ಹುಬ್ಬಳ್ಳಿ ಗಣಪನಿಗೆ 3 ಸಾವಿರ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಧಾರವಾಡ-ಹುಬ್ಬಳ್ಳಿ ಪೊಲೀಸ್ರು ಸೇರಿದಂತೆ ಹೊರ ಜಿಲ್ಲೆಯ ಪೊಲೀಸರನ್ನು ನಿಯೋಜಿಸಲಾಗಿದೆ.

ಹುಬ್ಬಳ್ಳಿ, (ಸೆಪ್ಟೆಂಬರ್.09): ಕರ್ನಾಟಕದಲ್ಲೇ ಅತ್ಯಂತ ವೈಭವದ ಗಣೇಶೋತ್ಸವ ಆಚರಿಸುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ, ವಿಘ್ನನಿವಾರಕನಿಗೆ ಅದ್ದೂರಿಯಾಗಿ ವಿದಾಯ ಹೇಳಲು ಸಜ್ಜಾಗಿದ್ದು, ಇಂದು(ಸೆ.09) ಸಂಜೆಯಿಂದ ವಿಸರ್ಜನೆಯು ಭವ್ಯ ಮೆರವಣಿಗೆ ನಡೆದಿದೆ.

Add Asianetnews Kannada as a Preferred SourcegooglePreferred

ಈ ಹಿನ್ನೆಲೆಯಲ್ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಕೂಡ ಅವಳಿನಗರದಲ್ಲಿ ಸಾಕಷ್ಟು ಬಿಗಿ ಬಂದೋಬಸ್ತ್ ಕೈಗೊಂಡಿದೆ. ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಅವಳಿನಗರ ವ್ಯಾಪ್ತಿಯಲ್ಲಿ ಒಟ್ಟಾರೆ 2 ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ. ಇದರ ಜೊತೆಗೆ ಈ ವರ್ಷ 1 ಸಾವಿರಕ್ಕೂ ಹೆಚ್ಚು ಹೊರ ಜಿಲೆಯ ಪೊಲೀಸರನ್ನು ಕರೆಸಲಾಗಿದೆ. 

ಇಂದು ಹಿಂದೂ ಗಣಪತಿ ಮೆರವಣಿಗೆ: ಕೇಸರಿಮಯವಾದ ಶಿವಮೊಗ್ಗ, ಪೊಲೀಸ್‌ ಸರ್ಪಗಾವಲು..!

1 ಆರ್ ಎ ಎಫ್ ಪಡೆ, 410 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 400 ಹೋಮ್ ಗಾರ್ಡ್ ಕರೆಸಲಾಗುತ್ತಿದೆ. ಅವಳಿನಗರದಲ್ಲಿ 2 ಕೆ ಎಸ್ ಆರ್ ಪಿ ಪಡೆ ಇದ್ದು, ಒಟ್ಟಾರೆ 9 ಕೆ ಎಸ್ ಆರ್ ಪಿ ಪಡೆ, 6 ಸಿಎಆರ್ ಪಡೆ ಕಾರ್ಯ ನಿರ್ವಹಿಸಲಿವೆ. ಸದ್ಯ 3 ಡಿಸಿಪಿ, 4 ಎಸಿಪಿ ಹಾಗೂ 25 ಇನ್ಸಪೆಕ್ಟರ್ ಸೇರಿ ಹೊರ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು, ಡಿಸಿಪಿ,ಎಸಿಪಿ, ಪಿಎಸ್ಐಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಅವಳಿನಗರದಲ್ಲಿ ಗಣೇಶೋತ್ಸವ ವಿಸರ್ಜನೆಗೆ ಇಂದಿರಾ ಗಾಜಿನ‌ಮನೆಯ ಹತ್ತಿರದ ಭಾವಿ, ಹೊಸೂರು ಭಾವಿ, ಉಣಕಲ್ ಕೆರೆ, ಸಂತೋಷನಗರ ಕೆರೆ, ಸೋನಿಗಾಂಧಿನಗರ, ರೇಣಾಕಾದೇವಿ ಮಂದಿರ, ಜಂಗ್ಲಿಪೇಟೆ, ಈಶ್ವರನಗರ, ಆನಂದನಗರ, ರಾಯನಾಳ, ಉದಯನಗರ ಭಾವಿ ಹಾಗೂ ಧಾರವಾಡದ ಮುಚ್ಚಳಂಬಿ ಭಾವಿ ಸುತ್ತಮುತ್ತ ವಿಸರ್ಜನೆ ದಿನಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಹಾಕಲಾಗುತ್ತಿದೆ. ವಿಶೇಷವಾಗಿ ಭಾವಿ ಸುತ್ತಮುತ್ತ ಲೈಟ್ ವ್ಯವಸ್ಥೆ, ಸಿಸಿಟಿವಿ, ಅಗ್ನಿಶಾಮಕ ದಳ, ಈಜು ಸಿಬ್ಬಂದಿ ನೇಮಿಸಲಾಗುತ್ತಿದೆ. ವಿಶೇಷವಾಗಿ ಸಾರ್ವಜನಿಕ ಗಣೇಶ ಮೂರ್ತಿಗಳು ಇಂದಿರಾ ಗ್ಲಾಸ್ ಹೌಸ್ ಬಳಿ ಬರುವುದರಿಂದ ಅಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.