ಮಂಗಳೂರು: ಪುತ್ತೂರು ಉಪವಿಭಾಗದಲ್ಲಿ 10 ನೆರೆ ಪರಿಹಾರ ಕೇಂದ್ರ
ಕರಾವಳಿಯಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿದ್ದು, ಪುತ್ತೂರು ಉಪವಿಭಾಗದಲ್ಲಿ 10ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಬೆಳ್ತಂಗಡಿಯಲ್ಲಿ 5 ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ 271 ಮಂದಿ ಇದ್ದಾರೆ. ಪುತ್ತೂರು ತಾಲೂಕಿನಲ್ಲಿ 2, ಕಡಬ ತಾಲೂಕಿನಲ್ಲಿ 2 ಮತ್ತು ಸುಳ್ಯ ತಾಲೂಕಿನಲ್ಲಿ 1 ಇದೆ.
ಮಂಗಳೂರು(ಆ.11): ಯಾವುದೇ ಸಮಸ್ಯೆಗಳು ಬಂದರೂ ಜನರು ಧೈರ್ಯದಿಂದ ಮಾಹಿತಿ ನೀಡಿ ತಕ್ಷಣ ರಕ್ಷಣಾ ಕಾರ್ಯ ನಡæಸಲಾಗುವುದು. ನೆರೆ ಸಂತ್ರಸ್ತರ ಅನುಕೂಲತೆಗಾಗಿ ಪುತ್ತೂರು ಉಪವಿಭಾಗದ ವ್ಯಾಪ್ತಿಯಲ್ಲಿ 10 ಪರಿಹಾರ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಕೃಷ್ಣಮೂರ್ತಿ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಲ್ಕುಂದದ ನೆರೆ ಪೀಡಿತ ಮನೆಗಳಿಗೆ ಶನಿವಾರ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು. ಇನ್ನೂ ಮಳೆ ಮುಂದುವರೆಯುವ ಮುನ್ಸೂಚನೆ ಇದೆ. ಜನತೆಯ ರಕ್ಷಣೆಗಾಗಿ ಜಿಲ್ಲಾಡಳಿತ ಮತ್ತು ಪುತ್ತೂರು ಉಪವಿಭಾಗವು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಪ್ರವಾಹ ಪೀಡಿತ ಪ್ರದೇಶಗಳಾದ ಸುಬ್ರಹ್ಮಣ್ಯ, ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ, ಕಡಬ ಮೊದಲಾದ ಪ್ರದೇಶಗಳಲ್ಲಿ ನೋಡೆಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ನುಡಿದರು.
10 ಪರಿಹಾರ ಕೇಂದ್ರಗಳು:
ಕಂದಾಯ ಇಲಾಖೆ, ಜಿಲ್ಲಾಪಂಚಾಯಿತಿ, ತಾ.ಪಂ., ಪೊಲೀಸ್, ಅಗ್ನಿಶಾಮಕ ಇಲಾಖೆ ಎಲ್ಲರೂ ನೆರೆಯಿಂದ ರಕ್ಷಣೆ ಮಾಡಲು ಸನ್ನದ್ಧರಾಗಿದ್ದಾರೆ. ಬೆಳ್ತಂಗಡಿಯಲ್ಲಿ 5 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ 271 ಮಂದಿ ಇದ್ದಾರೆ. ಪುತ್ತೂರು ತಾಲೂಕಿನಲ್ಲಿ 2, ಕಡಬ ತಾಲೂಕಿನಲ್ಲಿ 2 ಮತ್ತು ಸುಳ್ಯ ತಾಲೂಕಿನಲ್ಲಿ 1 ಇದೆ. ಪರಿಹಾರ ಕೇಂದ್ರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವ ಕಾರ್ಯವನ್ನು ಮಾಡಲಾಗುತ್ತಿದೆ. ವೈದ್ಯಕೀಯ, ಆರೋಗ್ಯ ಸೇವೆಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ದಿನವಿಡೀ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ
ಸೂಕ್ತ ವ್ಯವಸ್ಥೆ:
ನೆರೆ ಪೀಡಿತ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸೇರಿಸುವ ಕಾರ್ಯ ನಡೆಸಲಾಗುತ್ತಿದೆ. ಅಲ್ಲದೆ ನೆರೆ ಪೀಡಿತ ಪ್ರದೇಶದಲ್ಲಿ ಬೋಟು ವ್ಯವಸ್ಥೆ, ಅಗ್ನಿಶಾಮಕ ದಳ, ಎನ್ಡಿಆರ್ಎಫ್ ತಂಡ ಸರ್ವ ಸನ್ನದ್ಧವಾಗಿದೆ. ಇವರಿಗೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಆರೋಗ್ಯ ಸೇವೆ ಮತ್ತು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಬೆಳ್ತಂಗಡಿಯಲ್ಲಿ ಶುಕ್ರವಾರ ಅತೀ ದೊಡ್ಡ ಹಾನಿಯಾಗಿದೆ. ದಿಡುಪೆ, ಪರ್ಲಾಣಿ, ಕೊಲ್ಲಂಬಿ, ಮಿತ್ತಬಾಗಿಲು, ಕಲ್ಮಂಜ ಚಾರ್ಮಾಡಿ ತಪ್ಪಲಿನ ಪ್ರದೇಶದಲ್ಲಿ ಅತೀ ಹೆಚ್ಚು ಪ್ರವಾಹ ಬಂದಿದೆ. ಅತೀ ಹೆಚ್ಚಿನ ಹಾನಿ ಇಲ್ಲಿ ಸಂಭವಿಸಿದೆ ಎಂದರು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಭೋಜನ ಸ್ವೀಕರಿಸಿದ ಅಧಿಕಾರಿಗಳು:
ಕುಲ್ಕುಂದ ಕಾಲನಿಯ ಮನೆಯೊಂದರಲ್ಲಿ ನೆರೆ ಸಂತ್ರಸ್ತರಿಗಾಗಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು.ಅಲ್ಲಿ ನೆರೆ ಸಂತ್ರಸ್ತರೊಂದಿಗೆ ಎಸಿ ಡಾ.ಕೃಷ್ಣಮೂರ್ತಿ ಸೇರಿದಂತೆ ಎಲ್ಲ ಅಧಿಕಾರಿಗಳು ಜನಪ್ರತಿನಿಧಿಗಳು ಭೋಜನ ಸ್ವೀಕರಿಸಿದರು. ಅಲ್ಲದೆ ನೆರೆ ಸಂತ್ರಸ್ತರಿಗೆ ಧೈರ್ಯ ಹೇಳಿದರು.