ಆರ್ಸಿಬಿ ವಿರುದ್ಧ ಟಾಸ್ ಗೆದ್ದ SRH, ಕೊಹ್ಲಿ ಪಡೆಯಲ್ಲಿ ಮಹತ್ವದ ಬದಲಾವಣೆ!
ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳೋ ತವಕದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಸನ್ರೈಸರ್ಸ್ ಹೈದರಾಬಾದ್ ಸವಾಲು ಎದುರಿಸಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ SRH ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಶಾರ್ಜಾ(ಅ.31): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ತವಕ, ಇತ್ತ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಪ್ಲೇ ಆಫ್ ಅವಕಾಶ ಜೀವಂತವಾಗಿಸುವ ಲೆಕ್ಕಾಚಾರ. ಹೀಗಾಗಿ ಆರ್ಸಿಬಿ ಹಾಗೂ ಹೈದರಾಬಾದ್ ನಡುವಿನ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ SRH ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
RCB ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಡೇಲ್ ಸ್ಟೇನ್ ಬದಲು ನವದೀಪ್ ಸೈನಿ ತಂಡ ಸೇರಿಕೊಂಡಿದ್ದಾರೆ. ಹೈದರಾಬಾದ್ ತಂಡದಲ್ಲೂ ಬದಲಾವಣೆ ಮಾಡಲಾಗಿದೆ. ವೃದ್ಧಿಮಾನ ಸಾಹ ಫಿಟ್ ಆಗಿದ್ದು, ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ವಿಜಯ್ ಶಂಕರ್ ತಂಡದಿಂದ ಹೊರಬಿದ್ದಿದ್ದಾರೆ.
ಅಬ್ಬರಿಸಿದ ಕೊಹ್ಲಿ ಪಡೆ ಕಳೆದೆರಡು ಪಂದ್ಯದಲ್ಲಿ ಸೋಲು ಅನುಭವಿಸಿದೆ. ಇದು ತಂಡದ ಆತಂಕಕ್ಕೆ ಕಾರಣವಾಗಿದೆ. 12ರಲ್ಲಿ 7 ಗೆಲವು ದಾಖಲಿಸಿದೆ ಆರ್ಸಿಬಿ 14 ಅಂಕ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ ಆರ್ಸಿಬಿ 2ನೇ ಸ್ಥಾನದಲ್ಲಿದೆ. ಇತ್ತ ಹೈದರಾಬಾದ್ 12ರಲ್ಲಿ 5 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.