಿಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇದೆ. ಬ್ರಾಹ್ಮಣ, ಅಲ್ಪಸಂಖ್ಯಾತ, ದಲಿತ ಯಾರೇ ಆದರೂ ಮುಖ್ಯಮಂತ್ರಿ ಆಗಬಹುದು. ಇದೇ ಪ್ರಜಾಪ್ರಭುತ್ವದ ತಿರುಳು ಎಂದರು.

ಸಿದ್ದರಾಮಯ್ಯ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿ: ನಿಖಿಲ್‌ ಕುಮಾರಸ್ವಾಮಿ

ಕೈ ಅಭ್ಯರ್ಥಿಗಳ ಪಟ್ಟಿ ಶೀಘ್ರ: ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಈಗಾಗಲೇ ಕೆಪಿಸಿಸಿ ಅಭ್ಯರ್ಥಿಗಳ ಪಟ್ಟಿ ತಯಾರಿಸಿ ಸ್ಕ್ರೀನಿಂಗ್‌ ಕಮಿಟಿಗೆ ಕಳುಹಿಸುತ್ತಿದೆ. ಸ್ಕ್ರೀನಿಂಗ್‌ ಕಮಿಟಿ ಚೇರ್‌ಮನ್ನರೂ ಬೆಂಗಳೂರಿನಲ್ಲಿದ್ದಾರೆ. ಎಲ್ಲರೂ ಒಂದು ತೀರ್ಮಾನಕ್ಕೆ ಬಂದು ಶೀಘ್ರದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.