ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಿಳಾ ‘ಒಂದೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ದಯವಿಟ್ಟು ತಾಳ್ಮೆಯಿಂದಿರಿ’ ಎಂದರು.

ಹೈದರಾಬಾದ್‌ (ಜನವರಿ 3, 2024): ಮಂಗಳವಾರ ಆಂಧ್ರ ಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ಸಹೋದರಿ ಹಾಗೂ ವೈಎಸ್‌ಆರ್‌ ತೆಲಂಗಾಣ ಸಂಸ್ಥಾಪಕಿ ವೈ.ಎಸ್‌. ಶರ್ಮಿಳಾ ಅಧ್ಯಕ್ಷತೆಯ ವೈಎಸ್ಆರ್‌ ತೆಲಂಗಾಣ ಪಕ್ಷವು ಕಾಂಗ್ರೆಸ್‌ನಲ್ಲಿ ವಿಲೀನವಾಗುವ ಸಾಧ್ಯತೆ ಇದ್ದು, ಈ ಕುರಿತು ಬುಧವಾರ ಘೋಷಣೆ ಆಗುವ ನಿರೀಕ್ಷೆಯಿದೆ.

ಮಂಗಳವಾರ ಶರ್ಮಿಳಾ ಅಧ್ಯಕ್ಷತೆಯಲ್ಲಿ ಪಕ್ಷದ ಮಹತ್ವದ ಸಭೆ ನಡೆದಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಿಳಾ ‘ಒಂದೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ದಯವಿಟ್ಟು ತಾಳ್ಮೆಯಿಂದಿರಿ’ ಎಂದರು.

ಆಂಧ್ರ ಸಿಎಂ ಜಗನ್‌ ಮೋಹನ್‌ ರೆಡ್ಡಿ ಸಹೋದರಿ ವೈಎಸ್‌ ಶರ್ಮಿಳಾ ಕಾಂಗ್ರೆಸ್‌ ಸೇರ್ಪಡೆ?

ಶರ್ಮಿಳಾ ಬುಧವಾರ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಇತರ ನಾಯಕರನ್ನು ಶರ್ಮಿಳಾ ಭೇಟಿಯಾಗಲಿದ್ದಾರೆ. ಬಳಿಕ ಪಕ್ಷ ವಿಲೀನದ ಕುರಿತು ನಿರ್ಣಾಯಕ ಘೋಷಣೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವಿಲೀನವು ಮಹತ್ವದ್ದಾಗಿದೆ. ಇನ್ನು ಪಕ್ಷ ವಿಲೀನದ ಬಳಿಕ ಶರ್ಮಿಳಾ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ನಲ್ಲಿ ಸ್ಥಾನ ನೀಡಲಾಗುವುದು ಎನ್ನಲಾಗಿದೆ. ಇತ್ತೀಚೆಗೆ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ ಶರ್ಮಿಳಾ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು.

ಕಾಂಗ್ರೆಸ್‌ ಸೇರ್ಪಡೆ ಗುಸುಗುಸು ಬೆನ್ನಲ್ಲೇ ಸೋನಿಯಾ ಜತೆ ಶರ್ಮಿಳಾ ಭೇಟಿ