Asianet Suvarna News Asianet Suvarna News

ಯಾದಗಿರಿ: ನಾರಾಯಣಪೂರ ಡ್ಯಾಂನಿಂದ 3 ಲಕ್ಷ ​ಕ್ಯುಸೆಕ್‌ ನೀರು ಬಿಡು​ಗ​ಡೆ

ಮುಂದುವರೆದ ಕೃಷ್ಣಾ ಪ್ರವಾಹ ಭೀತಿ| ಬಸವಸಾಗರ ಜಲಾಶಯಕ್ಕೆ 2,70,000 ಕ್ಯುಸೆಕ್‌ ಒಳಹರಿವಿದ್ದು, 28 ಕ್ರಸ್ಟ್‌ ಗೇಟ್‌ಗಳ ಮುಖಾಂತರ 3 ಲಕ್ಷ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಯಿತು| ಬಸವಸಾಗರಕ್ಕೂ ಒಳಹರಿವು ಹೆಚ್ಚಾಗಲಿದೆ| ನದಿಪಾತ್ರದ ಹಲವು ಹಳ್ಳಿಗಳು ಪ್ರವಾಹ ಪರಿಸ್ಥಿತಿ ಎದುರಿಸಲಿವೆ| 

3 lakh cusec water Released to River From Basavasagara Dam in Yadgir district
Author
Bengaluru, First Published Aug 20, 2020, 2:08 PM IST

ಹುಣಸಗಿ(ಆ.20): ನಾರಾಯಣಪೂರದ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿರುವುದರಿಂದ ಕೃಷ್ಣಾ ನದಿ ಪಾತ್ರದಲ್ಲಿರುವ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ರಾಜ್ಯದ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳು ಭರ್ತಿಯಾಗಿದ್ದು, ಅಪಾಯಮಟ್ಟದ ಮೀರಿ ಹರಿಯುತ್ತಿರುವುದರಿಂದ ನದಿ ತೀರದ ಗ್ರಾಮಸ್ಥರಿಗೆ ಆತಂಕ ಉಂಟುಮಾಡಿದೆ.

"

ಬುಧವಾರ ಬಸವಸಾಗರ ಜಲಾಶಯಕ್ಕೆ 2,70,000 ಕ್ಯುಸೆಕ್‌ ಒಳಹರಿವಿದ್ದು, 28 ಕ್ರಸ್ಟ್‌ ಗೇಟ್‌ಗಳ ಮುಖಾಂತರ 3 ಲಕ್ಷ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಯಿತು. ಆಲಮಟ್ಟಿಯ ಲಾಲ್‌ಬಹುದ್ದೂರ ಶಾಸ್ತ್ರೀ ಜಲಾಶಯದಿಂದ ನೀರು ಹರಿದು ಬರುತ್ತಿರುವುದರಿಂದ ಯಾವುದೇ ಕ್ಷಣದಲ್ಲಾದರೂ ನದಿಗೆ ಇನ್ನು ಹೆಚ್ಚಿನ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ ಎಂದು ಸಂಬಂಧ​ಪಟ್ಟಅಧಿಕಾರಿಗಳು ತಿಳಿ​ಸಿ​ದ್ದಾ​ರೆ.

ಬಸವಸಾಗರ ಜಲಾಶಯ ಭರ್ತಿ: ರಾಯಚೂರು ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಪ್ರವಾಹ ಭೀತಿ

ಕಳೆದ ಜು.28ರಿಂದ ಬಸವಸಾಗರ ಜಲಾಶಯದಿಂದ ನದಿಗೆ ನೀರು ಹರಿಸಲಾಗುತಿದ್ದು, ಹಲವೆಡೆ ಸೇತುವೆ ಹಾಗೂ ರಸ್ತೆಗಳು ಜಲಾವೃತಗೊಂಡಿವೆ. ಒಂದು ವೇಳೆ ಕೋಯ್ನಾ ಜಲಾಶಯದಿಂದ ಲಾಲ್‌ಬಹದ್ದೂರ ಶಾಸ್ತಿ್ರ ಅಣೆಕಟ್ಟಿಗೆ ಒಳಹರಿವು ಹೆಚ್ಚಾ​ದರೆ, ಬಸವಸಾಗರಕ್ಕೂ ಒಳಹರಿವು ಹೆಚ್ಚಾಗಲಿದೆ. ಕಳೆದ 8 ದಿನದಿಂದ ಪ್ರತಿನಿತ್ಯ ಸುಮಾರು 2 ಲಕ್ಷ ಕ್ಯುಸೆಕ್‌ ನದಿಗೆ ನೀರು ಹರಿಸಲಾಗುತ್ತಿದೆ. ಇನ್ನಷ್ಟು ಒಳಹರಿವು ಬಂದಲ್ಲಿ ನದಿಪಾತ್ರದ ಹಲವು ಹಳ್ಳಿಗಳು ಪ್ರವಾಹ ಪರಿಸ್ಥಿತಿ ಎದುರಿಸಲಿವೆ.

ಛಾಯಾ ಭಗವತಿ ಪ್ರವೇಶಿಸಿದ ಕೃಷ್ಣೆ:

ಬಸವಸಾಗರ ಜಲಾಶಯಕ್ಕೆ ಹತ್ತಿರುವಿರುವ ಛಾಯಾ ಭಗವತಿ ದೇಗುಲದ ಕೆಳಮೆಟ್ಟಿಲುಗಳು ಈಗಾಗಲೇ ಮುಳುಗಿವೆ. ಕೃಷ್ಣ ನದಿ ಮಧ್ಯ ಇರುವ 18 ಪವಿತ್ರ ತೀರ್ಥಗಳು ಮುಳುಗಿದ್ದು, ನೀರಿನ ರಭಸ ಅಪಾಯವನ್ನುಂಟು ಮಾಡುವ ಸಾಧ್ಯತೆಗಳು ಹೆಚ್ಚಿವೆ.
 

Follow Us:
Download App:
  • android
  • ios