Asianet Suvarna News Asianet Suvarna News

ಗಜೇಂದ್ರಗಡ: ಹೊಲದಲ್ಲಿ 600 ಕ್ವಿಂಟಲ್‌ ‘ಅನ್ನಭಾಗ್ಯ’ ಅಕ್ಕಿ ವಶ..!

* ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಅನ್ನಭಾಗ್ಯ ಅಕ್ಕಿ ವಶ
* ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದ ಘಟನೆ
* ಅಕ್ರಮಕ್ಕೆ ಬೀಳದ ಕಡಿವಾಣ

600 Quintal Anna Bhagya Rice Found at Gajendragad in Gadag grg
Author
Bengaluru, First Published Jun 12, 2021, 1:54 PM IST

ಗಜೇಂದ್ರಗಡ(ಜೂ.12): ಪಟ್ಟಣದ ಕಾಲಕಾಲೇಶ್ವರ ರಸ್ತೆಯ ಹೊಲವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಪಾರ ಪ್ರಮಾಣದ ಅನ್ನಭಾಗ್ಯ ಅಕ್ಕಿಯನ್ನು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ಉಪನಿರ್ದೇಶಕ ರವಿಕುಮಾರ ಎಂ. ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ.

ಪಟ್ಟಣದ ಗುಡ್ಡದ ಹಿಂಬದಿಯ ಹೊಲವೊಂದರಲ್ಲಿ ಅಂದಾಜು 600 ಕ್ವಿಂಟಲ್‌ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಗೋಡಾನ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಅಕ್ಕಿ ವಶಪಡಿಸಿಕೊಂಡು ಅಕ್ರಮದಲ್ಲಿ ಭಾಗಿಯಾದವರ ಪತ್ತೆಗೆ ಬಲೆ ಬೀಸಿದ್ದಾರೆ. ಜೊತೆಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪಾಲಿನ ಸಂಜೀವಿನಿ ಆಗಿರುವ ಪಡಿತರ ಅಕ್ಕಿಯನ್ನು ಕಳೆದ ಕೆಲ ತಿಂಗಳ ಹಿಂದೆಯೂ ಅಕ್ರಮವಾಗಿ ಮಾರಾಟಕ್ಕೆ ಯತ್ನಿಸಿದ ಸಂದರ್ಭದಲ್ಲಿ ತಾಲೂಕು ಆಹಾರ ನಿರೀಕ್ಷಕರು ದಾಳಿ ನಡೆಸಿ ಲಾರಿ ಸಹಿತ ವಶಪಡಿಸಿಕೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಈಗ ಮತ್ತೊಮ್ಮೆ ಬೃಹತ್‌ ಪ್ರಮಾಣದಲ್ಲಿ ಅಕ್ರಮ ದಾಸ್ತಾನು ಮಾಡಿದ್ದು, ಅನ್ನಭಾಗ್ಯ ಅಕ್ಕಿಯು ಕಾಳಸಂತೆಗೆ ಪಟ್ಟಣದಿಂದಲೇ ರವಾನೆಯಾಗಿತ್ತಿದೆಯಾ? ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

3ನೇ ಅಲೆ ದೊಡ್ಡ ಸವಾಲಾಗಿ ಬರ್ತಿದೆ, ಬಿಜೆಪಿಗೆ ಅದರ ಪರಿವೆಯೇ ಇಲ್ಲ: HK ಪಾಟೀಲ

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪುವ ಬದಲು ಅಕ್ರಮವಾಗಿ ಕಾಳಸಂತೆ ಸೇರುತ್ತಿದೆ. ಇನ್ನು ಇತ್ತ ಪಟ್ಟಣದಲ್ಲಿ ಪದೇ ಪದೇ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟದ ಘಟನೆಗಳು ಮರುಕಳಿಸುತ್ತಿವೆ. ಆದರೆ ಅಕ್ರಮಕ್ಕೆ ಮಾತ್ರ ಕಡಿವಾಣ ಬಿಳುತ್ತಿಲ್ಲ. ಬದಲಾಗಿ ಕಳೆದ ಬಾರಿಗಿಂತ ಹೆಚ್ಚಿನ ಮಟ್ಟದಲ್ಲಿ ಹಾಗೂ ಖುಲ್ಲಂಖುಲ್ಲಾ ಎನ್ನುವಂತೆ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ ಘಟನೆಗಳು ಬೆಳಕಿಗೆ ಬಂದಿರುವುದು ತಾಲೂಕಾಡಳಿತ ಮತ್ತು ಆಹಾರ ಇಲಾಖೆಯ ವಿಫಲತೆಗೆ ಸಾಕ್ಷಿಯಾಗಿದೆ ಎಂದು ಜನರು ಕಿಡಿಕಾರುತ್ತಿದ್ದಾರೆ. ತಹಸೀಲ್ದಾರ್‌ ಅಶೋಕ ಕಲಘಟಗಿ, ತಾಲೂಕಾ ಆಹಾರ ನಿರೀಕ್ಷಕ ಮಂಜುನಾಥ ತಳ್ಳಿಹಾಳ, ಪಿಎಸ್‌ಐ ಗುರುಶಾಂತ ದಾಶ್ಯಾಳ ಇದ್ದರು.

ಗಜೇಂದ್ರಗಡದಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ದಾಸ್ತಾನು ಮಾಡಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗುತ್ತಿದೆ. ಇದರ ಹಿಂದಿನ ಜಾಡನ್ನು ಪತ್ತೆಹಚ್ಚಿ ತಪ್ಪಿತ್ತಸ್ಥರನ್ನು ಶಿಕ್ಷಗೆ ಗುರಿಪಡಿಸುತ್ತೇವೆ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಜಿಲ್ಲಾ ಉಪನಿರ್ದೇಶಕ ರವಿಕುಮಾರ ಎಂ. ತಿಳಿಸಿದ್ದಾರೆ.  
 

Follow Us:
Download App:
  • android
  • ios