Thumka row in Bihar: 'ಏಯ್ ಸೈನಿಕ ಕುಣಿಯದಿದ್ರೆ ಸಸ್ಪೆಂಡ್ ಮಾಡ್ತೇನೆ'; ತೇಜ್ ಪ್ರತಾಪ್ ಬೆದರಿಕೆ ವೈರಲ್!
Thumka row in Bihar: ಆರ್ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಅವರು ಪೊಲೀಸರನ್ನು ಹೋಳಿ ಹಬ್ಬದಲ್ಲಿ ಕುಣಿಯಲು ಬಲವಂತಪಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಜೆಪಿ ಮತ್ತು ಜೆಡಿಯು ಇದನ್ನು 'ಜಂಗಲ್ ರಾಜ್' ಮನಸ್ಥಿತಿ ಎಂದು ಕರೆದಿವೆ.

ಬಿಹಾರದಲ್ಲಿ ತುಮ್ಕಾ ವಿವಾದ: ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ತೇಜ್ ಪ್ರತಾಪ್ ಯಾದವ್ ಅವರ ಹೋಳಿ ಆಚರಣೆ ಈ ಬಾರಿ ವಿವಾದಕ್ಕೆ ಸಿಲುಕಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋದಲ್ಲಿ ತೇಜ್ ಪ್ರತಾಪ್ ಯಾದವ್ ಅವರು ಪೊಲೀಸರನ್ನು ಹೋಳಿ ಹಬ್ಬದಲ್ಲಿ ಕುಣಿಯಲು ಹೇಳುತ್ತಿದ್ದಾರೆ. ಕುಣಿಯದಿದ್ದರೆ ಸಸ್ಪೆಂಡ್ ಮಾಡುತ್ತೇನೆ ಎಂದು ತೇಜ್ ಸಿಪಾಯಿಗೆ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ. ಈ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಬಿಹಾರ ರಾಜಕೀಯದಲ್ಲಿ ಬಿರುಗಾಳಿ ಎದ್ದಿದ್ದು, ವಿರೋಧ ಪಕ್ಷಗಳು ಇದನ್ನು ಕಾನೂನು ಸುವ್ಯವಸ್ಥೆಯ ಹಾಸ್ಯಾಸ್ಪದ ಎಂದು ಟೀಕಿಸಿವೆ.
ಕುಣಿಯದಿದ್ದರೆ ಸಸ್ಪೆಂಡ್ ಮಾಡ್ತೀನಿ, ತೇಜ್ ಪ್ರತಾಪ್ ಬೆದರಿಕೆ
ವೈರಲ್ ವಿಡಿಯೋದಲ್ಲಿ ತೇಜ್ ಪ್ರತಾಪ್ ಯಾದವ್ ವೇದಿಕೆ ಮೇಲೆ ಕುಳಿತಿದ್ದು, ಪೊಲೀಸ್ ಸಿಬ್ಬಂದಿಯೊಬ್ಬರು ಅವರ ಮುಂದೆ ನಿಂತಿರುವುದು ಕಾಣಿಸುತ್ತದೆ. ಈ ವೇಳೆ ಅವರು, "ಏಯ್ ಸಿಪಾಯಿ, ಏಯ್ ದೀಪಕ್, ಒಂದು ಹಾಡು ಹಾಕ್ತೀನಿ, ಅದಕ್ಕೆ ನೀನು ಕುಣಿಯಬೇಕು. ಬೇಜಾರು ಮಾಡ್ಕೋಬೇಡ, ಹೋಳಿ ಹಬ್ಬ ಇದು. ಇವತ್ತು ಕುಣಿಯದಿದ್ದರೆ ಸಸ್ಪೆಂಡ್ ಮಾಡ್ತೀನಿ" ಎಂದು ಹೇಳುತ್ತಾರೆ. ವಾಸ್ತವವಾಗಿ, ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ಹೋಳಿ ಹಬ್ಬವು ದೇಶಾದ್ಯಂತ ಪ್ರಸಿದ್ಧವಾಗಿದೆ.
ಬಿಜೆಪಿಯ ಟೀಕೆ: "ಬಿಹಾರದಲ್ಲಿ ಮತ್ತೆ ಜಂಗಲ್ ರಾಜ್ ಬರುತ್ತಾ?"
ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ (Shehzad Poonawalla) ಮಾತನಾಡಿ, ತೇಜ್ ಪ್ರತಾಪ್ ಅವರು ತಮ್ಮ ತಂದೆಯಂತೆಯೇ ಇದ್ದಾರೆ. ಈ ಹಿಂದೆ ಲಾಲು ಯಾದವ್ (Lalu Yadav) ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಸುವ್ಯವಸ್ಥೆಯನ್ನು ನಗೆಪಾಟಲುಗೀಡು ಮಾಡಿದ್ದರು, ಈಗ ಅವರ ಮಗ ಪೊಲೀಸರನ್ನು ಕುಣಿಯುವಂತೆ ಮಾಡುತ್ತಿದ್ದಾರೆ. ಒಂದು ವೇಳೆ ಆರ್ಜೆಡಿ ಅಧಿಕಾರಕ್ಕೆ ಬಂದರೆ, ಅವರು ಕಾನೂನು ಪಾಲಕರನ್ನು ಕುಣಿಸುತ್ತಾರೆ. ಇದು ಟ್ರೇಲರ್ ಅಷ್ಟೇ, ಇಡೀ ಬಿಹಾರ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.