ಅಭಿನವ ಶಿವಪುತ್ರ ಮಹಾಸ್ವಾಮಿಗಳು ಹೃದಯಾಘಾತದಿಂದ ನಿಧನ|ಶುಕ್ರವಾರ ಸಂಜೆ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳು| ಚಿಕಿತ್ಸೆ ಫಲಿಸದೇ ಲಿಂಗೈಕ್ಯರಾದ ಶಿವಪುತ್ರ ಮಹಾಸ್ವಾಮಿಗಳು|ಶ್ರೀಗಳ ನಿಧನಕ್ಕೆ ಗಣ್ಯರ  ಸಂತಾಪ|

ಹುಬ್ಬಳ್ಳಿ(ಆ.08): ಇಲ್ಲಿನ ಶಾಂತಾಶ್ರಮ ಹಾಗೂ ವಿಜಯಪುರದ ಷಣ್ಮುಖಾರೂಢ ಮಠದ ಅಭಿನವ ಶಿವಪುತ್ರ ಮಹಾಸ್ವಾಮಿಗಳು (64) ಹೃದಯಾಘಾತದಿಂದ ಶುಕ್ರವಾರ ರಾತ್ರಿ ಬೆಳಗಾವಿಯಲ್ಲಿ ಶಿವೈಕ್ಯರಾಗಿದ್ದಾರೆ. 

Add Asianetnews Kannada as a Preferred SourcegooglePreferred

ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ಶುಕ್ರವಾರ ಸಂಜೆ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆ ಫಲಿಸದೇ ಲಿಂಗೈಕ್ಯರಾದರು. ಕಳೆದ 2 ದಿನಗಳಿಂದ ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗೆ ಕೆಎಲ್‌ಇ ಆಸ್ಪತ್ರೆಗೆ ಕರೆತರಲಾಗಿದ್ದು, ಫಲಕಾರಿಯಾಗದೇ ಲಿಂಗೈಕ್ಯರಾದರು ಎಂದು ಶ್ರೀಮಠದ ಉತ್ತರಾಧಿಕಾರಿ ಅಭಿನವ ಸಿದ್ಧಾರೂಢ ಸ್ವಾಮೀಜಿ ತಿಳಿಸಿದ್ದಾರೆ.

ಧಾರವಾಡ: ಮತ್ತೆ ಆರ್ಭಟಿಸಿದ ವರುಣ, ಪ್ರವಾಹ ಭೀತಿ

ಬಳ್ಳಾರಿ ಜಿಲ್ಲೆಯ ಕೊಟ್ಟೂರು ಗ್ರಾಮದಲ್ಲಿ ಜನಿಸಿದ್ದರು. ಐದಾರು ವರ್ಷದ ಮಗುವಿದ್ದಾಗಲೇ ಶಾಂತಾ ಆಶ್ರಮಕ್ಕೆ ಆಗಮಿಸಿದ ಶ್ರೀಗಳು ಶಿವಪುತ್ರ ಮಹಾಸ್ವಾಮಿಗಳ ಶಿಷ್ಯರಾಗಿ ವೇದಾಂತದ ಸರ್ವ ಗ್ರಂಥಗಳನ್ನು ಅಧ್ಯಯನ ಮಾಡಿ 1985ರಲ್ಲಿ ಉಭಯ ಮಠಗಳ ಪೀಠಾಧಿಕಾರಿಗಳಾದರು. ಬಹುಭಾಷಾ ಪಂಡಿತರಾಗಿದ್ದರು.

ಇಂದು ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆ:

ಅಭಿನವ ಶಿವಪುತ್ರ ಮಹಾಸ್ವಾಮಿಗಳ ಸಮಾಧಿಕ್ರಿಯೆ ಇಂದು(ಶನಿವಾರ) ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಬಳಿಯ ಶಾಂತಾಶ್ರಮದ ಆವರಣದಲ್ಲಿ ಶ್ರೀಗಳ ಸಮಾಧಿಕ್ರಿಯೆ ನೆರವೇರಲಿದೆ.

ಸಂತಾಪ:

ಶ್ರೀಗಳ ನಿಧನಕ್ಕೆ ಇಂಚಲದ ಸಾಧು ಸಂಸ್ಥಾನಮಠದ ಶಿವಾನಂದ ಭಾರತೀ ಸ್ವಾಮಿಗಳು, ಬೀದರಿನ ಶಿವಕುಮಾರ ಸ್ವಾಮಿಗಳು, ಗದುಗಿನ ಜ. ತೋಂಟದ ಸಿದ್ಧರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತಿತರ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.