ಮಾಜಿ ಸಿಎಂ ಫಡ್ನವೀಸ್ ಬಾಯಲ್ಲಿ ರಾಜಕೀಯ ನಿವೃತ್ತಿ ಮಾತು: ಕಾರಣ ಹೀಗಿದೆ!
* ಮಹಾರಾಷ್ಟ್ರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ಮೀಸಲಾತಿ ವಿವಾದ
* ಮಹಾರಾಷ್ಟ್ರ ಸರ್ಕಾರಕ್ಕೆ ಫಡ್ನವೀಸ್ ಚಾಲೆಂಜ್
* ಮಾಜಿ ಸಿಎಂ ಫಡ್ನವೀಸ್ ಬಾಯಲ್ಲಿ ರಾಜಕೀಯ ನಿವೃತ್ತಿ ಮಾತು
ಮುಂಬೈ(ಜೂ.27): ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಒಬಿಸಿ ಮೀಸಲಾತಿ ವಿಚಾರ ಸದ್ದು ಮಾಡುತ್ತಿದೆ. ರಾಜ್ಯದ ಬಿಜೆಪಿ ನಾಯಕರು ವಿವಿಧ ಸ್ಥಳಗಳಲ್ಲಿ ಮೀಸಲಾತಿ ಮತ್ತೆ ಜಾರಿಗೊಳಿಸುವಂತೆ ಒತ್ತಾಯಿಸಿ ರಸ್ತೆ ಬಂದ್ ನಡೆಸಿದ್ದಾರೆ. ಇವೆಲ್ಲದರ ನಡುವೆ ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ಪಕ್ಷ ಅಧಿಕಾರಕ್ಕೇರಿದರೆ ಒಬಿಸಿ ಮೀಸಲಾತಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಹೀಗಾಗದಿದ್ದರೆ ತಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದಾಗಿಯೂ ಘೋಷಿಸಿದ್ದಾರೆ.
ನಾಲ್ಕು ತಿಂಗಳಲ್ಲಿ ವಿವಾದ ಬಗೆಹರಿಸುತ್ತೇನೆ ಇಲ್ಲವೇ ನಿವೃತ್ತಿ
ಭಾರತೀಯ ಜನತಾ ಪಕ್ಷವು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ರಾಜ್ಯದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ ಠಾಕ್ರೆ ಸರ್ಕಾರವನ್ನು ಆರೋಪಿಸಿರಿವ ದೇವೇಂದ್ರ ಫಡ್ನವಿಸ್ ರಾಜ್ಯದಲ್ಲಿ ಈ ವಿಷಯವನ್ನು ಬಗೆಹರಿಸದಿದ್ದರೆ, ಇದನ್ನು ಸಂಸತ್ತಿಗೆ ಕೊಂಡೊಯ್ಯುತ್ತೇವೆ.. ಈ ವಿಚಾರ ರಾಜ್ಯದಲ್ಲೇ ಬಗೆಹರಿಸಲು ಸಾಧ್ಯವಿದೆ. ಮಹಾರಾfಟ್ರ ಸರ್ಕಾರ ಇಚ್ಛಿಸಿದರೆ ಹೊಸ ಕಾನೂನು ರಚಿಸಿ ಈ ಮೀಸಲಾತಿ ಜಾರಿಗೊಳಿಸಬಹುದು. ಆದರೆ ಅದು ಹೀಗೆ ಮಾಡಲು ತಯಾರಿಲ್ಲ. ಒಂದೋ ಸರ್ಕಾರ ಈ ಸಮಸ್ಯೆ ಬಗೆಹರಿಸಲಿ ಇಲ್ಲವೇ ಅಧಿಕಾರ ನಮಗೆ ವಹಿಸಲಿ. ನಾನು ನಾಲ್ಕು ತಿಂಗಳೊಳಗೆ ಈ ವಿವಾದ ಸುಖಾಂತ್ಯಗೊಳ್ಳುವಂತೆ ಮಾಡುತ್ತೇನೆ. ಹೀಗಾಗದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಹೇಳಿದ್ದಾರೆ.
ಏನಿದು ವಿವಾದ?
2019 ರಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ಒಬಿಸಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ನೀಡಿತ್ತು. ಆದರೆ ಅದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತು. ನ್ಯಾಯಾಲಯವು ತನ್ನ ಆದೇಶದಲ್ಲಿ, ಮಹಾರಾಷ್ಟ್ರದ ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗಳಿಗೆ ಮೀಸಲಾಗಿರುವ ಒಟ್ಟು ಸ್ಥಾನಗಳ ಶೇಕಡಾ 50 ಮೀರಬಾರದು ಎಂದು ಹೇಳಿದೆ.