Asianet Suvarna News Asianet Suvarna News

Covid Target on Youths: ಐದೇ ದಿನದಲ್ಲಿ 8,000 ಯುವಜನರಿಗೆ ಸೋಂಕು..!

*  ಈ ಬಾರಿಯೂ ಯುವಜನರಲ್ಲೇ ಕೊರೋನಾ ಸೋಂಕು ಹೆಚ್ಚಳ
*  20ರಿಂದ 39 ವರ್ಷದೊಳಗಿನವರೇ ಟಾರ್ಗೆಟ್‌
*  ನಿರ್ಲಕ್ಷ್ಯ, ಹೆಚ್ಚು ಓಡಾಟವೇ ಸೋಂಕು ಹೆಚ್ಚಳಕ್ಕೆ ಕಾರಣ
 

8000 Youths Corona Infected in Five Days in Bengaluru grg
Author
Bengaluru, First Published Jan 10, 2022, 4:50 AM IST

ಸಂಪತ್‌ ತರೀಕೆರೆ

ಬೆಂಗಳೂರು(ಜ.10):  ಕೊರೋನಾ(Coronavirus) ಮಹಾಮಾರಿ ಭಯಾನಕವಾಗಿ ವಿಸ್ತರಣೆಯಾಗುತ್ತಿದ್ದು ರಾಜಧಾನಿ ಬೆಂಗಳೂರಿನಲ್ಲಿ(Bengaluru) ಸೋಂಕು ಸಮುದಾಯ ಹಂತ ಪ್ರವೇಶವಾಗಿದೆ. ಯುವಜನರಲ್ಲೇ(Youths) ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ಪ್ರಸ್ತುತ ಬೆಂಗಳೂರಿನಲ್ಲಿ 32 ಸಾವಿರ ಸಕ್ರಿಯ ಪ್ರಕರಣಗಳು ಇದ್ದು, ಬಹುತೇಕ 20 ಸಾವಿರಕ್ಕೂ ಹೆಚ್ಚು ಮಂದಿ ಯುವಜನರೇ ಇದ್ದಾರೆ. ಆರೋಗ್ಯ ಇಲಾಖೆ(Department of Health) ಮಾಹಿತಿಯಂತೆ ನಿತ್ಯ ಸಾವಿರಕ್ಕೂ ಹೆಚ್ಚು ಮಂದಿ ಯುವಕರೇ ಸೋಂಕಿತರಾಗುತ್ತಿದ್ದಾರೆ.

ಜ.4ರಂದು 20ರಿಂದ 39 ವರ್ಷದೊಳಗಿನ 1048 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಜ.5ರಂದು 1918 ಮಂದಿ, ಜ.6ರಂದು 3200 ಜನರಲ್ಲಿ ಸೋಂಕು ದೃಢಪಟ್ಟಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಿರಿಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Deltacron: ಕೋವಿಡ್‌ನ ಮತ್ತೊಂದು ರೂಪಾಂತರಿ ಪತ್ತೆ: ಬಂತು ಹೊಸ ತಳಿ ಡೆಲ್ಟಾಕ್ರೋನ್‌..!

ಜ.1ರಿಂದ ಈವರೆಗೆ ನಿರಂತರವಾಗಿ ಸೋಂಕು ಏರುಗತಿಯಲ್ಲೇ ಸಾಗಿದೆ. ಡಿ.31ರಂದು 810, ಜ.1ಕ್ಕೆ 923, ಜ.2ಕ್ಕೆ 1041, ಜ.3ಕ್ಕೆ 2053, ಜ.4ರಂದು 3605, ಜ.5ಕ್ಕೆ 4323, ಜ.6ರಂದು 6812 ಮತ್ತು ಜ.7ಕ್ಕೆ 7113 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ವಿಪರಾರ‍ಯಸವೆಂದರೆ ಎರಡನೇ ಅಲೆಯಂತೆ ಈ ಬಾರಿಯೂ ಯುವಕರೇ ಹೆಚ್ಚು ಸೋಂಕಿತರಾಗುತ್ತಿದ್ದಾರೆ. ಕೇವಲ ಐದು ದಿನಗಳಲ್ಲಿ ಬರೋಬ್ಬರಿ 8 ಸಾವಿರ ಯುವಜನರಲ್ಲಿ ಸೋಂಕು ಪತ್ತೆಯಾಗಿದೆ. ಯಾವುದೇ ಅನಾರೋಗ್ಯ ಹಿನ್ನೆಲೆ ಇಲ್ಲದಿದ್ದರೂ ಸೋಂಕಿತರಾಗುತ್ತಿರುವುದು ಆರೋಗ್ಯಾಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ಸೋಂಕು ಹೆಚ್ಚಲು ಕಾರಣವೇನು?

ಇತರೆ ವಯೋಮಾನದವರಿಗಿಂತ ಹೆಚ್ಚು ಸಮುದಾಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಉದ್ಯೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಸೋಂಕು ಶೀಘ್ರದಲ್ಲೇ ಹರಡುತ್ತಿದೆ. ಎರಡನೇ ಅಲೆಯಲ್ಲಿಯೂ ಯುವಜನರೇ ಟಾರ್ಗೆಟ್‌ ಆಗಿದ್ದು ಹೆಚ್ಚು ಮಂದಿ ಸೋಂಕಿತರಾಗಿದ್ದರು. ಮೊದಲ ಅಲೆಯಲ್ಲಿ ಸೋಂಕಿನ ಬಗ್ಗೆ ಹೆಚ್ಚಿನ ಭಯವಿತ್ತು. ಇದರಿಂದ ಯುವಜನರಲ್ಲಿ ಸೋಂಕು ತುಸು ಕಡಿಮೆ ಇತ್ತು. ಜೊತೆಗೆ ಬಹುತೇಕ ಕಂಪನಿಗಳು ವರ್ಕ್‌ ಫ್ರಂ ಹೋಂಗೆ(Work From Home)ಹೆಚ್ಚಿನ ಆದ್ಯತೆ ನೀಡಿದ್ದರಿಂದ ಸೋಂಕು ಹೆಚ್ಚಾಗಿ ಬಾಧಿಸಿರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಮೊದಲಿದ್ದ ಭಯ ಕಡಿಮೆಯಾಗಿತ್ತು. ವರ್ಕ್‌ ಫ್ರಂ ಹೋಂ ಇದ್ದರೂ ಕೂಡ ನಿರ್ಲಕ್ಷ್ಯಧೋರಣೆಯಿಂದ ಯುವಜನರಲ್ಲಿ ಸೋಂಕು ಮಿತಿಮೀರಲು ಕಾರಣವಾಗಿತ್ತು.

Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, 12,000 ಹೊಸ ಕೇಸ್ ಪತ್ತೆ

ಅದೇ ರೀತಿ ಈ ಬಾರಿಯೂ ಯುವಜನರ ನಿರ್ಲಕ್ಷ್ಯದಿಂದ ಈ ವರ್ಗದ ಜನರೇ ಹೆಚ್ಚು ಬಾಧಿತರಾಗುತ್ತಿದ್ದಾರೆ. ಈಗಾಗಲೇ ಸೋಂಕು ಸಮುದಾಯವನ್ನು ಪ್ರವೇಶಿಸಿದೆ. ಇದರಿಂದ ಯಾರ ಸಂಪರ್ಕವಿಲ್ಲದಿದ್ದರೂ ಸೋಂಕು ತಗಲುವ ಸಾಧ್ಯತೆ ಇದೆ. ಮಕ್ಕಳು ಮತ್ತು ಹಿರಿಯ ನಾಗರಿಕರು ಹೊರಗಡೆ ಓಡಾಡುವುದು ಕಡಿಮೆ. ಆದರೆ ಎಲ್ಲದಕ್ಕೂ ಯುವಜನರೇ ಓಡಾಡುವುದು ಜಾಸ್ತಿ. ಹಾಗೆಯೇ ಕೋವಿಡ್‌ ಪರೀಕ್ಷೆಗೆ(Covid Test) ಒಳಗಾಗುವವರಲ್ಲಿಯೂ ಇವರೇ ಜಾಸ್ತಿ. ಆದ್ದರಿಂದ ಯುವಜನತೆಯೆ ಸೋಂಕಿಗೆ ಜಾಸ್ತಿ ಒಳಗಾಗುತ್ತಿದೆ ಎಂದು ಬಿಬಿಎಂಪಿ(BBMP) ಮುಖ್ಯ ಆರೋಗ್ಯಾಧಿಕಾರಿ ಬಾಲಸುಂದರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಗುಣಮುಖರ ಸಂಖ್ಯೆ ಇಳಿಕೆ

ನಗರದಲ್ಲಿ ಕೇವಲ ಒಂದೇ ವಾರದಲ್ಲಿ 26,681 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ ಸೋಂಕಿತರ ಯಾವುದೇ ಪ್ರಾಥಮಿಕ ಸಂಪರ್ಕ ಇಲ್ಲದಿದ್ದರೂ ಬಹುತೇಕರಿಗೆ ಕೊರೋನಾ ಸೋಂಕು ತಗುಲುತ್ತಿರುವುದು ದೃಢಪಟ್ಟಿದೆ. ಜ.1ರಂದು ಪಾಸಿಟಿವಿಟಿ ದರ ಕೇವಲ ಶೇ.2.19 ಇದ್ದದ್ದು ಆರು ದಿನಗಳಲ್ಲಿ ಶೇ.7.58ಕ್ಕೆ ಏರಿಕೆಯಾಗಿದೆ. ಆದರೆ, ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಮಾತ್ರ ಇಳಿಮುಖವಾಗಿದ್ದು ಎಂಟು ದಿನಗಳಲ್ಲಿ 1467 ಮಂದಿ ಮಾತ್ರ ಬಿಡುಗಡೆ ಹೊಂದಿದ್ದಾರೆ.
 

Follow Us:
Download App:
  • android
  • ios