ನಗರದಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರೋಧಿಸಿದ್ದಾರೆ. 2022 ರಲ್ಲಿ ಟೋಯಿಂಗ್ ಮಾಫಿಯಾಗೆ ಸಿಲುಕಿದ ಜನ ಸಾಕಷ್ಟು ತೊಂದರೆ ಅನುಭವಿಸಿದ್ದರು ಎಂದು ಹೇಳಿದರು
ಬೆಂಗಳೂರು : ನಗರದಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರೋಧಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸರ್ಕಾರ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. 2022 ರಲ್ಲಿ ಟೋಯಿಂಗ್ ಮಾಫಿಯಾಗೆ ಸಿಲುಕಿದ ಜನ ಸಾಕಷ್ಟು ತೊಂದರೆ ಅನುಭವಿಸಿದ್ದರು. ಟೋಯಿಂಗ್ ಸಿಬ್ಬಂದಿ ಅಮಾನುಷವಾಗಿ ಕೆಲಸ ಮಾಡುತ್ತಿದ್ದರು. ನಾನು ಗೃಹ ಸಚಿವನಾಗಿದ್ದಾಗ ಸಾಕಷ್ಟು ಒತ್ತಡವನ್ನು ತಂದಿದ್ದರು. ಪೊಲೀಸ್ ಅಧಿಕಾರಿಗಳೇ ಪರೋಕ್ಷವಾಗಿ ಟೋಯಿಂಗ್ ಟೆಂಡರ್ ತೆಗೆದುಕೊಂಡಿದ್ದರು. ಸಿಬ್ಬಂದಿ ವರ್ತನೆಗಳನ್ನು ನೋಡಿ ನಾವು ಅದನ್ನು ರದ್ದು ಮಾಡಿದ್ದೆವು ಎಂದು ಹೇಳಿದರು.
ಟೋಯಿಂಗ್ ಮಾಫಿಯಾ
ಇದೀಗ ಈ ಟೋಯಿಂಗ್ ಮಾಫಿಯಾ ಮತ್ತೆ ತರಲು ಸರ್ಕಾರ ಮುಂದಾಗಿದೆ. ಇದರಿಂದ ಏನಾಗುತ್ತೆ ಎಂಬ ಕಲ್ಪನೆ ಮಾಡಿಕೊಂಡರೆ ಭಯವಾಗುತ್ತದೆ. ಟೋಯಿಂಗ್ ಹಣದಲ್ಲಿ ಕಂಟ್ರ್ಯಾಕ್ಟರ್ಗಳಿಗೆ ಹಾಗೂ ಪೊಲೀಸ್ ಠಾಣೆಗೆ ಲಕ್ಷಗಟ್ಟಲೆ ಮಾಮೂಲಿ ಹಣ ಕೊಡಬೇಕು ಎಂಬುದರ ಬಗ್ಗೆ ರಿಪೋರ್ಟ್ ಕೂಡ ಇತ್ತು. ಈಗ ಮತ್ತೆ ಅದೇ ರೀತಿಯ ಮಾಫಿಯಾ ಕೈಗೆ ಬೆಂಗಳೂರು ಜನರನ್ನು ಕೊಡೊದಕ್ಕೆ ಸರ್ಕಾರ ಹೊರಟಿದೆ ಎಂದರು.
ಈ ನೀತಿಯನ್ನು ಖಂಡಿಸುವೆ:
ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಇದರಿಂದ ಸರ್ಕಾರದವರು ದಂಡವನ್ನು ಆದಾಯ ಎಂದು ಭಾವಿಸಿದ್ದಾರೆ. ಇದು ನಾಗರಿಕರಿಗೆ ವಿಚಿತ್ರ ಕಿರಿಕಿರಿಯನ್ನು ಉಂಟು ಮಾಡಲಿದೆ. ಸರ್ಕಾರ ತನ್ನ ಆರ್ಥಿಕ ದುಸ್ಥಿತಿ ಸರಿಪಡಿಸಲು ಬೇರೆ ಮಾರ್ಗ ಹುಡುಕಿಕೊಳ್ಳಬೇಕು. ಅದನ್ನು ಬಿಟ್ಟು ಜನರಿಗೆ ಕಿರಿಕಿರಿ ಕೊಡಬಾರದು. ಈ ರೀತಿಯ ನೀತಿಯನ್ನು ನಾನು ಖಂಡಿಸುತ್ತೇನೆ. ಜನರಿಗೆ ಹಿಂಸೆ, ಅಪಮಾನ ಮಾಡಿ ಸರ್ಕಾರದ ಖಜಾನೆ ತುಂಬಿಸಿಕೊಳ್ಳುವ ಮಟ್ಟಕ್ಕೆ ಸರ್ಕಾರ ಇಳಿಯಬಾರದು ಎಂದು ತಿಳಿಸಿದ್ದಾರೆ.


