ಬೆಂಗಳೂರಿನ ಅನ್ನಪೂರ್ಣೇಶ್ವರಿನಗರದಲ್ಲಿ, ಫೋಟೋಶೂಟ್ ಮಾಡಲು ಸ್ನೇಹಿತರೊಂದಿಗೆ ಪಾಳುಬಿದ್ದ ರೆಸಾರ್ಟ್‌ಗೆ ತೆರಳಿದ್ದ 15 ವರ್ಷದ ಬಾಲಕ ನಿಶಾಂತ್, ಹಳೆಯ ಕಟ್ಟಡದ ಮೇಲಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಆತ, ಗಂಭೀರ ಗಾಯಗಳಿಂದಾಗಿ ಮೃತಪಟ್ಟಿದ್ದಾನೆ.

ಬೆಂಗಳೂರು: ಫೋಟೋಶೂಟ್ ಮಾಡಲು ಸ್ನೇಹಿತರೊಂದಿಗೆ ತೆರಳಿದ್ದ 15 ವರ್ಷದ ಬಾಲಕ ಹಳೆಯ ಪಾಳುಬಿದ್ದ ಕಟ್ಟಡದ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೃತ ಬಾಲಕನನ್ನು ನಿಶಾಂತ್ (15) ಎಂದು ಗುರುತಿಸಲಾಗಿದೆ. ಈ ಘಟನೆ ಮಾರ್ಚ್ 13 ರಂದು ಸಂಜೆ ಸುಮಾರು 5.30ರ ಸುಮಾರಿಗೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರನ್ಯಾ ರೆಸಾರ್ಟ್ ನಲ್ಲಿ ಘಟನೆ

ಮಾಹಿತಿಯ ಪ್ರಕಾರ, ನಿಶಾಂತ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಫೋಟೋಶೂಟ್ ಮಾಡಲು ಸುಮಾರು 15 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದು, ಪಾಳುಬಿದ್ದ ಸ್ಥಿತಿಯಲ್ಲಿರುವರನ್ಯಾ ರೆಸಾರ್ಟ್ ಪ್ರದೇಶಕ್ಕೆ ತೆರಳಿದ್ದನು. ಅಲ್ಲಿಗೆ ತಲುಪಿದ ನಂತರ ಇಬ್ಬರು ಸ್ನೇಹಿತರು ಕೆಳಭಾಗದಲ್ಲೇ ಉಳಿದರೆ, ನಿಶಾಂತ್ ಫೋಟೋ ತೆಗೆದುಕೊಳ್ಳುವ ಉದ್ದೇಶದಿಂದ ಹಳೆಯ ಕಟ್ಟಡದ ಮೇಲ್ಭಾಗಕ್ಕೆ ಹತ್ತಿದ್ದಾನೆ.

40 ಅಡಿ ಎತ್ತರದಿಂದ ಕೆಳಗೆ ಬಿದ್ದ ನಿಶಾಂತ್

ಈ ವೇಳೆ ಆತ ಅಜಾಗರೂಕತೆಯಿಂದ ಕಾಲು ಜಾರಿ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡ ನಿಶಾಂತ್ ಅನ್ನು ಸ್ನೇಹಿತರು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಪರಿಶೀಲಿಸಿದಾಗ ಆಗಲೇ ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.