ಮಮತಾ ಆರೋಪ ತಳ್ಳಿಹಾಕಿದ ಚುನಾವಣಾ ಆಯೋಗ; ಭದ್ರತಾ ಪಡೆಗೆ ಕ್ಲಿನ್ ಚಿಟ್!
ಪಶ್ಚಿಮ ಬಂಗಾಳ 4ನೇ ಹಂತದ ಮತದಾನ ಭಾರಿ ಸದ್ದು ಮಾಡಿದೆ. ಮತದಾನ ನಡುವೆ ಭದ್ರತಾ ಪಡೆಗಳ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. ಇದು ಅಮಿತ್ ಶಾ ಅಣತಿಯಂತೆ ನಡೆದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಭದ್ರತಾ ಪಡೆಯ ಫೈರಿಂಗ್ ಕ್ರಮವನ್ನು ಪ್ರಶ್ನಿಸಿದ ಮಮತಾಗೆ ಮತ್ತೆ ಮುಖಭಂಗವಾಗಿದೆ.
ಕೋಲ್ಕತಾ(ಏ.10): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮತ್ತೆ ಚುನಾವಣಾ ಆಯೋಗದಿಂದ ಮುಖಭಂಗವಾಗಿದೆ. ಈ ಬಾರಿ ಭದ್ರತಾ ಪಡೆಗಳ ಕ್ರಮ ಪ್ರಶ್ನಿಸಿದ ಮಮತಾಗೆ ಹಿನ್ನಡೆಯಾಗಿದೆ. ಭದ್ರತಾ ಪಡೆಗಳ ಗುಂಡಿನ ದಾಳಿ ಅನಿವಾರ್ಯವಾಗಿತ್ತು. ಹೀಗಾಗಿ ಭದ್ರತಾ ಪಡೆಗಳಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.
ಬಂಗಾಳದ ಹಿಂಸಾಚಾರಕ್ಕೆ ಅಮಿತ್ ಶಾ ಕಾರಣ ಎಂದ ಮಮತಾ ಬ್ಯಾನರ್ಜಿ!
ಪಶ್ಚಿಮ ಬಂಗಾಳದ 4ನೇ ಹಂತದ ಚುನಾವಣೆಯಲ್ಲಿ ಕೂಚ್ಬಿಹಾರ್ ಜಿಲ್ಲೆಯ ಸಿತಾಲ್ಕುಚಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ CISF ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ನಾಲ್ವರು ಬಲಿಯಾಗಿದ್ದರು. ದಾಳಿ ಬಳಿಕ ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶನದಂತೆ ನಡೆದಿದೆ. ಭದ್ರತಾ ಪಡೆಗಳ ಕ್ರಮವನ್ನು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದರು. ಇಷ್ಟೇ ಅಲ್ಲ ಸಿಬಿಐ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದರು.
ಮತಗಟ್ಟೆ ಬಳಿ ಸ್ಥಳೀಯರು ಸೇರಿ ದುಷ್ಕರ್ಮಿಗಳ ಗುಂಪು ಹೆಚ್ಚಾಗಿತ್ತು. ದಿಢೀರ್ ಭದ್ರತಾ ಪಡೆಗಳ ಮೇಲೆ ದಾಳಿ ಅವರಿಂದ ಶಸ್ತಾಸ್ತ್ರ ಕಸಿದುಕೊಳ್ಳುವ ಯತ್ನಕ್ಕೆ ಮುಂದಾಗಿತ್ತು. ಹೀಗಾಗಿ ಭದ್ರತಾ ಪಡೆ ತಮ್ಮ ಆತ್ಮರಕ್ಷೆ ಹಾಗೂ ಪರಿಸ್ಥಿತಿ ನಿಯಂತ್ರಣಕ್ಕೆ ಒಪನ್ ಫೈರ್ ಮಾಡಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಸೀತಾಲ್ಕುಚಿಯ ಮತಗಟ್ಟೆ ಕೇಂದ್ರ 126ರ ಬಳಿ ನಡೆದ ಗುಂಡಿನ ದಾಳಿ ಕುರಿತು ಡಿಎಂ ಮತ್ತು ಎಸ್ಪಿ ಅವರಿಂದ ವರದಿ ತರಿಸಿಕೊಂಡ ಚುನಾವಣಾ ಆಯೋಗ, ಭದ್ರತಾ ಪಡೆಗಳಿಗೆ ಕ್ಲೀನ್ ಚಿಟ್ ನೀಡಿದೆ.