* ಇಬ್ಬರು ಬುದ್ಧಿಮಾಂದ್ಯ ಮಕ್ಕಳ ಜತನದಲ್ಲೇ ಜೀವನ ಕಳೆಯಿತು* ಮನೆ ಬಿದ್ದ ಮೇಲೆ ಪರಿಹಾರವೂ ಇಲ್ಲ, ಗ್ರಾಪಂ ಸೂರು ಕಲ್ಪಿಸಿಲ್ಲ* ಜೀವನ ಸಾಗಿಸಲು ಕಷ್ಟ ಪಡುತ್ತಿರುವ ವೃದ್ಧೆ 

ಶಿವಮೂರ್ತಿ ಇಟಗಿ

Add Asianetnews Kannada as a Preferred SourcegooglePreferred

ಯಲಬುರ್ಗಾ(ಆ.09): ತಾಲೂಕಿನ ಬೀರಲದಿನ್ನಿ ಗ್ರಾಮದ 76 ವರ್ಷದ ವೃದ್ಧೆಯೊಬ್ಬರು ನಿರಂತರ ಮಳೆಗೆ ಮನೆ ಕುಸಿದುಬಿದ್ದು, ತನ್ನ ಎರಡು ಬುದ್ಧಿಮಾಂದ್ಯ ಮಕ್ಕಳೊಂದಿಗೆ ಬೀದಿಪಾಲಾಗಿದ್ದಾರೆ. ಲಕ್ಷ್ಮವ್ವ ಹೊನ್ನನಗೌಡ ಮಾಲಿಪಾಟೀಲ್‌ ಎಂಬುವರು ತಮ್ಮ ಇಬ್ಬರು ಬುದ್ಧಿಮಾಂದ್ಯ ಗಂಡು ಮಕ್ಕಳೊಂದಿಗೆ ಜೀವನ ಸಾಗಿಸಲು ಕಷ್ಟಪಡುತಿದ್ದಾಳೆ. ಸರ್ಕಾರದಿಂದ ಇವರಿಗೆ ಈ ವರೆಗೂ ಯಾವುದೇ ಮಾಸಾಶನವೂ ಮಂಜೂರು ಆಗಿಲ್ಲ. ಇದ್ದ ಸೂರು ಬಿದ್ದು ಹೋದ ಮೇಲೆ ಹೊಲದಲ್ಲಿ ಜೋಪಡಿ ಹಾಕಿಕೊಂಡು ಬದುಕು ಸಾಗಿಸುತ್ತಿದ್ದಾಳೆ. ಬೇವಿನ ಬೀಜ ಆಯ್ದು ಬಂದ ಹಣದಿಂದ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾಳೆ.

ಮನೆಯಲ್ಲಿ ಮೂರು ಜನ ಗಂಡು ಮಕ್ಕಳು, ಹಿರಿಯ ಮಗ ಮದುವೆ ಮಾಡಿಕೊಂಡು ಪ್ರತ್ಯೇಕವಾಗಿ ವಾಸವಾಗಿದ್ದಾನೆ. ಇವರತ್ತ ತಿರುಗಿ ನೋಡುವುದಿಲ್ಲ. ಬೀರಲದಿನ್ನಿಯಲ್ಲಿದ್ದ ಮನೆ ಎರಡ್ಮೂರು ವರ್ಷಗಳ ಹಿಂದೆ ನಿರಂತರ ಮಳೆಗೆ ಬಿದ್ದ ಮೇಲೆ ಸರ್ಕಾರದಿಂದ ನಯಾ ಪೈಸೆ ಪರಿಹಾರ ಬಂದಿಲ್ಲ. ಜತೆಗೆ ಇದ್ದ ರೇಶನ್‌ಕಾರ್ಡ್‌ ಅದೇ ಮನೆಯಲ್ಲಿ ಮಣ್ಣು ಪಾಲಾಗಿದೆ. ಹೀಗಾಗಿ ಅವರಿಗೆ ಪ್ರತಿ ತಿಂಗಳು ನೀಡುವ ಪಡಿತರ ಧಾನ್ಯ ಸಹ ಬರುತ್ತಿಲ್ಲ.

ಸಂಧ್ಯಾ ಸುರಕ್ಷಾ, ದಿವ್ಯಾಂಗ,ವಿಧವಾ ವೇತನ ಹೆಚ್ಚಳ: ಅಧಿಕೃತ ಆದೇಶ ಹೊರಡಿಸಿದ ಸಿಎಂ

ಮನೆ ಚಾವಣಿ ಕುಸಿದ ನಂತರ ಶೌಚಾಲಯದಲ್ಲಿ ಬಟ್ಟೆಬರೆಗಳನ್ನು ಇಟ್ಟು ಕಾಲ ಕಳೆದಿದ್ದಾಳೆ. ಬಳಿಕ ಚಪ್ಪರ ಹಾಕಿಕೊಂಡಿದ್ದಾರೆ. ಇದೆಲ್ಲ ನೋಡಿಯೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳು, ತಹಸೀಲ್ದಾರ್‌ರು, ಜಿಲ್ಲಾ ಹಿರಿಯ ನಾಗರಿಕ ಮತ್ತು ಅಂಗವಿಕಲ ಇಲಾಖೆಯವರು ಈ ವೃದ್ಧೆಯನ್ನು ಕಣ್ಣೆತ್ತಿ ನೋಡಿಲ್ಲ.

ನಾನು ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಆ ಕುಟುಂಬದ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಈಗ ಯಾವುದೇ ರೀತಿಯ ಆಶ್ರಯ ಮನೆಗಳು ಮಂಜೂರಾಗಿರುವುದಿಲ್ಲ. ಮಂಜೂರಾದ ನಂತರ ನಿರ್ಮಿಸಿ ಕೊಡಲಾಗುವುದು ಎಂದು ಹಿರೇಅರಳಿಹಳ್ಳಿ ಪಿಡಿಒ ಸೋಮಪ್ಪ ಪೂಜಾರ ತಿಳಿಸಿದ್ದಾರೆ.