ವೈದ್ಯರ ತಂಡದ ವಿಶೇಷ ನಿಗಾ, ಮುತು​ವರ್ಜಿ ವಹಿ​ಸಿದ ಪರಿ​ಣಾಮ ಗುಣ​ಮು​ಖ| ಸೆ. 1ರಂದು ಕೊರೋನಾ ಬಾಧಿತರಾಗಿ 99 ವರ್ಷ ವಯಸ್ಸಿನ ಅಚ್ಯುತ್‌ ರಾವ್‌ ಹಾಗೂ ಅವರ ಮಗ 67 ವರ್ಷ ವಯಸ್ಸಿನ ರಂಗರಾವ್‌ ಟ್ರಾಮಾಕೇರ್‌ ಸೆಂಟರ್‌ಗೆ ದಾಖಲಾಗಿದ್ದರು| 

ಬಳ್ಳಾರಿ(ಸೆ.11): ಒಂದು ಹೆಜ್ಜೆ ಮುಂದೆ ಸಾಗಲು ಆಯಾಸ ಪಡುತ್ತಿದ್ದ, ನಿಲ್ಲಲು ಆಗದೇ ಪರಿತಪಿಸುತ್ತಿದ್ದ ಕೊರೋನಾ ಸೋಂಕಿತ 99 ವರ್ಷದ ವೃದ್ಧರೊಬ್ಬರು ಚೇತರಿಸಿಕೊಂಡು ಅತ್ಯಂತ ನಗುಮೊಗದೊಂದಿಗೆ ಯಾರ ಸಹಾಯವೂ ಇಲ್ಲದೇ ಸ್ವತಃ ಅವರೇ ನಡೆಯುತ್ತಾ ಮನೆಗೆ ತೆರಳಿದ್ದಾರೆ!

Add Asianetnews Kannada as a Preferred SourcegooglePreferred

ನಗರದ ಟ್ರಾಮಾಕೇರ್‌ ಸೆಂಟರ್‌ನ ಕೋವಿಡ್‌ ಆಸ್ಪತ್ರೆಯಲ್ಲಿ ಸೆ. 1ರಂದು ಕೊರೋನಾ ಬಾಧಿತರಾಗಿ ಸಿರುಗುಪ್ಪ ತಾಲೂಕಿನ 99 ವರ್ಷ ವಯಸ್ಸಿನ ಅಚ್ಯುತ್‌ ರಾವ್‌ ಹಾಗೂ ಅವರ ಮಗ 67 ವರ್ಷ ವಯಸ್ಸಿನ ರಂಗರಾವ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಹಗರಿಬೊಮ್ಮನಹಳ್ಳಿ: ಜೀವನದಲ್ಲಿ ಜಿಗುಪ್ಸೆ ವಿಷಸೇವಿಸಿ ಯುವಕ ಆತ್ಮಹತ್ಯೆ

ಕೊರೋನಾ ಸೋಂಕಿತರಾಗಿ ತೀವ್ರ ಆಯಾಸಪಡುತ್ತಿದ್ದ ವೃದ್ಧ ಅಚ್ಯುತ್‌ರಾವ್‌ ಕುಳಿತುಕೊಳ್ಳಲು ಆಗುತ್ತಿರಲಿಲ್ಲ ಮತ್ತು ಹಾಸಿಗೆಯಲ್ಲಿಯೇ ಮಲಗುತ್ತಿದ್ದರು. ಎದ್ದೇಳಿಸುವುದಕ್ಕೂ ಇನ್ನೊಬ್ಬರ ಸಹಾಯ ಬೇಕಿತ್ತು. ಟ್ರಾಮಾಕೇರ್‌ ಸೆಂಟರ್‌ನ ನೋಡಲ್‌ ಅಧಿಕಾರಿ ಡಾ. ಹರ್ಷ ಹಾಗೂ ನುರಿತ ತಜ್ಞ ವೈದ್ಯರ ತಂಡದ ವಿಶೇಷ ನಿಗಾ ಹಾಗೂ ಮುತುವರ್ಜಿ ವಹಿಸಿ ಅವರು ನೀಡಿದ ಚಿಕಿತ್ಸೆಯ ಪರಿಣಾಮ ಅಜ್ಜ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. ಅವರೊಂದಿಗೆ ಸೋಂಕು ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ 67 ವರ್ಷ ವಯಸ್ಸಿನ ಮಗನೂ ಗುಣಮುಖರಾಗಿ ತಂದೆಯೊಂದಿಗೆ ನಗುಮೊಗದಿಂದ ಮನೆಯತ್ತ ತೆರಳಿದ್ದಾರೆ.

ನೋಡಲ್‌ ಅಧಿಕಾರಿ ಡಾ. ಹರ್ಷ ಮಾತನಾಡಿ, ವೃದ್ಧ ಅಚ್ಯುತ್‌ರಾವ್‌ ಹಾಗೂ ಅವರ ಮಗ ಏಕಕಾಲಕ್ಕೆ ಸೋಂಕಿತರಾಗಿ ಟ್ರಾಮಾಕೇರ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ಅಜ್ಜ ತೀವ್ರ ಆಯಾಸ, ಸುಸ್ತು, ನಿತ್ರಾಣದಲ್ಲಿದ್ದರು. ನಿರಂತರ ಚಿಕಿತ್ಸೆ ನೀಡಿದ ಪರಿಣಾಮ ತನ್ನ ಮಗನೊಂದಿಗೆ ಅವರು ಗುಣಮುಖರಾಗಿ ಡಿಸ್ಚಾಜ್‌ರ್‍ ಆಗಿದ್ದಾರೆ ಎಂದರು.

ಗುಣಮುಖರಾಗಿ ಡಿಸ್ಚಾರ್ಜ್‌ ಆದ ವೃದ್ಧನ ಮಗ ರಂಗರಾವ್‌ (67) ಮಾತನಾಡಿ, ಕೊರೋನಾ ಬಂದ ತಕ್ಷಣ ತುಂಬಾ ಹೆದರಿಕೆ ಉಂಟಾಗಿತ್ತು. ತೀವ್ರ ಆತಂಕದಿಂದಲೇ ಇಲ್ಲಿಗೆ ಬಂದು ದಾಖಲಾದೆವು. ಆಸ್ಪತ್ರೆಯಲ್ಲಿ ವೈದ್ಯರು ಚೆನ್ನಾಗಿ ನೋಡಿಕೊಂಡರು ಮತ್ತು ಆತ್ಮಸ್ಥೈರ್ಯ ತುಂಬಿದರು. ಒಳ್ಳೆಯ ಚಿಕಿತ್ಸೆ ಮತ್ತು ಊಟ ಕೊಟ್ಟರು. ಅವರ ಋುಣ ನಾವೆಂದೂ ಮರೆಯುವುದಿಲ್ಲ ಎಂದರು.