ವರದಕ್ಷಿಣೆ ಕಿರುಕುಳ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 93 ವರ್ಷದ ಅಜ್ಜಿ ನಾಗಮ್ಮ ಅವರಿಗೆ 90 ದಿನಗಳ ಪರೋಲ್ ಮಂಜೂರಾಗಿದೆ. ಎದ್ದು ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಅಜ್ಜಿಯನ್ನು ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ. 

ಕಲಬುರಗಿ (ನ.30): ಸೊಸೆ ಹಾಕಿದ್ದ ವರದಕ್ಷಿಣೆ ಕಿರುಕುಳ ಕೇಸ್‌ನಲ್ಲಿ ಕಲಬುರಗಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 93 ವರ್ಷದ ಅಜ್ಜಿ ನಾಗಮ್ಮ ಗುರುವಾರ 90 ದಿನಗಳ ಪರೋಲ್‌ ಮೇಲೆ ಬಿಡುಗಡೆಯಾಗಿದ್ದಾರೆ. ಎದ್ದು ನಡೆಯಲು ಸಾಧ್ಯವಾಗದ ಅಜ್ಜಿಯನ್ನು ಕುಟುಂಬ ಸದಸ್ಯರು ಎತ್ತಿಕೊಂಡು ಕಾರ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಖೈದಿ ನಾಗಮ್ಮ ಅವರ ಬಿಡುಡೆಗೆ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ನವೆಂಬರ್‌ 16 ರಂದು ಕಲಬುರಗಿ ಜೈಲಿಗೆ ಭೇಟಿ ನೀಡಿದ್ದ ಉಪಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು 93 ವರ್ಷದ ಅಜ್ಜಿ ನಾಗಮ್ಮ ಶಿಕ್ಷೆ ಅನುಭವಿಸುತ್ತಿರುವುದನ್ನು ನೋಡಿದ್ದರು. ಬಳಿಕ ಜೈಲಿನ ಅಧಿಕಾರಿಗಳಲ್ಲಿ ವಿಚಾರಿಸಿದಾಗ, ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ ಜೀವಾವಧಿ ಅಜ್ಜಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ ಅನ್ನೋದು ಗೊತ್ತಾಗಿತ್ತು.

Add Asianetnews Kannada as a Preferred SourcegooglePreferred

ಸದ್ಯ ಕಳೆದ 11 ತಿಂಗಳಿಂದ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿದ್ದ ಖೈದಿ ನಾಗಮ್ಮ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿತ್ತು. ವಯೋಸಹಜ ಕಾರಣದಿಂದ ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿದ್ದರು. ಜೈಲಿನ ಮಹಿಳಾ ಸಿಬ್ಬಂದಿಗಳೇ ನಾಗಮ್ಮಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದನ್ನು ಉಪಲೋಕಾಯುಕ್ತ ಗಮನಿಸಿದ್ದರು. ಈಗ ಪರೋಲ್‌ನಲ್ಲಿ ಬಿಡುಗಡೆ ಆಗಿರುವ ಸುದ್ದಿ ತಿಳಿದು ಸಂತಸಪಟ್ಟಿದ್ದಾರೆ.

ಮಲಮೂತ್ರಕ್ಕೂ ಎದ್ದು ಹೋಗದ ಸ್ಥಿತಿಯಲ್ಲಿರುವ ನಾಗಮ್ಮಳನ್ನು ಜೈಲು ಸಿಬ್ಬಂದಿಗಳು ಖೈದಿಗಳಂತೆ ಕಾಣದೇ ಮಾತೃ ವಾತ್ಸಲ್ಯದಿಂದ ಆರೈಕೆ ಮಾಡುತ್ತಿರುವುದನ್ನು ನೋಡಿದ್ದ ಅವರು, ಈಕೆಯ ಶಿಕ್ಷೆ ರದ್ದತಿಯ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸೂಚಿಸಿದ್ದರು. ಆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲವಾದರೂ ಪೆರೋಲ್ ಮೇಲೆ ಅಜ್ಜಿಯನ್ನು ಜೈಲು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

ಸೊಸೆ ದಾಖಲಿಸಿದ್ದ ವರದಕ್ಷಿಣೆ ಕೇಸ್‌ನಲ್ಲಿ ಜೈಲಿನಲ್ಲಿರುವ 93 ವರ್ಷದ ಅಜ್ಜಿ, ಮರುಗಿದ ಉಪಲೋಕಾಯುಕ್ತ!

90 ದಿನಗಳ ಪೆರೋಲ್ ಮೇಲೆ ಸದ್ಯ ಅಜ್ಜಿಗೆ ಬಿಡುಗಡೆಯಾಗಿದ್ದಾರೆ. ಅಜ್ಜಿಯನ್ನು ಕುಟುಂಬಸ್ಥರು ಜೈಲಿನಿಂದ ಕರೆದುಕೊಂಡು ಹೋಗಿದ್ದಾರೆ. ನಡೆಯಲೂ ಆಗದ ಅಜ್ಜಿ ನಾಗಮ್ಮಳನ್ನು ಹೊತ್ತುಕೊಂಡು ವಾಹನದಲ್ಲಿ ಕುಟುಂಬಸ್ಥರು ಮಲಗಿಸಿದ್ದರು.

ಹೆಂಡ್ತಿಗೆ ಚಿನ್ನದ ಚೈನ್‌ ಖರೀದಿಸಿ ರಾತ್ರೋರಾತ್ರಿ ಕೋಟ್ಯಧಿಪತಿಯಾದ ಭಾರತೀಯ!

6 ಇತರ ಖೈದಿಗಳ ಬಿಡುಗಡೆ: ಇದರೊಂದಿಗೆ ಸನ್ನಡತೆ ಆಧಾರದ ಮೇಲೆ 6 ಜನ ಖೈದಿಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಕಲಬುರಗಿ ಸೆಂಟ್ರಲ್ ಜೈಲ್ ನಿಂದ 6 ಖೈದಿಗಳ ಬಿಡುಗಡೆಯಾಗಿದ್ದಾರೆ. 14 ವರ್ಷ ಶಿಕ್ಷೆ ಅನುಭವಿಸಿ ಉತ್ತಮ ನಡವಳಿಕೆ ತೋರಿದ ಖೈದಿಗಳನ್ನು ಬಿಡುಗಡೆ ಮಾಡಲಾಗಿದೆ. ರೋಡ್ ಕಿಣ್ಣಿ ಗ್ರಾಮದ ಶಿವಶಂಕರ ಗೋಗಿ, ಕರದಳ್ಳಿ ಗ್ರಾಮದ ಸಾಬಣ್ಣಾ ಬನಾರ, ದೇವದುರ್ಗದ ಖಾಜಾಸಾಬ್, ಯಾದಗಿರಿಯ ರವಿ ಹೊನ್ನಪ್ಪನವರ್, ಬಸವಕಲ್ಯಾಣದ ಜೈಭಾರತ ಹಾಗೂ ಕಲಬುರಗಿ ನಗರದ ಅಬಿದಾಬೇಗಂ ಬಿಡುಗಡೆಯಾಗಿದ್ದಾರೆ. ಕಲಬುರಗಿ ಸೆಂಟ್ರಲ್ ಜೈಲ್ ಅಧಿಕ್ಷಕಿ ಅನಿತಾ ಅವರಿಂದ ಪ್ರಮಾಣಪತ್ರ ಪಡೆದು ಖೈದಿಗಳು ಹೊರಹೋಗಿದ್ದಾರೆ.ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಂಡ ಖೈದಿಗಳ ಶುಭ ಹಾರೈಸಿ ಜೈಲು ಅಧಿಕಾರಿಗಳು ಬೀಳ್ಕೊಟ್ಟಿದ್ದಾರೆ.