ಅರುಣ್ ಜೇಟ್ಲಿಗೆ ಕ್ಯಾನ್ಸರ್?: ಬಜೆಟ್ ಮಂಡನೆಗೂ ಅಲಭ್ಯ?
ಅರುಣ್ ಜೇಟ್ಲಿಗೆ ‘ಮೃದು ಅಂಗಾಂಶ ಕ್ಯಾನ್ಸರ್’?| ಫೆ.1ರಂದು ಅವರು ಬಜೆಟ್ ಮಂಡಿಸಲ್ಲ?: ವರದಿ
ನವದೆಹಲಿ[ನ.17]: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕ್ಯಾನ್ಸರ್ಗೆ ತುತ್ತಾಗಿದ್ದಾರೆ ಎಂದು ಹೇಳಲಾಗಿದ್ದು, ಇದೇ ಉದ್ದೇಶಕ್ಕೆ ಅವರು ದಿಢೀರನೇ ಅಮೆರಿಕಕ್ಕೆ ಚಿಕಿತ್ಸೆಗೆ ಎಂದು ತೆರಳಿದ್ದಾರೆ ಎಂದು ‘ದ ವೈರ್’ ವೆಬ್ಸೈಟ್ ವರದಿ ಮಾಡಿದೆ.
ಈ ಮುನ್ನ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಜೇಟ್ಲಿ ಅವರು ವಿದೇಶದಲ್ಲೇ ಚಿಕಿತ್ಸೆ ಪಡೆದು ಬಂದಿದ್ದರು. ಆದರೆ ಇದೀಗ ಅವರಿಗೆ ಮೃದು ಅಂಗಾಂಶ ಕ್ಯಾನ್ಸರ್ ತಗುಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಹೇಳಿದೆ. ಇದೇ ಕಾರಣಕ್ಕೆ ಅವರು ಈ ಫೆಬ್ರವರಿ 1ರಂದು ಮಂಡಿಸಬೇಕಿರುವ ಬಜೆಟ್ ವೇಳೆ ಹಾಜರಿರಲಿಕ್ಕಿಲ್ಲ. ಇವರ ಬದಲು ಬೇರೆಯವರು ಬಜೆಟ್ ಮಂಡಿಸಬಹುದು ಎಂದು ಹೇಳಲಾಗುತ್ತಿದೆ.
ಈ ಮುನ್ನ ಜೇಟ್ಲಿ ಅವರ ಹತ್ತಿರದ ಮೂಲಗಳು ವಾರಾಂತ್ಯಕ್ಕೆ ಅವರು ವಾಪಸಾಗಲಿದ್ದಾರೆ ಎಂದು ಹೇಳಿದ್ದವು. ಆದರೆ ಅನಾರೋಗ್ಯದ ಕಾರಣ ತಿಳಿಸಿರಲಿಲ್ಲ.
‘ಮೃದು ಅಂಗಾಂಶ ಕ್ಯಾನ್ಸರ್’ ಎಂಬುದು ದೇಹದ ಅಂಗಾಂಗಗಳನ್ನು ಪ್ರೋತ್ಸಾಹಿಸುವ ಅಂಗಾಂಶಗಳಿಗೆ ತಗುಲುತ್ತದೆ. ಇದು ಮಾಂಸಖಂಡಗಳು, ಸ್ನಾಯು, ರಕ್ತನಾಳ, ಆಳವಾದ ಅಂಗಾಂಶಗಳು, ಕೊಬ್ಬು... ಮುಂತಾದ ಕಡೆ ತಗುಲುತ್ತದೆ ಎಂದು ವೈದ್ಯರನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇತ್ತೀಚೆಗೆ ಕೇಂದ್ರ ಸಚಿವ ಅನಂತಕುಮಾರ್ ಅವರು ಕ್ಯಾನ್ಸರ್ಗೆ ತುತ್ತಾಗಿ ನಿಧನರಾಗಿದ್ದರು. ಇದೇ ವೇಳೆ, ಮತ್ತೊಬ್ಬ ಮಾಜಿ ಕೇಂದ್ರ ಮಂತ್ರಿ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಅವರಿಗೂ ಕ್ಯಾನ್ಸರ್ ಇದ್ದು, ಅಮೆರಿಕದಲ್ಲಿ ಚಿಕಿತ್ಸೆ ಪಡೆದು ವಾಪಸಾಗಿ ಸಿಎಂ ಹುದ್ದೆ ನಿಭಾಯಿಸುತ್ತಿದ್ದಾರೆ.