110 ಮಂದಿ ಸೋಂಕಿತರಿಗೆ ಇಬ್ಬರು ನರ್ಸ್! ಅಧಿಕಾರಿಗೆ ಸಚಿವ ಸುಧಾಕರ್ ತರಾಟೆ
ಇಬ್ಬರು ರೋಗಿಗಳೊಂದಿಗೆ ಸಂವಾದ ನಡೆಸಿದ್ದು ಅವರಿಗೆ ರೋಗ ಲಕ್ಷಣಗಳಿಲ್ಲ. ಹೀಗಿದ್ದರೂ ಅವರನ್ನು ಕೊರೋನಾ ಆಸ್ಪತ್ರೆಗೆ ಏಕೆ ದಾಖಲಿಸಿದ್ದೀರಿ. ರೋಗ ಲಕ್ಷಣ ಇರುವವರಿಗೆ ಹಾಸಿಗೆ ಎಲ್ಲಿಂದ ತರುತ್ತೀರಿ ಎಂದು ಸಚಿವ ಸುಧಾಕರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು(ಜು.18): ಕೆ.ಸುಧಾಕರ್ ಹಗಲು-ಇರುಳು ಕಾರ್ಯಪ್ರವೃತ್ತರಾಗಿದ್ದು ಶುಕ್ರವಾರ ತಡರಾತ್ರಿ ದಢೀರನೇ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಪಿಪಿಇ ಕಿಟ್ಗಳ ಗುಣಮಟ್ಟ, ಕೊರೋನಾ ಸೋಂಕಿತರ ಆರೈಕೆ, ಶುಚಿತ್ವ, ಸಿಬ್ಬಂದಿಯ ಹಾಜರಾತಿ ಪರಿಶೀಲನೆ ನಡೆಸಿದ್ದಾರೆ.
ಲಕ್ಷಣ ಇಲ್ಲದವರಿಗೆ ಚಿಕಿತ್ಸೆ: ತರಾಟೆ
ಕೊರೋನಾ ವಾರ್ಡ್ ಶುಚಿತ್ವ ಹಾಗೂ ವೈದ್ಯರ ಚಿಕಿತ್ಸೆ ಬಗ್ಗೆ ಕೊರೋನಾ ವಾರ್ಡ್ ಮುಂದೆ ನಿಂತು ವಿಡಿಯೋ ಕಾಲ್ ಮೂಲಕ ಸೋಂಕಿತರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ 8 ವರ್ಷದ ಪುಟ್ಟಬಾಲಕನ (ಕೊರೋನಾ ಹಾಗೂ ಡೆಂಘಿ ಜ್ವರ ಸೋಂಕಿತ) ಜೊತೆ ಮಾತುಕತೆ ನಡೆಸಿದರು.
ಕೊರೋನಾ ಆರ್ಭಟ: 100 ಟಿಟಿ ವಾಹನಗಳು ಆ್ಯಂಬುಲೆನ್ಸಾಗಿ ಪರಿವರ್ತನೆ
ಬಳಿಕ ಇಬ್ಬರು ರೋಗಿಗಳೊಂದಿಗೆ ಸಂವಾದ ನಡೆಸಿದ್ದು ಅವರಿಗೆ ರೋಗ ಲಕ್ಷಣಗಳಿಲ್ಲ. ಹೀಗಿದ್ದರೂ ಅವರನ್ನು ಕೊರೋನಾ ಆಸ್ಪತ್ರೆಗೆ ಏಕೆ ದಾಖಲಿಸಿದ್ದೀರಿ. ರೋಗ ಲಕ್ಷಣ ಇರುವವರಿಗೆ ಹಾಸಿಗೆ ಎಲ್ಲಿಂದ ತರುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
110 ಮಂದಿ ಸೋಂಕಿತರಿಗೆ ಇಬ್ಬರು ನರ್ಸ್!
ಹಾಜರಾತಿ ಪರಿಶೀಲನೆ ಜೊತೆಗೆ ಕೊರೋನಾ ವಾರ್ಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶುಶ್ರೂಷಕರು ಹಾಗೂ ವೈದ್ಯರನ್ನು ಕರೆದು ಕೊರೋನಾ ವಾರ್ಡ್ ಎದುರೇ ಮಾತುಕತೆ ನಡೆಸಿದರು. ಈ ವೇಳೆ ಪ್ರತಿ 10 ಮಂದಿ ರೋಗಿಗಳಿಗೆ ಒಬ್ಬರು ಶುಶ್ರೂಷಕರು ಇರಬೇಕು. ಆದರೆ ಆಸ್ಪತ್ರೆಯಲ್ಲಿ 110 ಮಂದಿ ಸೋಂಕಿತರಿಗೆ ಕೇವಲ ಇಬ್ಬರು ಶುಶ್ರೂಷಕರು ಇದ್ದೇವೆ ಎಂದು ಅಳಲು ತೋಡಿಕೊಂಡರು.
ಚಾಲಕನ ಬದುಕಿಸಲು ಉಸಿರು ಕೊಟ್ಟ 10 ಮಂದಿಗೆ ಕೊರೋನಾ!
ಈ ವೇಳೆ ವೈದ್ಯಕೀಯ ಅಧೀಕ್ಷಕ ವೆಂಕಟೇಶಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಎಷ್ಟುಮಂದಿ ಸಿಬ್ಬಂದಿ ಗೈರು ಹಾಜರಿದ್ದಾರೆ ವಿವರ ನೀಡಿ ಎಂದು ಹೇಳಿದರು. ಈ ವೇಳೆ ಬರೋಬ್ಬರಿ 15 ಮಂದಿ ಗೈರು ಹಾಜರಾಗಿದ್ದು, 6 ಮಂದಿ ಕ್ವಾರಂಟೈನ್ನಲ್ಲಿದ್ದಾರೆ ಎಂದು ಮಾಹಿತಿ ನೀಡಿದರು. ಹಾಗಾದರೆ ಅವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಐಸಿಯು ವಾರ್ಡ್ ಲಾಕ್:
ಐಸಿಯು ವಾರ್ಡ್ ಏಕೆ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದಾಗ ವೈದ್ಯರು, ಕೊರೋನಾ ಪಾಸಿಟಿವ್ ಬಂದಿದ್ದಾರೆ ಎಂದು ಐಸಿಯು ಮುಚ್ಚಿದ್ದಾರೆ ಎಂದು ವಿವರಣೆ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಾ. ಕೆ.ಸುಧಾಕರ್ ಪಾಸಿಟಿವ್ ಬಂದಿರುವ ರೋಗಿಯನ್ನೇ ಐಸಿಯುನಲ್ಲಿ ಇಡಲಾಗುತ್ತದೆ. ನೀವು ಏನು ಮಾತನಾಡುತ್ತಿದ್ದೀರಿ ಎಂಬುದು ನಿಮಗೆ ಅರ್ಥವಾಗುತ್ತಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಈ ವೇಳೆ ಫ್ಯುಮಿಗೇಷನ್ ಮಾಡಲು ಮುಚ್ಚಲಾಗಿದೆ ಎಂದು ವಿವರಣೆ ನೀಡಲು ಮುಂದಾದರೂ ಕೇಳದ ಸಚಿವರು ಐಸಿಯುಗೆ ಫ್ಯುಮಿಗೇಷನ್ ಅಗತ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ತಡರಾತ್ರಿ 12ಕ್ಕೆ ಸಚಿವ ಸುಧಾಕರ್ ಎ ಸ್ಟಾರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.