ಕನ್ನಡಿಗರಿಗೆ ಉದ್ಯೋಗ ಮೀಸಲು ಜಾರಿಗೆ ಸಿದ್ಧತೆ| ಆಂಧ್ರ ರೀತಿ ಮಸೂದೆ ರಚಿಸಲು ಮುಂದಾದ ಸರ್ಕಾರ| ಉದ್ಯಮಿಗಳ ಜತೆ ಸುರೇಶ್‌ ಒಂದು ಸುತ್ತಿನ ಸಭೆ

ಬೆಂಗಳೂರು[ಫೆ.07]: ಆಂಧ್ರಪ್ರದೇಶ ಮಾದರಿಯಲ್ಲೇ ಕರ್ನಾಟಕದಲ್ಲೂ ಕನ್ನಡಿಗರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸುವ ಸಂಬಂಧ ಅಗತ್ಯ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ.

Add Asianetnews Kannada as a Preferred SourcegooglePreferred

15 ವರ್ಷ ಕರ್ನಾಟಕದಲ್ಲಿ ವಾಸವಿದ್ದು, ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರುವವರು ಕನ್ನಡಿಗರು ಎಂದು ಅಧಿಸೂಚನೆ ಹೊರಡಿಸುವ ಮೂಲಕ ಕನ್ನಡಿಗ ಎಂದು ಯಾರನ್ನು ಪರಿಗಣಿಸಬೇಕೆಂದು ಬಹುವರ್ಷಗಳಿಂದ ನಡೆಯುತ್ತಿದ್ದ ಚರ್ಚೆ, ಗೊಂದಲಗಳಿಗೆ ಈಗಾಗಲೇ ಸರ್ಕಾರ ತೆರೆ ಎಳೆದಿದೆ. ಈಗ ಮುಂದಿನ ಹೆಜ್ಜೆಯಾಗಿ ರಾಜ್ಯದಲ್ಲಿ ಕನ್ನಡಿಗರಿಗೆ ಸೂಕ್ತ ಉದ್ಯೋಗ ಮೀಸಲಾತಿ ಜಾರಿಗೊಳಿಸಲು ‘ಕರ್ನಾಟಕ ಕಾರ್ಖಾನೆ ಅಂಗಡಿ ವಾಣಿಜ್ಯ ಸಂಸ್ಥೆಗಳು, ಎಂಎಸ್‌ಎಂಇ ಮತ್ತು ಜಂಟಿ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲು ಮಸೂದೆ’ ಸಿದ್ಧಪಡಿಸಲು ಮುಂದಾಗಿದೆ.

ಇಂತಹದೊಂದು ಕ್ರಮ ಜಾರಿಗೆ ಕಾರ್ಮಿಕ ಸಚಿವ ಎಸ್‌.ಸುರೇಶ್‌ ಕುಮಾರ್‌ ಕಾರ್ಯಪ್ರವೃತ್ತರಾಗಿದ್ದು, ಈ ಸಂಬಂಧ ತಮ್ಮ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ರಾಜ್ಯದ ಪ್ರಮುಖ ಕೈಗಾರಿಕೋದ್ಯಮಿಗಳ ಜೊತೆ ಇತ್ತೀಚೆಗೆ ಒಂದು ಸುತ್ತಿನ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನೂ ಪಡೆದುಕೊಂಡಿದ್ದಾರೆ. ಸಭೆಯಲ್ಲಿ ಕೈಗಾರಿಕೋದ್ಯಮಿಗಳು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

ಮೋದಿ ಎಲ್ಲಾ ಮಾತಾಡ್ತಾರೆ, ಸಮಸ್ಯೆಯೊಂದನ್ನು ಬಿಟ್ಟು: ರಾಹುಲ್ ವ್ಯಂಗ್ಯ!

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೂ ಆದ ಎಸ್‌.ಸುರೇಶ್‌ಕುಮಾರ್‌ ಅವರು, ಉದ್ಯೋಗ ಮೀಸಲಾತಿ ಜಾರಿಗೆ ಮೊದಲ ಹೆಜ್ಜೆಯಾಗಿ, ಕನ್ನಡಿಗ ಎಂದರೆ ಯಾರು ಎಂಬ ಬಗ್ಗೆ ಹಲವು ವರ್ಷಗಳಿಂದ ಇದ್ದ ಚರ್ಚೆ, ಗೊಂದಲಗಳನ್ನು ನಮ್ಮ ಸರ್ಕಾರ ಈಗಾಗಲೇ ಸೂಕ್ತ ಅಧಿಸೂಚನೆ ಹೊರಡಿಸಿ ಬಗೆಹರಿಸಿದೆ. 15 ವರ್ಷದಿಂದ ಕರ್ನಾಟಕದಲ್ಲಿದ್ದು ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರುವವನು ಕನ್ನಡಿಗ ಎಂದು ಸ್ಪಷ್ಟಅಧಿಸೂಚನೆ ಹೊರಡಿಸಲಾಗಿದೆ. ಮುಂದಿನ ಹೆಜ್ಜೆಯಾಗಿ ರಾಜ್ಯದ ಒಟ್ಟು ಉದ್ಯೋಗಗಳಲ್ಲಿ ಶೇಕಡಾ ಎಷ್ಟುಪ್ರಮಾಣದ ಉದ್ಯೋಗಗಳನ್ನು ಕನ್ನಡಿಗರಿಗೆ ಕೊಡಬೇಕೆಂಬ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ನಾನು ಕೂಡ ಕೆಲ ಉದ್ಯಮಿಗಳ ಸಭೆ ಕರೆದು ಮಾತನಾಡಿದ್ದೇನೆ. ಅವರು ನಾವು ಕನ್ನಡಿಗರಿಗೆ ಮೀಸಲಾತಿ ನೀಡಲು ಸಿದ್ಧರಿದ್ದೇವೆ. ಆದರೆ, ಕನ್ನಡಿಗರೇ ಬರುವುದಿಲ್ಲ ಎಂದು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇದನ್ನು ನಾನು ಒಪ್ಪಲಿಲ್ಲ. ನಿಯಮಗಳನ್ನು ಅನುಸರಿಸಿ ಉದ್ಯೋಗ ನೀಡಿದರೆ ಎಲ್ಲರೂ ಬರುತ್ತಾರೆ. ಆ ನಿಟ್ಟಿನಲ್ಲಿ ಸರ್ಕಾರ ಕಾಯ್ದೆ ರಚನೆಗೆ ಮಾಡುತ್ತಿದೆ. ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ಹೆಚ್ಚು ಸಿಗಬೇಕು ಎನ್ನುವುದೇ ನಮ್ಮ ಸರ್ಕಾರದ ಆಶಯ. ಈ ನೆಲದ ಭಾವನೆಗಳನ್ನು ನಾವು ಸದಾ ಗೌರವಿಸುತ್ತೇವೆ. ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಅಗತ್ಯ ಕಾಯ್ದೆ ರೂಪಿಸಿ ಜಾರಿಗೆ ತರಲಾಗುವುದು ಎಂದರು.

ಉದ್ಯೋಗ ಏಕೆ ಬದಲಿಸ್ತಿದೀರಾ ಎಂಬ ಪ್ರಶ್ನೆಗೆ ಏನುತ್ತರಿಸಬೇಕು?

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ