ಕಲಬುರಗಿ ಜೆಇ ಬಹುಕೋಟಿ ಆಸ್ತಿ ಕಂಡು ಎಸಿಬಿ ದಂಗು| ದಾಳಿ ಕಾಲದಲ್ಲಿ ಅಪಾರ ಆಸ್ತಿಪಾಸ್ತಿ, ಅರ್ಧ ಕೆಜಿ ಚಿನ್ನಾಭರಣ, ತೋಟದ ಮನೆ, ಜಮೀನು, ಐಷಾರಾಮಿ ಕಾರುಗಳು ಪತ್ತೆ| 2. 50 ಕೋಟಿಗೂ ಅಧಿಕ ಮೊತ್ತದ ಸ್ಥಿರ- ಚರಾಸ್ತಿ ಪತ್ತೆ| ಮಹತ್ವದ ಆಸ್ತಿಪಾಸ್ತಿ ಕುರಿತಾದ ಕಾಗದ ಪತ್ರ, ಬ್ಯಾಂಕ್‌ ಲಾಕರ್‌ಗಳ ಪರಿಶೀಲನೆ| 

ಕಲಬುರಗಿ(ಫೆ.04): ಭ್ರಷ್ಟಾಚಾರ ನಿಗ್ರಹ ದಳದವರೇ ಪಿಡಬ್ಲೂಡಿ ಇಲಾಖೆಯ ಕಿರಿಯ ಇಂಜಿನಿಯರ್‌ ಆಸ್ತಿ ಕಂಡು ದಂದಾಗಿದ್ದಾರೆ. ಮಾರ್ಗಸೂಚಿ ದರದಂತೆ ಸಂಬಳಕ್ಕಿಂತ 200 ಪಟ್ಟು ಹೆಚ್ಚಿನ ಆಸ್ತಿ ಜೆಇ ಚನ್ನಬಸಪ್ಪ ಆವಟೆ ಹೊಂದಿರೋದು ಎಸಿಬಿ ದಾಳಿಯಲ್ಲಿ ಪತ್ತೆಯಾಗಿದೆ.

Add Asianetnews Kannada as a Preferred SourcegooglePreferred

ಆವಟೆ ಇವರಿಗೆ ಸೇರಿದ್ದ ಕಲಬುರಗಿ ಮನೆ, ಚಿಂಚೋಳಿ ತೋಟದ ಮನೆ, ನಗರದಲ್ಲಿರುವ ಓಂ ಅಪಾರ್ಟ್‌ಮೆಂಟ್‌ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದ್ದು ತಡರಾತ್ರಿ ವರೆಗೂ ಪರಿಶೀಲನೆ ನಡೆಯಿತು. 2. 50 ಕೋಟಿಗೂ ಅಧಿಕ ಮೊತ್ತದ ಸ್ಥಿರ- ಚರಾಸ್ತಿ ಪತ್ತೆಯಾಗಿದೆ, ಇದಲ್ಲದೆ ಇನ್ನೂ ಮಹತ್ವದ ಆಸ್ತಿಪಾಸ್ತಿ ಕುರಿತಾದ ಕಾಗದ ಪತ್ರ, ಬ್ಯಾಂಕ್‌ ಲಾಕರ್‌ಗಳ ಪರಿಶೀಲನೆ ನಡೆದಿದೆ ಎಂದು ಎಸಿಬಿ ಮೂಲಗಳು ಹೇಳಿವೆ.

ಓಂ ಅಪಾರ್ಟ್‌ಮೆಂಟ್‌ನ 8 ಫ್ಲ್ಯಾಟ್‌ಗಳು, ಗೋಕುಲ್‌ ಸೂಪರ್‌ ಬಜಾರ್‌, ಖುಷಿ ಡೆವಲಪರ್ಸ್‌ನಲ್ಲಿ ಮಗನ ಹೆಸರಲ್ಲಿ ಪಾಲು, ಮೋಗದಮ್‌ಪುರದಲ್ಲಿ 23 ಎಕರೆ, ಬಸವಕಲ್ಯಾಣದಲ್ಲಿ 3 ಎಕರೆ ಜಮೀನು, ಐಷಾರಾಮಿ ಟೋಯೋಟಾ, ಇನ್ನೋವಾ ಕ್ರಿಸ್ಟಾ, ನೆಕ್ಸಾ, ಎಸ್‌ ಕ್ರಾಸ್‌ ಕಾರುಗಳು, ಸ್ಕೂಟರ್‌, ಚನ್ನಬಸಪ್ಪ ಪತ್ನಿ ಕವಿತಾ, ಹೆಸರಲ್ಲೂ ಅಪಾರ ಆಸ್ತಿಪಾಸ್ತಿ, ಪುತ್ರ ಶ್ರೀಕಾಂತನ ಹೆಸರಲ್ಲೂ ಆಸ್ತಿಪಾಸ್ತಿ ನೋಂದಣಿ, ಚನ್ನಬಸಪ್ಪ ತನ್ನ ಸಹೋದರನ ಹೆಸರಲ್ಲೂ ಆಸ್ತಿಪಾಸ್ತಿ ನೋಂದಣಿ ಮಾಡಿದ್ದು ತಪಾಸಣೆ ಕಾಲದಲ್ಲಿ ಎಸಿಬಿ ಗಮನಕ್ಕೆ ಬಂದಿದೆ. ಎಸಿಬಿ ಪರಿಶೀಲನೆ ವೇಳೆಯಲ್ಲಿ 512 ಗ್ರಾಂ. ಚಿನ್ನಾಭರಣ, ತೆಲಂಗಾಣ ಸಂಗೆರಾಡ್ಡಿಯಲ್ಲಿ ನಿವೇಶನ ದಾಖಲೆ ಪತ್ರ ಪತ್ತೆಯಾಗಿವೆ. ಇದಲ್ಲದೆ ಕಲಬುರಗಿ ನಗರದ ಬ್ಯಾಂಕ್‌ನಲ್ಲಿ ಲಾಕರ್‌, ಆಭರಣ, ಇಲ್ಲಿಯೂ ಆಸ್ತಿಪಾಸ್ತಿಯ ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಎಸಿಬಿ ಮೂಲಗಳು ಹೇಳಿವೆ.

ಕಲಬುರಗಿ ಮ್ಯಾನ್‌ಹೋಲ್‌ ದುರಂತ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಕಲಬುರಗಿ ಜಿಪಂ ಎಂಜಿನಿಯರಿಂಗ್‌, ಪಿಡಬ್ಲೂಡಿ ತಿಮಿಂಗಿಲು:

ಮಾಗಡಿ ಪಿಡಬ್ಲೂಡಿಯಲ್ಲಿ ಜೆಇ ಎಂದು ಕಳೆದ 2 ತಿಂಗಳ ಹಿಂದಷ್ಟೆವರ್ಗವಾಗಿ ಹೋಗಿರುವ ಚನ್ನಬಸಪ್ಪ ಹಿಂದೆ ಕಲಬುರಗಿಯ ಆಳಂದದಲ್ಲಿ ಪಿಡಬ್ಲೂಡಿಯಲ್ಲಿ ಕೆಲಸ ಮಾಡಿದವರು. ವರ್ಗಾವಣೆ ನಂತರ ಸತತ 3 ತಿಂಗಳ ರಜೆಯಲ್ಲಿದ್ದ ಇವರು ದಾಳಿ ಕಾಲದಲ್ಲಿ ಮನೆಯಲ್ಲಿದ್ದರು. ಕಲಬುರಗಿ ಜಿಪಂ ಎಂಜಿನಿಯರಿಂಗ್‌ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದ ಚನ್ನಬಸಪ್ಪ, ಹಿಂದೆ ಯಾದಗಿರಿಯಲ್ಲೂ ಕೆಲಸ ಮಾಡಿದವರು. ಈಗಷ್ಟೆ ವರ್ಗವಾಗಿ ಮಾಗಡಿಗೆ ಹೋಗಿದ್ದರು. ಚನ್ನಬಸಪ್ಪ ಆಳಂದದ ಜಿಪಂ ಎಂಜಿನಿಯರಿಂಗ್‌ ವಿಭಾಗದಲ್ಲಿ ಕೆಲಸ ಮಾಡಿದವರು. ಹೀಗಾಗಿ ಈ ದಾಳಿ ಜಿಪಂ ಎಂಜಿನಿಯರಿಂಗ್‌, ಪಿಡಬ್ಲೂಡಿ ಇಲಾಖೆಗಳಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಎಸಿಬಿ ಎಸ್ಪಿ ಮಹೇಶ ಮೆಘಣ್ಣನವರ್‌, ಡಿಎಸ್ಪಿ ವೀರೇಶ ಕರಡಿಗುಡ್ಡ ತಂಡದವರು ಈ ಭ್ರಷ್ಟಅಧಿಕಾರಿಯ ಅಕ್ರಮ ಆಸ್ತಿಪಾಸ್ತಿ ಜಾತಕ ಜಾಲಾಡಿದ್ದಾರೆ.

ಇಲ್ಲೆಲ್ಲಾ ಎಸಿಬಿ ದಾಳಿ:

1) ಕಲಬುರಗಿಯಲ್ಲಿರುವ ಹಳೇ ಜೇವರ್ಗಿ ರಸ್ತೆ ಓಂ ಅಪಾರ್ಟ್‌ಮೆಂಟ್‌ ಮನೆ
2) ಖುಷಿ ಡೆವಲಪರ್ಸ್‌ ಕಚೇರಿ
3) ಮಗದಮಪೂರ ಗ್ರಾಮದ ತೋಟದ ಮನೆ