* ಮೇ. 23 ರಂದು ನಿಶ್ಚಯವಾಗಿದ್ದ ವಿವಾಹ*ಬಾಗಲಕೋಟೆ ನಗರದಲ್ಲಿ ನಡೆದ ಘಟನೆ* ವಿವಾಹಕ್ಕಾಗಿ ಒಂದು ತಿಂಗಳ ಮುಂಚೆಯೇ ಒಡವೆ, ವಸ್ತ್ರ ಖರೀದಿಸಿದ್ದ ಮೃತ ಯುವತಿಯ ಪೋಷಕರು 

ವಿಜಯಪುರ(ಮೇ.12): ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿಯೊಬ್ಬಳು ಮಹಾಮಾರಿ ಕೊರೋನಾಗೆ ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. ಶೃತಿ ಐಹೊಳೆ(24) ಕೋವಿಡ್‌ ಸೋಂಕಿಗೆ ಬಲಿಯಾದ ಯುವತಿಯಾಗಿದ್ದಾಳೆ.

Add Asianetnews Kannada as a Preferred SourcegooglePreferred

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವಾಸಿಯಾಗಿದ್ದ ಮೃತ ಶೃತಿ ಹಾಗೂ ಪೋಷಕರು ಕೊರೋನಾ ಕಾರಣದಿಂದ ನೆರೆಯ ಬಾಗಲಕೋಟೆ ಜಿಲ್ಲೆಯ ಗ್ರಾಮವೊಂದರ ಭಾವನ ಮನೆಯಲ್ಲಿದ್ದರು. ಮೃತ ಶೃತಿಗೆ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೆ, ಕಫ ಕಟ್ಟಿದ ಹಿನ್ನೆಲೆಯಲ್ಲಿ ಉಸಿರಾಟದ ತೊಂದರೆಯಾಗಿ ಕೊನೆ ಕ್ಷಣದಲ್ಲಿ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶೃತಿ ಸಾವನ್ನಪ್ಪಿದ್ದಾಳೆ.

"

ವಿಜಯಪುರದಲ್ಲಿ ರೆಮ್‌ಡಿಸಿವಿರ್ ಮಾರಾಟ ದಂಧೆ; ನರ್ಸ್ ಸೇರಿ 10 ಮಂದಿ ಅರೆಸ್ಟ್

ಸರ್ಕಾರಿ ನಿಯಮದ ಪ್ರಕಾರ ಬಾಗಲಕೋಟೆ ಜಿಲ್ಲೆಯಲ್ಲಿಯೇ ಶೃತಿ ಅಂತ್ಯಕ್ರಿಯೆ ನೆರವೇರಿದೆ ಎಂದು ತಿಳಿದು ಬಂದಿದೆ. ಇದೇ ಮೇ. 23 ರಂದು ಶೃತಿ ವಿವಾಹ ನಿಶ್ಚಯವಾಗಿತ್ತು. ಶೃತಿ ವಿವಾಹಕ್ಕಾಗಿ ಒಂದು ತಿಂಗಳ ಮುಂಚೆಯೇ ಒಡವೆ ವಸ್ತ್ರ ಹಾಗೂ ಇತರೆ ವಸ್ತುಗಳನ್ನು ಖರೀದಿಸಲಾಗಿತ್ತು. ಮಗಳನ್ನ ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಶೃತಿ ತಂದೆ ಸುಭಾಷ್ ಐಹೊಳೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮದುವೆ‌ ಸಂಭ್ರಮದಲ್ಲಿದ್ದ ಮನೆಯಲ್ಲಿಗ ಸೂತಕದ ಛಾಯೆ ಆವರಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona