ಕಾಂಗ್ರೆಸ್ ನಿಂದ ಮತ್ತೆ ಮೂವರು ಔಟ್
ರಾಜ್ಯದಲ್ಲಿ ಉಪ ಚುನಾವಣಾ ಕಾವು ಜೋರಾದ ಬೆನ್ನಲ್ಲೇ ಮತ್ತೆ ಮೂವರು ಕಾಂಗ್ರೆಸಿನಿಂದ ಹೊರಕ್ಕೆ ಹೋಗಿದ್ದಾರೆ. ಕಾಂಗ್ರೆಸಿನಲ್ಲಿ ದಿನದಿನಕ್ಕೂ ಕೂಡ ಹೊರಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಬೆಂಗಳೂರು[ನ.28]: ಶಿವಾಜಿನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಆರೋಪದ ಮೇಲೆ ಕಾಂಗ್ರೆಸ್ ಪಕ್ಷದ ಬಿಬಿಎಂಪಿ ಸದಸ್ಯರಾದ ಎಂ.ಕೆ.ಗುಣಶೇಖರ್, ನೇತ್ರಾವತಿ ಕೃಷ್ಣೇಗೌಡ ಸೇರಿ ಮೂರು ಮಂದಿಯನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಕೆಲಸ ಮಾಡದೆ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಕುರಿತು ಫೋಟೋ ಸಹಿತ ಕೆಪಿಸಿಸಿಗೆ ದೂರುಗಳು ಬಂದಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೀಗಾಗಿ ಜಯಮಹಲ್ ವಾರ್ಡ್ ಬಿಬಿಎಂಪಿ ಸದಸ್ಯ ಎಂ.ಕೆ.ಗುಣಶೇಖರ್, ರಾಮಸ್ವಾಮಿಪಾಳ್ಯ ಬಿಬಿಎಂಪಿ ಸದಸ್ಯರಾದ ನೇತ್ರಾವತಿ ಕೃಷ್ಣೇಗೌಡ, ಸಂಪಂಗಿರಾಮನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಜಿ ಷಫಿಉಲ್ಲ ಆದೇಶದಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9ಕ್ಕೆ ಫಲಿತಾಂಶ ಪ್ರಕಟವಾಗಲಿದೆ.