17 ಸಾವಿರ ಕೋಟಿ ರೂ. ಮೊತ್ತದ ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ 2024ರ ವೇಳೆಗೆ ಸಿದ್ಧ: ನಿತಿನ್ ಗಡ್ಕರಿ
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇಗೆ ಸಂಬಂಧಿಸಿದಂತೆ ಮಾತನಾಡಿದ ನಿತಿನ್ ಗಡ್ಕರಿ ಅವರು 285.3-ಕಿಮೀ ದೂರದ 4-ಲೇನ್ ಯೋಜನೆಯು ಪ್ರಯಾಣದ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಮುಂದಿನ ವರ್ಷದ ವೇಳೆಗೆ ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ವೇ (Bengaluru - Chennai Expressway) ಸಿದ್ಧವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ Union Minister for Road Transport and Highways) ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. 17,000 ಕೋಟಿ ರೂ. ವೆಚ್ಚದಲ್ಲಿ ಹೊಸ ಗ್ರೀನ್ಫೀಲ್ಡ್ ಯೋಜನೆಯಾದ (Greenfield Project) ಬೆಂಗಳೂರಿನಿಂದ ಚೆನ್ನೈ ನಡುವಣ ಎಕ್ಸ್ಪ್ರೆಸ್ವೇ ಮಾರ್ಚ್ 2024 ರ ವೇಳೆಗೆ ಸಿದ್ಧವಾಗಲಿದೆ ಎಂದೂ ಅವರು ಹೇಳಿದರು. ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಯ ವೈಮಾನಿಕ ಸಮೀಕ್ಷೆ (Aerial Survey) ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆಂಗಳೂರು ಪ್ರವಾಸದಲ್ಲಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ. ಪತ್ರಕರ್ತರೊಂದಿಗೆ ಸಂವಾದ ನಡೆಸುವ ಮೊದಲು ಕೆಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ನಿತಿನ್ ಗಡ್ಕರಿ ಪರಿಶೀಲಿಸಿದ್ದಾರೆ.
ಈ ವೇಳೆ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇಗೆ ಸಂಬಂಧಿಸಿದಂತೆ ಮಾತನಾಡಿದ ನಿತಿನ್ ಗಡ್ಕರಿ ಅವರು 285.3-ಕಿಮೀ ದೂರದ 4-ಲೇನ್ ಯೋಜನೆಯು ಪ್ರಯಾಣದ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಇದು ಪ್ರಮುಖ ಪಟ್ಟಣಗಳು ಮತ್ತು ದಟ್ಟಣೆಯ ಪ್ರದೇಶಗಳಲ್ಲಿ ಹಾದುಹೋಗುವಲ್ಲಿ ವಿಳಂಬ ತಪ್ಪಿಸಲು ಸಹಾಯ ಮಾಡುತ್ತದೆ ಎಂದೂ ಕೇಂದ್ರ ಸಚಿವರು ಹೇಳಿದರು. ಇನ್ನು, "ಕರ್ನಾಟಕದಲ್ಲಿ 71.7 ಕಿಮೀ ವ್ಯಾಪ್ತಿಯ ಈ ಭಾರತಮಾಲಾ ಯೋಜನೆಗೆ ₹ 5,069 ಕೋಟಿ ವೆಚ್ಚವಾಗಲಿದೆ" ಎಂದೂ ನಿತಿನ್ ಗಡ್ಕರಿ ಹೇಳಿದ್ದಾರೆ.
ಇದನ್ನು ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೆ ವೈಮಾನಿಕ ಸಮೀಕ್ಷೆ ನಡೆಸಿದ ನಿತಿನ್ ಗಡ್ಕರಿ
"ಈ ರಸ್ತೆಯನ್ನು ಮಾಡುವ ಮೂಲಕ ನಾವು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತೇವೆ. ಈಗಾಗಲೇ, 231 ಕಿಮೀ ನಿರ್ಮಾಣವು ನಡೆಯುತ್ತಿದೆ. ಮಾರ್ಚ್ 2024 ರೊಳಗೆ, ನಾವು ಈ ಯೋಜನೆಯನ್ನು ಪೂರ್ಣಗೊಳಿಸಲು ಬಯಸುತ್ತೇವೆ" ಎಂದೂ ಬೆಂಗಳೂರಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು. ಈ ಯೋಜನೆಯಲ್ಲಿ ಅರಣ್ಯ ಭೂಮಿ ಒಳಗೊಂಡಿದ್ದು, ಇದನ್ನು ತೆರವುಗೊಳಿಸಲು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿದ್ದೇನೆ ಎಂದೂ ನಿತಿನ್ ಗಡ್ಕರಿ ಹೇಳಿದರು. ಹಾಗೆ,
ಈ ಪ್ರದೇಶದಲ್ಲಿ ಅಮೃತ ಮಹೋತ್ಸವ ಪಕ್ಷಿಧಾಮ ಮತ್ತು ಅಮೃತ ಸರೋವರ ಕೂಡ ಬರಲಿದೆ ಎಂದೂ ಅವರು ಹೇಳಿದರು.
ಬೆಂಗಳೂರು ಸಂಚಾರ ದಟ್ಟಣೆ ನಿವಾರಿಸಲು ಮಾಸ್ಟರ್ಪ್ಲಾನ್..!
ಇನ್ನೊಂದೆಡೆ, ಹೆದ್ದಾರಿಗಳ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಸಚಿವರು, ಬೆಂಗಳೂರು ದಟ್ಟಣೆಯನ್ನು ಕಡಿಮೆ ಮಾಡಲು ಭಾರತಮಾಲಾ ಯೋಜನೆಯಡಿ ಅಂದಾಜು ₹ 17,000 ಕೋಟಿ ವೆಚ್ಚದಲ್ಲಿ ಬೆಂಗಳೂರು ಸ್ಯಾಟಲೈಟ್ ರಿಂಗ್ ರೋಡ್ಗೆ ಸಾರಿಗೆ ಸಚಿವಾಲಯವು ಕೆಲಸ ಮಾಡುತ್ತಿದೆ ಎಂದೂ ಹೇಳಿದರು. ಈ ಯೋಜನೆಯು 288 ಕಿಲೋಮೀಟರ್ಗಳನ್ನು ಒಳಗೊಂಡಿದೆ, ಇದರಲ್ಲಿ 243 ಕಿಮೀ ಕರ್ನಾಟಕದಲ್ಲಿ ಮತ್ತು 45 ಕಿಮೀ ತಮಿಳುನಾಡಿನಲ್ಲಿ ಇದೆ ಎಂದು ನಿತಿನ್ ಗಡ್ಕರಿ ಹೇಳಿದರು.
ಇದನ್ನೂ ಓದಿ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಎಚ್.ಡಿ. ದೇವೇಗೌಡರ ಹೆಸರಿಡಿ: ಸರ್ಕಾರಕ್ಕೆ ಟಿ.ಎ. ಶರವಣ ಪತ್ರ
"ನಾವು ಈ ಸ್ಯಾಟಲೈಟ್ ರಿಂಗ್ ರಸ್ತೆಯನ್ನು ಪುಣೆ-ಬೆಂಗಳೂರು ಜೊತೆ ಜೋಡಿಸುತ್ತಿದ್ದೇವೆ ಮತ್ತು ಅಂತಿಮವಾಗಿ ನಾವು ಮುಂಬೈ-ಪುಣೆ ಎಕ್ಸ್ಪ್ರೆಸ್ವೇ ಅನ್ನು ಸಂಪರ್ಕಿಸುತ್ತೇವೆ. ಒಮ್ಮೆ ಪೂರ್ಣಗೊಂಡ ನಂತರ, ಬೆಂಗಳೂರಿನಿಂದ ಮುಂಬೈಗೆ ಪ್ರಯಾಣವು ಕೇವಲ ಆರೂವರೆ ಗಂಟೆಗಳಿಂದ 7 ಗಂಟೆಗಳಿರುತ್ತದೆ" ಎಂದೂ ಕೇಂದ್ರ ಸಚಿವರು ಹೇಳಿದರು. ಅಲ್ಲದೆ, ಬೆಂಗಳೂರಿನಲ್ಲಿ ₹ 18,000 ಕೋಟಿ ವೆಚ್ಚದಲ್ಲಿ ಲಾಜಿಸ್ಟಿಕ್ ಪಾರ್ಕ್ಗೆ ಯೋಜನೆ ರೂಪಿಸಲಾಗಿದೆ ಎಂದೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಬೆಂಗಳೂರಿನ ಎಲ್ಲಾ ನಗರ ಪ್ರದೇಶಗಳಾದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಮನಗರ, ಕನಕಪುರ ಮತ್ತು ಕರ್ನಾಟಕದ ಆನೇಕಲ್ ಮತ್ತು ತಮಿಳುನಾಡಿನ ಹೊಸೂರು ನಗರಗಳು ವರ್ತುಲ ರಸ್ತೆಯೊಂದಿಗೆ ಸಂಪರ್ಕ ಹೊಂದಲಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಉತ್ತರದಿಂದ ದಕ್ಷಿಣಕ್ಕೆ ಸಂಪರ್ಕಿಸುವ ಹೊಸ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಹಾಗೂ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಮಾಲಿನ್ಯ ಕಡಿಮೆ ಮಾಡಲು, ನಿತಿನ್ ಗಡ್ಕರಿ ಅವರು ಈ ಹೆದ್ದಾರಿಗಳಲ್ಲಿ ಸ್ಯಾಟಲೈಟ್ ಟೌನ್ಶಿಪ್ಗಳನ್ನು ಬೆಂಗಳೂರಿನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೈವೇಗೆ ನಾಲ್ವಡಿ, ಕಾವೇರಿ ಹೆಸರಿಗೆ ಪೈಪೋಟಿ