ಇಡೀ ಘಟನೆಯ ಮೇಲೆ ಬೆಳಕು ಚೆಲ್ಲಿದ ಉಪಗ್ರಹ ಚಿತ್ರಗಳು| ಉತ್ತರಾಖಂಡ ಹಿಮಕುಸಿತ ಆಗಿದ್ದು ಹೀಗೆ| 5600 ಮೀಟರ್‌ ಎತ್ತರದಲ್ಲಿರುವ ತ್ರಿಶಾಲಾ ನೀರ್ಗಲ್ಲು ಪ್ರದೇಶದಲ್ಲಿ ಹಿಮ ಮತ್ತು ಮಂಜುಗಡ್ಡೆಯ ಬೆಳವಣಿಗೆ

ನವದೆಹಲಿ(ಫೆ.11): ಉತ್ತರಾಖಂಡದ ಚಮೋಲಿ ಜಿಲ್ಲೆಯ ಹಿಮಕುಸಿತಕ್ಕೆ ಕಾರಣವೇನು ಎಂಬುದರ ಬಗ್ಗೆ ಸ್ಪಷ್ಟವಾಗಿ ಬೆಳಕು ಚೆಲ್ಲಬಹುದಾದ ಉಪಗ್ರಹ ಚಿತ್ರಗಳು ಬಿಡುಗಡೆಯಾಗಿವೆ. ಈ ಚಿತ್ರಗಳು ಹಿಮಕುಸಿತವಾದ ಪ್ರದೇಶ ಯಾವುದು? ಆ ಪ್ರದೇಶದ ದುರ್ಘಟನೆಗೂ ಮೊದಲು ಹೇಗಿತ್ತು? ಬಳಿಕ ಹೇಗೆ ಕಾಣುತ್ತಿದೆ ಎಂಬುದರ ಸ್ಪಷ್ಟಚಿತ್ರಣ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಫೆ.6ರಂದು ತೆಗೆದ ಉಪಗ್ರಹ ಚಿತ್ರಗಳ ಅನ್ವಯ, ಸಮುದ್ರ ಮಟ್ಟದಿಂದ 5600 ಮೀಟರ್‌ ಎತ್ತರದಲ್ಲಿರುವ ತ್ರಿಶಾಲಾ ನೀರ್ಗಲ್ಲು ಪ್ರದೇಶದಲ್ಲಿ ಹಿಮ ಮತ್ತು ಮಂಜುಗಡ್ಡೆಯ ಬೆಳವಣಿಗೆ ಕಾಣಬಹುದಾಗಿದೆ. ಆದರೆ ಫೆ.7ರಂದು ಹಿಮಕುಸಿತದ ಬಳಿಕ ತೆಗೆದ ಚಿತ್ರದಲ್ಲಿ ಆ ಪ್ರದೇಶದಲ್ಲಿನ ಮಂಜುಗಡ್ಡೆ ಮತ್ತು ಹಿಮ ಸಂಪೂರ್ಣವಾಗಿ ಮಾಯವಾಗಿರುವುದನ್ನು ಗುರುತಿಸಬಹುದಾಗಿದೆ.

ಈ ಚಿತ್ರವನ್ನು ಆಧರಿಸಿ ಹೇಳುವುದಾದರೆ 5600 ಮೀಟರ್‌ ಎತ್ತರದ ಪ್ರದೇಶದಲ್ಲಿನ ತ್ರಿಶಾಲಾ ನೀರ್ಗಲ್ಲು ಪ್ರದೇಶದಲ್ಲಿನ 200 ಚದರ ಮೀ. ವ್ಯಾಪ್ತಿಯ ದೊಡ್ಡ ಹಿಮಬಂಡೆಯೊಂದು ಕುಸಿದು 3800 ಮೀ. ಆಳಕ್ಕೆ (2 ಕಿ.ಮೀ ಆಳಕ್ಕೆ) ಕುಸಿದಿದೆ. ಬಳಿಕ ತನ್ನೊಂದಿಗೆ ಭಾರೀ ವೇಗದಲ್ಲಿ ಹಾದಿಯಲ್ಲಿ ಸಿಕ್ಕ ಕಲ್ಲು, ಮಣ್ಣು, ಬಂಡೆಗಳೊಂದಿಗೆ ಧೌಲಿಗಂಗಾ ಮತ್ತು ಅಲಕನಂದಾ ನದಿ ಸೇರಿದೆ. ಈ ಮೂಲಕ ಎರಡೂ ನದಿಗಳಲ್ಲಿ ಏಕಾಏಕಿ ದಿಢೀರ್‌ ಪ್ರವಾಹ ಕಾಣಿಸಿಕೊಂಡು, ಎರಡು ಜಲವಿದ್ಯುತ್‌ ಘಟಕಗಳನ್ನು ನಾಮಾವಶೇಷ ಮಾಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.