Asianet Suvarna News Asianet Suvarna News

ರೈತರಿಗೆ ಶೇ.50 ಸಬ್ಸಿಡಿಯಲ್ಲಿ ಹೈನೋದ್ಯಮ ಪರಿಕರ: ಶಾಸಕ ಎಚ್.ಡಿ.ರೇವಣ್ಣ

ಮುಂದಿನ 5 ವರ್ಷಗಳಲ್ಲಿ ಜಿಲ್ಲೆಯ 4 ಸಾವಿರ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರೂ ಆದ ಶಾಸಕ ಎಚ್.ಡಿ.ರೇವಣ್ಣ ಹೇಳಿದರು. 

50 Percent Subsidy for Farmers in Animal Husbandry Equipment Sayd HD Revanna gvd
Author
First Published Nov 15, 2023, 6:43 AM IST

ಚನ್ನರಾಯಪಟ್ಟಣ (ನ.15): ಮುಂದಿನ 5 ವರ್ಷಗಳಲ್ಲಿ ಜಿಲ್ಲೆಯ 4 ಸಾವಿರ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರೂ ಆದ ಶಾಸಕ ಎಚ್.ಡಿ.ರೇವಣ್ಣ ಹೇಳಿದರು. ಪಟ್ಟಣದ ಹೊರವಲಯದ ಶೆಟ್ಟಿಹಳ್ಳಿ ಬಳಿ ಇರುವ ಹಾಲು ಶಿಥಿಲೀಕರಣ ಕೇಂದ್ರದಲ್ಲಿ ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಶೇ.50ರಷ್ಟು ಸಹಾಯಧನದಲ್ಲಿ ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ಮ್ಯಾಟ್‌ಗಳನ್ನು ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಲ್ಲಾ ಹಳ್ಳಿಗಳಲ್ಲಿ ಡೇರಿ ಆರಂಭಿಸುವುದರಿಂದ ನಿತ್ಯ 25 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಜೊತೆಗೆ ರೈತರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹಾಸನದ ಕೌಶಿಕದ ಹತ್ತಿರ 60 ಎಕರೆ ಪ್ರದೇಶದಲ್ಲಿ ಅಂದಾಜು 540 ಕೋಟಿ ವೆಚ್ಚದಲ್ಲಿ ಮೆಗಾ ಡೇರಿಯ ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಏಪ್ರಿಲ್‌ನಲ್ಲಿ ಕಾಮಗಾರಿ ಪೂರ್ಣಗೊಂಡು ಡೇರಿ ಕಾರ್ಯಾರಂಭ ಮಾಡಲಿದೆ. ಅದೇ ರೀತಿ ತಾಲೂಕಿನ ಶೆಟ್ಟಿಹಳ್ಳಿ ಬಳಿ ಇರುವ ಹಾಲು ಶಿಥಲೀಕರಣ ಘಟಕದ ಬಳಿ ಉತ್ಪನ್ನ ಘಟಕ ಆರಂಭಿಸಲಾಗುವುದು. ಈಗಾಗಲೇ 7 ಸಾವಿರ ರಬ್ಬರ್ ಮ್ಯಾಟ್‌ಗಳನ್ನು ಹಾಲು ಉತ್ಪಾದಕರಿಗೆ ವಿತರಿಸಲಾಗಿದ್ದು, ಈಗ 3 ಸಾವಿರ ವಿತರಿಸಲಾಗಿದೆ. 

ಜೆಡಿಎಸ್-ಬಿಜೆಪಿ ನಿಜವಾದ ಬಂಡವಾಳ ಶೀಘ್ರ ಹೊರಬರಲಿದೆ: ಸಚಿವ ಆರ್.ಬಿ.ತಿಮ್ಮಾಪುರ

ಮುಂಬರುವ ದಿನಗಳಲ್ಲಿ ಪುನಃ 6 ಸಾವಿರ ಮ್ಯಾಟ್‌ಗಳನ್ನು ರೈತರಿಗೆ ನೀಡಲಾಗುವುದು ಎಂದರು. ಕೊಟ್ಟಿಗೆಯಲ್ಲಿ ಮ್ಯಾಟ್‌ಗಳನ್ನು ನೆಲಕ್ಕೆ ಹಾಸುವುದರಿಂದ ರಾಸುಗಳು ಕಾಲು ಜಾರಿಬೀಳುವುದು ತಪ್ಪಲಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರಾಗಿ, ಭತ್ತ, ಮುಸುಕಿನ ಜೋಳ ಬೆಳೆ ನಷ್ಟವಾಗಿದೆ. ಆದರೆ ಸರ್ಕಾರ ಇದುವರೆಗೆ ರೈತರಿಗೆ ಬೆಳೆ ಪರಿಹಾರ ನೀಡಿಲ್ಲ. ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಕದಬಹಳ್ಳಿಯಿಂದ ಹಾಸನದವರೆಗೆ 24 ಫ್ಲೈ ಓವರ್‌ಗಳನ್ನು ನಿರ್ಮಿಸಲಾಗಿದೆ. ಪುನಃ 12 ಫ್ಲೈ ಓವರ್, 3 ಅಂಡರ್‌ಪಾಸ್ ನಿರ್ಮಾಣ ಮಾಡುವಂತೆ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಾಗಿದೆ. 

ಶಾಂತಿಗ್ರಾಮದಿಂದ ಹಿರಿಯೂರು ಪಟ್ಟಣದವರೆಗೆ 147 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಿಸಲಾಗುವುದು. ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು. ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಹೈನುಗಾರಿಕೆಯಲ್ಲಿ ತಾಲೂಕು ಗಣನೀಯ ಸಾಧನೆ ಮಾಡಿದೆ. 35 ಡೇರಿಗಳಿದ್ದ ತಾಲೂಕಿನಲ್ಲಿ ಈಗ ಅದರ ಸಂಖ್ಯೆ 339ಕ್ಕೆ ಏರಿದೆ. ಇದರಲ್ಲಿ 185 ಮಹಿಳಾ ಸಹಕಾರ ಸಂಘಗಳು ಇವೆ. ಮಹಿಳಾ ಸಹಕಾರ ಸಂಘಗಳಿಗೆ ಸ್ಟೆಪ್ ಯೋಜನೆಯಡಿ ಕಟ್ಟಡ ನಿರ್ಮಾಣ, ತರಬೇತಿ ನೀಡುವುದು, ಹಣಕಾಸು ನೆರವು ಒದಗಿಸಲಾಗುತ್ತದೆ. 

ತಾಲೂಕಿನಲ್ಲಿ ನಿತ್ಯ 2.55 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಪ್ರತಿ ತಿಂಗಳು 30 ಕೋಟಿ ಬಟವಾಡೆ ಮಾಡಲಾಗುತ್ತಿದೆ. 145 ಸಂಘಗಳಿಗೆ ಸ್ವಂತ ಕಟ್ಟಡ ಇದೆ. ಕಟ್ಟಡ ನಿರ್ಮಿಸಲು ಹಾಸನ ಹಾಲು ಒಕ್ಕೂಟ 3 ಲಕ್ಷ, ಕೆಎಂಎಫ್ 3.50 ಲಕ್ಷ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ 2ಲಕ್ಷ ಸಹಾಯಧನ ನೀಡುತ್ತದೆ ಎಂದು ಹೇಳಿದರು. ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ವ್ಯವಸ್ಥಾಪಕ ನಿರ್ದೇಶಕ ಮಹೇಶ್, ವ್ಯವಸ್ಥಾಪಕ ರೂಪೇಶ್, ನಿರ್ದೇಶಕರಾದ ನಾರಾಯಣಗೌಡ, ಚನ್ನೇಗೌಡ, ಬಸವರಾಜು, ವಿಮಲಾ, ವಿ.ಎನ್. ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಂ. ನಂಜಪ್ಪ ಇತರರು ಇದ್ದರು.

ಕಾಂಗ್ರೆಸ್‌ಗೆ ತನ್ನ ಶಾಸಕರನ್ನೇ ಸಮಾಧಾನ ಮಾಡಲಾಗುತ್ತಿಲ್ಲ: ಸಿ.ಟಿ.ರವಿ ವ್ಯಂಗ್ಯ

ಉಪ ವಿಭಾಗಾಧಿಕಾರಿಯ ಕೈಗೆ ಹೊಡೆದಿದ್ದು ಸರಿಯಲ್ಲ: ಜಿಲ್ಲಾಧಿಕಾರಿ ಸಕಲೇಶಪುರ ಉಪವಿಭಾಗಾಧಿಕಾರಿಯ ಕೈಗೆ ಹೊಡೆದಿದ್ದು ಸರಿಯಲ್ಲ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಜಿಲ್ಲಾಧಿಕಾರಿ ಬಗ್ಗೆ ನನಗೆ ಗೌರವ ಇದೆ. ಆದರೆ ಆ ಹುದ್ದೆಯ ಘನತೆ ಹಾಳು ಮಾಡಬಾರದು. ಅಂದಾಜು 25 ಸಾವಿರ ವಿಶೇಷ ಗಣ್ಯರ ಪಾಸ್‌ಗಳನ್ನು ವಿತರಿಸಲಾಗಿದೆ. ಹಾಸನಾಂಬೆಯ ಉತ್ಸವದ ಯಶಸ್ಸಿಗೆ ಎಸ್ಪಿ, ಉಪವಿಭಾಗಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಹಗಲುರಾತ್ರಿ ದುಡಿಯುತ್ತಿದ್ದಾರೆ. ವಿದ್ಯುತ್ ಶಾಕ್‌ನಿಂದ ಭಕ್ತರ ಪ್ರಾಣಕ್ಕೆ ಅನಾಹುತವಾಗಿದ್ದರೆ ಯಾರು ಹೊಣೆ? ವಿದ್ಯುತ್ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಬೇಕು. ವಿದ್ಯುತ್ ಶಾಕ್ ಬಗ್ಗೆ ಮೂರು ದಿನಗಳ ಮೊದಲೇ ತಿಳಿದಿದ್ದರೂ ಕಣ್ಮುಚ್ಚಿ ಕುಳಿತಿದ್ದು ಏಕೆ? ಎಂದು ಶಾಸಕ ಎಚ್.ಡಿ. ರೇವಣ್ಣ ಪ್ರಶ್ನಿಸಿದರು.

Follow Us:
Download App:
  • android
  • ios