Asianet Suvarna News Asianet Suvarna News

ಕನ್ನಡಿಗರಿಗೆ ಗುಡ್ ನ್ಯೂಸ್ : ಉದ್ಯೋಗ ಮೀಸಲಿಗೆ ಸಿಎಂ ಸ್ಪಂದನೆ

ಕನ್ನಡಿಗರ ಉದ್ಯೋಗ ಮೀಸಲಾತಿ ಅಭಿಯಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗಬೇಕು ಎಂಬುದೇ ನಮ್ಮ ಸರ್ಕಾರದ ಆಶಯ. ಸರ್ಕಾರದ ನೀತಿಯೂ ಸಹಾ ಈ ನಿಟ್ಟಿನಲ್ಲಿದೆ ಎಂದರು.

Campaign on job reservation for Kannadigas CM Yediyurappa Gives Positive Response
Author
Bengaluru, First Published Aug 12, 2019, 8:12 AM IST

ಬೆಂಗಳೂರು [ಆ.12]:  ರಾಜ್ಯದಲ್ಲಿನ ಉದ್ಯೋಗ ಅನ್ಯರ ಪಾಲಾಗಿ ಕನ್ನಡಿಗರು ನಿರುದ್ಯೋಗಿಗಳಾಗಬಾರದು ಎಂಬ ಉದ್ದೇಶದಿಂದ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಕಳೆದ ಗುರುವಾರದಿಂದ ಪತ್ರಿಕೆಯು ಆರಂಭಿಸಿರುವ ‘ಕನ್ನಡಪ್ರಭ ಹಕ್ಕೊತ್ತಾಯ’ ಹೆಸರಿನ ವಿಶೇಷ ಸರಣಿಯ ಆಶಯಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪೂರಕವಾಗಿ ಸ್ಪಂದಿಸಿದ್ದಾರೆ.

ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು ಎಂಬ ಒತ್ತಾಯಕ್ಕೆ ಪೂರಕವಾಗಿ  ಯಡಿಯೂರಪ್ಪ, ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗಬೇಕು ಎಂಬುದೇ ನಮ್ಮ ಸರ್ಕಾರದ ಆಶಯ. ಸರ್ಕಾರದ ನೀತಿಯೂ ಸಹಾ ಈ ನಿಟ್ಟಿನಲ್ಲಿದೆ. ಈ ನೆಲದ ಭಾವನೆಗಳನ್ನು ನಾವು ಸದಾ ಗೌರವಿಸುತ್ತೇವೆ. ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ನಮ್ಮ ರಾಜ್ಯದ ಸಂಸ್ಕೃತಿ ಹಾಗೂ ಭಾಷೆಯ ಹಕ್ಕುಗಳ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿರುತ್ತದೆ. ಕನ್ನಡಿಗರ ಬದುಕುವ ಹಾಗೂ ಉದ್ಯೋಗ ಮಾಡುವ ಹಕ್ಕುಗಳನ್ನು ಸಂರಕ್ಷಣೆ ಮಾಡುತ್ತೇವೆ. ಸರ್ಕಾರದ ನಿಯಮಗಳು ಕನ್ನಡಿಗರ ಉದ್ಯೋಗ ಹಾಗೂ ಇತರೆ ಹಕ್ಕುಗಳ ರಕ್ಷಿಸಲು ಬದ್ಧವಾಗಿರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕನ್ನಡಿಗರ ದನಿಯಾಗಿ ರೂಪುಗೊಳ್ಳುತ್ತಿರುವ ಕನ್ನಡಪ್ರಭ ಹಕ್ಕೊತ್ತಾಯದ ಆಶಯಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ‘ಕನ್ನಡಪ್ರಭ’ ಪತ್ರಿಕೆ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತದೆ. ಜೊತೆಗೆ ಇದಕ್ಕೆ ಪೂರಕವಾಗಿ ಕಾರ್ಯೋನ್ಮುಖವಾಗುವಂತೆ ಒತ್ತಾಯಿಸುತ್ತದೆ.

Follow Us:
Download App:
  • android
  • ios