Asianet Suvarna News Asianet Suvarna News

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೇಂದ್ರ ಮೂಕ ಪ್ರೇಕ್ಷಕ ಏಕೆ?: ಪವಾರ್‌

ಕರ್ನಾಟಕ ರಾಜ್ಯ ತನ್ನ ಆಡಳಿತವನ್ನು ಬೆಳಗಾವಿಗೆ ವರ್ಗಾಯಿಸಿದೆ. ಚಳಿಗಾಲದ ಅಧಿವೇಶನ ಅಲ್ಲೇ ನಡೆಯುತ್ತದೆ. ಅಲ್ಲಿನ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡಲಾಗಿದೆ. ಮರಾಠಿ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ: ಶರದ್‌ ಪವಾರ್‌

Why Central Government Silent on the Karnataka Maharashtra Border Dispute Says Sharad Pawar grg
Author
First Published Dec 9, 2022, 2:00 AM IST

ಮುಂಬೈ(ಡಿ.09): ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಕುರಿತಾಗಿ ಪ್ರತಿಕ್ರಿಯಿಸಿರುವ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಶರದ್‌ ಪವಾರ್‌, ಈ ಬಿಕ್ಕಟ್ಟಿನ ಕುರಿತಾಗಿ ಕೇಂದ್ರ ಸರ್ಕಾರ ಮೂಕಪ್ರೇಕ್ಷಕನಂತೆ ಇರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾಷಾ ಮಾಧ್ಯಮ ಮತ್ತು ಚಳುವಳಿಯನ್ನು ನಾಶ ಮಾಡಲು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡರೆ ಸಹಜವಾಗಿ ಪ್ರತಿಕ್ರಿಯೆ ಉಂಟಾಗುತ್ತದೆ. ಆದರೆ ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದದ ಕುರಿತಾಗಿ ಕೇಂದ್ರ ಸರ್ಕಾರ ಕಣ್ಣುಮುಚ್ಚಿಕೊಂಡು ಕುಳಿತಿದೆ. ಇದು ಕೇವಲ 2 ರಾಜ್ಯಗಳ ನಡುವಿನ ಬಿಕ್ಕಟ್ಟಾಗಿಲ್ಲ. ಇದು ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಮರಾಠಿ ಮಾತನಾಡುವ ಜನರ ನ್ಯಾಯದ ಸಮಸ್ಯೆಯಾಗಿದೆ. ಇದೇ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದಾಗ ಇದು ಕೇವಲ 2 ರಾಜ್ಯಗಳ ನಡುವಿನ ಸಮಸ್ಯೆ. ಸಂಸತ್ತಿನಲ್ಲಿ ಚರ್ಚಿಸುವ ಅವಶ್ಯಕತೆ ಇಲ್ಲ ಎಂದು ಸ್ಪೀಕರ್‌ ಹೇಳಿದರು. ಈ ಸಮಸ್ಯೆಗೆ ಸಂಸತ್ತು ಪ್ರತಿಕ್ರಿಯಿಸದಿದ್ದರೆ ಮತ್ಯಾರು ಪ್ರತಿಕ್ರಿಯಿಸುತ್ತಾರೆ? ಕೇಂದ್ರ ಈ ವಿಚಾರದಲಿ ಮೂಕಪ್ರೇಕ್ಷಕನಂತಿರಬಾರದು’ ಎಂದು ಅವರು ಹೇಳಿದರು.

ಬೆಳಗಾವಿ ಗಡಿ ಗಲಾಟೆಗೆ ಶರದ್ ಪವಾರ್ ಕೆಂಡ, ಕರ್ನಾಟಕಕ್ಕೆ ತಾಳ್ಮೆ ಪರೀಕ್ಷಿಸದಂತೆ ಎಚ್ಚರಿಕೆ!

‘ಕರ್ನಾಟಕ ರಾಜ್ಯ ತನ್ನ ಆಡಳಿತವನ್ನು ಬೆಳಗಾವಿಗೆ ವರ್ಗಾಯಿಸಿದೆ. ಚಳಿಗಾಲದ ಅಧಿವೇಶನ ಅಲ್ಲೇ ನಡೆಯುತ್ತದೆ. ಅಲ್ಲಿನ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡಲಾಗಿದೆ. ಮರಾಠಿ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಎಲ್ಲಾ ಮಾಧ್ಯಮಗಳ ಶಾಲೆಗಳಿವೆ. ಹೀಗೆ ಭಾಷೆ ಮತ್ತು ಚಳುವಳಿಯನ್ನು ನಾಶ ಮಾಡಲು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದರ ವಿರುದ್ಧ ಕೇಂದ್ರ ಸರ್ಕಾರ ಮಾತನಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
 

Follow Us:
Download App:
  • android
  • ios