Asianet Suvarna News Asianet Suvarna News

ನಾಡಹಬ್ಬ ದಸರಾ ಆರಂಭಕ್ಕೆ ಇನ್ನೆರಡೇ ದಿನ

  • ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭಕ್ಕೆ ಇನ್ನೆರಡೇ ದಿನ ಬಾಕಿ
  • ಅ.7 ರಿಂದ ದಸರಾ ಆರಂಭವಾಗಲಿದ್ದು, ಉದ್ಘಾಟನೆ ಹಾಗೂ ಜಂಬೂ ಸವಾರಿ- ಎರಡಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸುವರು
2 Days Left for karnataka Nadahabba Mysuru Dasara snr
Author
Bengaluru, First Published Oct 5, 2021, 7:56 AM IST

 ಮೈಸೂರು (ಅ.05):  ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ ಆರಂಭಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಅ.7 ರಿಂದ ದಸರಾ ಆರಂಭವಾಗಲಿದ್ದು, ಉದ್ಘಾಟನೆ ಹಾಗೂ ಜಂಬೂ ಸವಾರಿ- ಎರಡಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಭಾಗವಹಿಸುವರು. ಮೊದಲ ದಿನ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಕಾಲಕ್ಕೆ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿಯನ್ನು ಪ್ರದಾನ ಮಾಡುವರು.

ಕಳೆದ ಬಾರಿಯಂತೆ ಈ ಬಾರಿ ಕೂಡ ಕೋವಿಡ್‌-19 (Covid 19)ಕಾರಣದಿಂದಾಗಿ ದಸರೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆ, ಅರಮನೆ (palace) ಅಂಗಳದಲ್ಲಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ, ಕೊನೆಯ ದಿನ ಅರಮನೆ ಒಳಾವರಣಕ್ಕೆ ಸೀಮಿತವಾಗಿ ಜಂಬೂಸವಾರಿ ನಡೆಯಲಿದೆ. ಆದರೆ ನಗರದಾದ್ಯಂತ ದೀಪಾಲಂಕಾರ (Lightings) ಇರುತ್ತದೆ.

ಅ.7ರಂದು ಚಾಮುಂಡಿಬೆಟ್ಟದಲ್ಲಿ (Chamundibetta) ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆಯೊಂದಿಗೆ ಬೆಳಗ್ಗೆ 8.15 ರಿಂದ 8.45ರ ಸಲ್ಲುವ ಶುಭ ಮುಹೂರ್ತದಲ್ಲಿ ನಾಡಹಬ್ಬ ದಸರೆಗೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ (SM Krishna) ಚಾಲನೆ ನೀಡುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ರಾಜೀವ್‌ ಚಂದ್ರಶೇಖರ್‌, ಶೋಭಾ ಕರಂದ್ಲಾಜೆ. ಎ.ನಾರಾಯಣಸ್ವಾಮಿ ಉಪಸ್ಥಿತರಿರುವರು.

ದಸರಾ : ಪಿರಂಗಿ ದಳದಿಂದ ಕುಶಾಲತೋಪು ಸಿಡಿತ- ಮೊದಲು ಗಲಿಬಿಲಿ ನಂತರ ಜಗ್ಗದೇ ನಿಂತ ಗಜಪಡೆ!

ರಾಜ್ಯದ ಸಚಿವರಾದ ಎಸ್‌.ಟಿ.ಸೋಮಶೇಖರ್‌, ವಿ.ಸುನಿಲ್‌ಕುಮಾರ್‌, ಶಶಿಕಲಾ ಜೊಲ್ಲೆ, ಆನಂದ್‌ಸಿಂಗ್‌ ಮುಖ್ಯ ಅತಿಥಿಗಳಾಗಿರುವರು. ಸಚಿವರಾದ ಆರ್‌.ಅಶೋಕ, ಬಿ,ಸಿ. ಪಾಟೀಲ್‌, ಶಿವರಾಮ್‌ ಹೆಬ್ಬಾರ್‌, ಭೈರತಿ ಬಸವರಾಜ, ಡಾ.ಕೆ.ಸುಧಾಕರ್‌, ಮೇಯರ್‌ ಸುನಂದಾ ಪಾಲೇನೇತ್ರ ವಿಶೇಷ ಆಹ್ವಾನಿತರಾಗಿರುವರು. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು.

ಅದೇ ದಿನ ಸಂಜೆ 6ಕ್ಕೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯ ಅತಿಥಿಗಳಾಗಿರುವರು. ಶಾಸಕ ರಾಮದಾಸ್‌ ಅಧ್ಯಕ್ಷತೆ ವಹಿಸುವರು.

15ರಂದು ಜಂಬೂ ಸವಾರಿ :  ಅ.15ರಂದು ಸಂಜೆ 4.36 ರಿಂದ 4.46ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸುವರು. ಸಂಜೆ 5 ರಿಂದ 5.30 ರವರೆಗೆ ಅರಮನೆ ಅಂಗಳದಲ್ಲಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡುವರು. ರಾಜವಂಶಸ್ಥ ಯದವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಭಾಗವಹಿಸುವರು. ಸಂಪ್ರದಾಯದಂತೆ ರಾಜ್ಯಪಾಲರು ಗೌರವವಂದನೆ ಸ್ವೀಕರಿಸಬೇಕಿದ್ದ ಪಂಜಿನ ಕವಾಯತು ಈ ಬಾರಿ ಕೂಡ ಇರುವುದಿಲ್ಲ.

Follow Us:
Download App:
  • android
  • ios