ತಾಲೂಕಿನ ಭುವನಕೋಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಉತ್ತಮೇಶ್ವರದ ಕೋಣೆಕೊಪ್ಪ ಎಂಬಲ್ಲಿ 14ನೆ ಶತಮಾನಕ್ಕೆ ಸೇರಿದ ಶಾಸನನೋಕ್ತ ವೀರಗಲ್ಲನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಅಧ್ಯಯನ ಮಾಡಿದ್ದಾರೆ.

ಕೊಪ್ಪ (ಮಾ.14): ತಾಲೂಕಿನ ಭುವನಕೋಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಉತ್ತಮೇಶ್ವರ(Uttameshwar)ದ ಕೋಣೆಕೊಪ್ಪ ಎಂಬಲ್ಲಿ 14ನೆ ಶತಮಾನಕ್ಕೆ ಸೇರಿದ ಶಾಸನನೋಕ್ತ ವೀರಗಲ್ಲನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಅಧ್ಯಯನ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮಾರು 5 ಅಡಿ ಎತ್ತರ ಮತ್ತು 2 ಅಡಿ ಅಗಲವಿರುವ ಈ ವೀರಗಲ್ಲು(Veeragallu) ಮೂರು ಪಟ್ಟಿಕೆಯನ್ನು ಹೊಂದಿದ್ದು, ಕೆಳಗಿನ ಪಟ್ಟಿಕೆಯಲ್ಲಿ 2 ಸಾಲಿನ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಶಾಸನವನ್ನು ಕಾಣಬಹುದು. ಈ ವೀರಗಲ್ಲಿನ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಉಳಿದಿರುವ ಅಕ್ಷರದ ಆಧಾರದ ಮೇಲೆ ’ಭಾವ ಸಂವತ್ಸರದಲ್ಲಿ ತಿಂಮಣ ನಾಯಕನ’ ಸ್ಮರಣಾರ್ಥವಾಗಿ ವೀರಗಲ್ಲನ್ನು ಹಾಕಲಾಗಿದೆ ಹಾಗೂ ಈ ಲಿಪಿಯು 14ನೆ ಶತಮಾನದ ಲಿಪಿಯನ್ನು ಹೋಲುತ್ತದೆ ಎಂದು ಸಂಶೋಧನಾರ್ಥಿ ತಿಳಿಸಿದ್ದಾರೆ.

ಉಡುಪಿ: ಬಸ್ರೂರು ಅಶೋಕ್ ಪಾರ್ಕ್‌ನಲ್ಲಿ 400 ವರ್ಷಗಳಷ್ಟು ಹಳೆಯ ಲಿಂಗಮುದ್ರೆ ಕಲ್ಲು ಪತ್ತೆ!

ವೀರಗಲ್ಲಿನ ಕೆಳಗಿನ ಪಟ್ಟಿಕೆಯಲ್ಲಿ ಕೈಯಲ್ಲಿ ಖಡ್ಗ (ಕತ್ತಿ)ಯನ್ನು ಹಿಡಿದುಕೊಂಡು ಅಶ್ವದ ಮೇಲೆ ಕುಳಿತು ಯುದ್ಧ ಮಾಡುತ್ತಿರುವ ವೀರ ಹಾಗೂ ಬಿಲ್ಲು-ಬಾಣಗಳನ್ನು ಹಿಡಿದುಕೊಂಡು ಇತನ ವಿರುದ್ಧ ಹೋರಾಡುತ್ತಿರುವ ಸೈನಿಕರ ಉಬ್ಬು ಶಿಲ್ಪವನ್ನು ಕೆತ್ತಲಾಗಿದೆ. ಎರಡನೆ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮರಣ ಹೊಂದಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದುಕೊಂಡು ಹೋಗುವಂತೆ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ. ಕೊನೆಯ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಗಜಗಳ ಶಿಲ್ಪಗಳನ್ನು ಕೆತ್ತಲಾಗಿದೆ.

ಈ ವೀರಗಲ್ಲನ್ನು ಸ್ಥಳೀಯರು ಇಂದಿಗೂ ಪೂಜಿಸಿ ಸಂರಕ್ಷಣೆ ಮಾಡಿಕೊಂಡು ಬರುತ್ತಿದ್ದು, ಸ್ಥಳೀಯ ಇತಿಹಾಸವನ್ನು ರಕ್ಷಿಸುವಲ್ಲಿ ಇವರ ಪಾತ್ರವು ಪ್ರಮುಖವಾಗಿದೆ ಎಂದು ಸಂಶೋಧನಾರ್ಥಿಯು ತಿಳಿಸಿದ್ದಾರೆ.