ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿದ್ದು, ಈ ವೇಳೆ ಗರ್ಭಿಣಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡು ಮಗುವನ್ನು ಕಳೆದುಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ, ನಿಜವಾಗಿಯೂ ಆಗಿದ್ದೇನು? ಏನಿದರ ಅಸಲಿತ್ತು?

ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿ ಹಲವು ಪೊಲೀಸರನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಪ್ರತಿಭಟನೆಯ ವೇಳೆ ಕಲ್ಲುಗಳನ್ನು ರೆಡಿಮಾಡಿಟ್ಟುಕೊಂಡು ಬಂದಿದ್ದರೇ ಎನ್ನುವ ಅನುಮಾನದ ಬಗ್ಗೆ ಜಾಲತಾಣದಲ್ಲಿ ಭಾರಿ ಟೀಕೆಗಳು ಎದುರಾಗುತ್ತಿವೆ. ಹಾಗಿದ್ದರೆ ಇಲ್ಲಿ ಬಂದವರು ನೀಟ್​ ಪರೀಕ್ಷೆಯ ನೆಪದಲ್ಲಿ ನಿಜವಾಗಿಯೂ ಬಂದದ್ದೇಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಇದಾಗಲೇ ಖುದ್ದು ಉಪವಾಸ ನಿರತ ಸೋನಂ ವಾಂಗ್ಚುಕ್​ ಅವರ ಪತ್ನಿ ಗೀತಾ ಕೂಡ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸೇರಿದಂತೆ ಪ್ರತಿಭಟನೆಯ ಹೆಸರಿನಲ್ಲಿ ರಾಜಕೀಯ ಮಾಡಲು ಬಂದವರ ವಿರುದ್ಧ ಕಿಡಿ ಕಾರಿದ್ದಾರೆ. ನಿಮ್ಮ ನಾಟಕ ಬೇಡ, ಪ್ರತಿಭಟನೆಯ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡು ಪ್ರತಿಭಟನೆಯ ದಿಕ್ಕನ್ನು ಬದಲಿಸಬೇಡಿ ಎಂದು ತೀಕ್ಷ್ಣವಾಗಿ ಚುಚ್ಚಿದ್ದಾರೆ.

ಪ್ರತಿಭಟನಾ ವಿದ್ಯಾರ್ಥಿಗಳ ಎಐ ವಿಡಿಯೋಗಳ ಅಬ್ಬರ

ಇದರ ನಡುವೆಯೇ, ಎಐ ವಿಡಿಯೋಗಳ ಅಬ್ಬರ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ರಕ್ತಸಿಕ್ತ ಪ್ರತಿಭಟನಾಕಾರರು ಚಿಕಿತ್ಸೆ ಪಡೆಯುವಂತೆ ಕಾಣುವ ಎಐ ವಿಡಿಯೋಗಳು, ಫೋಟೋಗಳನ್ನು ಹಾಕಿಕೊಂಡು ದ್ವೇಷದ ಜ್ವಾಲೆ ಹರಡಲಾಗುತ್ತಿದೆ. ಅದೇ ಇನ್ನೊಂದೆಡೆ, ಪ್ರತಿಭಟನೆಗೆಂದು ಮೊದಲೇ ಕಲ್ಲುಗಳನ್ನು ತಂದಿಟ್ಟುಕೊಂಡಿದ್ದ ಪ್ರತಿಭಟನಾಕಾರರು ಪೊಲೀಸರ ಮೇಲೆ ಅವುಗಳನ್ನು ಎಸೆದಾಗ ಗರ್ಭಿಣಿ ಪೊಲೀಸ್​ ಸಿಬ್ಬಂದಿಯೊಬ್ಬರ ಮಗು ಮೃತಪಟ್ಟಿರುವ ಬಗ್ಗೆ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ದೆಹಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಪ್ರಜ್ಞೆ ತಪ್ಪಿದ ನಂತರ ಹಲವಾರು ಪೊಲೀಸ್ ಅಧಿಕಾರಿಗಳು ಅಧಿಕಾರಿಯನ್ನು ಹಿಡಿದಿಟ್ಟುಕೊಂಡಿರುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಅಧಿಕಾರಿಗೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಹಿಂಸಾಚಾರದ ನಂತರ ಅವರ ಗರ್ಭದಲ್ಲಿರುವ ಮಗು ಸಾವನ್ನಪ್ಪಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನೆಯ ಸಮಯದಲ್ಲಿ ಗಾಯಗೊಂಡ ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿ ತನ್ನ ಗರ್ಭದಲ್ಲಿರುವ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.

ಏನಿದರ ಅಸಲಿಯತ್ತು?

ಆದರೆ ಇದರ ಅಸಲಿಯತ್ತೇ ಬೇರೆ. ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿರುವುದು ನಿಜ. ಅದರಲ್ಲಿ ಹಲವು ಪೊಲೀಸರಿಗೆ ಗಂಭೀರ ಗಾಯಗಳಾಗಿದ್ದೂ ನಿಜ. ಅದ್ಯಾವುದೂ ಸುಳ್ಳಲ್ಲ. ಈ ಮಹಿಳಾ ಪೊಲೀಸ್​ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆದಾಗ, ಪೊಲೀಸರು ಲಾಠಿ ಚಾರ್ಜ್​ ನಡೆಸಿದಾಗ ಇವರು ಪ್ರಜ್ಞೆ ತಪ್ಪಿದ್ದೂ ನಿಜವೇ. ಆದರೆ ಆಕೆ ಗರ್ಭಿಣಿಯಲ್ಲ. ಅವರಿಗೆ ಇನ್ನೂ ಮದುವೆಯಾಗಿಲ್ಲ, ಇದು ಸುಳ್ಳು ಸುದ್ದಿ ಎಂದು ಪೊಲೀಸ್​ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.