CSKಗೆ ಕೈಕೊಟ್ಟ ಬ್ಯಾಟ್ಸ್ಮನ್, ರಾಜಸ್ಥಾನಕ್ಕೆ 126 ರನ್ ಟಾರ್ಗೆಟ್
ರಾಜಸ್ಥಾನ ಹಾಗೂ ಚೆನ್ನೈ ತಂಡಕ್ಕೆ ಇದು ಅತ್ಯಂತ ಮಹತ್ವದ ಪಂದ್ಯ. ಈ ಪಂದ್ಯದಲ್ಲಿ ಚೆನ್ನೈ ಬ್ಯಾಟಿಂಗ್ನಲ್ಲಿ ಅಬ್ಬರಿಸುವಲ್ಲಿ ವಿಫಲವಾಗಿದೆ. ಧೋನಿ ಹಾಗೂ ಜಡೇಜಾ ಹೋರಾಟ ಹೊರತುಪಡಿಸಿದರೆ ಇತರರ ಬ್ಯಾಟ್ಸ್ಮನ್ಗಳಿಂದ ರನ್ ಹರಿದು ಬರಲಿಲ್ಲ.
ಅಬು ಧಾಬಿ(ಅ.19): ರಾಜಸ್ಥಾನ ರಾಯಲ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾ ಜೊತೆಯಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿದೆ
ಟಾಸ್ ಗೆದ್ದ ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್, ಉತ್ತಮ ಆರಂಭ ಪಡೆಯಲು ಸಾಧ್ಯವಾಗಿಲ್ಲ. ಫಾಫ್ ಡುಪ್ಲೆಸಿಸ್ ಕೇವಲ 10 ರನ್ ಸಿಡಿಸಿ ಔಟಾದರು. ಶೇನ್ ವ್ಯಾಟ್ಸನ್ ಕೇವಲ 8 ರನ್ ಸಿಡಿಸಿ ನಿರ್ಗಮಿಸಿದರು. ಸ್ಯಾಮ್ ಕುರನ್ 22 ರನ್ ಕಾಣಿಕೆ ನೀಡಿದರು.
ಪ್ರತಿ ಭಾರಿ ತಂಡಕ್ಕೆ ಆಸರೆಯಾಗುತ್ತಿದ್ದ ಅಂಬಾಟಿ ರಾಯುಡು 13 ರನ್ ಸಿಡಿಸಿ ಔಟಾದರು. 56 ರನ್ ಕಲೆಹಾಕುವಷ್ಟರಲ್ಲೇ ಸಿಎಸ್ಕೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾ ಜೊತೆಯಾಟದಿಂದ ಚೆನ್ನೈ ಚೇತರಿಸಿಕೊಂಡಿತು.
ಧೋನಿ 28 ರನ್ ಸಿಡಿಸಿ ಔಟಾದರು. ಇತ್ತ ರವೀಂದ್ರ ಜಡೇಜಾ ಬ್ಯಾಟಿಂಗ್ ಮುಂದುವರಿಸಿದರು. ಜಡೇಜಾ ಅಜೇಯ 35 ರನ್ ಸಿಡಿಸಿದರು. ಈ ಮೂಲಕ ಸಿಎಸ್ಕೆ 5 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿತು.