ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪ ನಾಗರೀಕ ಸಂಹಿತೆ ವಿಧೇಯಕ ಮಂಡನೆ!
ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೇ ಇಂದು ಸದನದಲ್ಲಿ ಮಸೂದೆಯನ್ನು ಮಂಡಿಸಿದರು. ಈ ಮಸೂದೆಯು ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಮುಖ ನಿಯಮಗಳನ್ನು ಒಳಗೊಂಡಿದೆ.
ನವದೆಹಲಿ (ಜ.6): ಯಾವುದೇ ವ್ಯಕ್ತಿಗಳು ತಾವು ಲಿವ್ ಇನ್ ರಿಲೇಷನ್ಷಿಪ್ನಲ್ಲಿ ಇರಲು ಬಯಸಿದ್ದಲ್ಲಿ ಅವರು ಉತ್ತರಾಖಂಡದ ಏಕರೂಪ ನಾಗರೀಕ ಸಂಹಿತೆ (ಯುಸಿಸಿ) ಕಾನೂನು ಜಾರಿಯಾದ ಬಳಿಕ ಅದರಲ್ಲಿ ಅಗತ್ಯವಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನಿಯಮಗಳನ್ನು ಪಾಲಿಸಲು ವಿಫಲರಾದವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ರೂ 25,000 ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಮಸೂದೆಯನ್ನು ಮಂಗಳವಾರ ಮಂಡಿಸಿದ್ದಾರೆ. ಈಗ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಬಳಿಕ ಮಸೂದೆ ಮೇಲೆ ಮತದಾನ ನಡೆಯಲಿದೆ. ಈ ಮಸೂದೆಯ ಕರಡು, ವಿವಾಹದ ಕಡ್ಡಾಯ ನೋಂದಣಿ, ನ್ಯಾಯಾಂಗ ಪ್ರಕ್ರಿಯೆಯ ಮೂಲಕ ವಿಚ್ಛೇದನ ಸೇರಿದಂತೆ ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಎಲ್ಲಾ ಪ್ರಜೆಗಳಿಗೆ ಅವರ ಧರ್ಮವನ್ನು ಲೆಕ್ಕಿಸದೇ ಏಕರೂಪದ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರದ ಕಾನೂನು ನಿಯಮಗಳನ್ನು ಪ್ರಸ್ತಾಪ ಮಾಡುತ್ತದೆ. ಮಂಗಳವಾರ ಬೆಳಗ್ಗೆ ಉತ್ತರಾಖಂಡ ವಿಧಾನಸಭೆಯಲ್ಲಿ "ಜೈ ಶ್ರೀ ರಾಮ್" ಮತ್ತು "ವಂದೇ ಮಾತರಂ" ಘೋಷಣೆಗಳ ನಡುವೆ ಯುಸಿಸಿ ಮಸೂದೆಯನ್ನು ಮಂಡಿಸಲಾಯಿತು.
ಯುಸಿಸಿಯಲ್ಲಿರುವ ನಿಯಮಗಳು
1- ಮದುವೆಯ ಸಮಯದಲ್ಲಿ, ಪುರುಷನ ವಯಸ್ಸು 21 ವರ್ಷಗಳು ಮತ್ತು ಮಹಿಳೆಯ ವಯಸ್ಸು 18 ವರ್ಷವಾಗಿರಬೇಕು.. ಸೆಕ್ಷನ್ 6 ರ ಅಡಿಯಲ್ಲಿ ಮದುವೆಯ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗೆ ಮಾಡಲು ವಿಫಲವಾದಲ್ಲಿ 20 ಸಾವಿರ ರೂಪಾಯಿ ದಂಡ.
2- ಮದುವೆಯ ಅವಧಿಯು ಒಂದು ವರ್ಷ ಪೂರ್ಣಗೊಳ್ಳುವವರೆಗೆ ಯಾವುದೇ ಪುರುಷ ಅಥವಾ ಮಹಿಳೆ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.
3- ವಿವಾಹವನ್ನು ಯಾವುದೇ ಧಾರ್ಮಿಕ ಆಚರಣೆಯಲ್ಲಿ ನಡೆದಿದ್ದರೂ, ವಿಚ್ಛೇದನ ಮಾತ್ರ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಮಾತ್ರ ನಡೆಯಬೇಕು.
4- ವಿಚ್ಛೇದನದ ಕುರಿತು ನ್ಯಾಯಾಲಯವು ನಿರ್ಧಾರವನ್ನು ನೀಡಿದಾಗ ಮತ್ತು ಆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಯಾವುದೇ ಹಕ್ಕು ಇಲ್ಲದಿದ್ದಾಗ ಮಾತ್ರ ಯಾವುದೇ ವ್ಯಕ್ತಿಯು ಮರುಮದುವೆಯಾಗುವ ಹಕ್ಕನ್ನು ಪಡೆಯುತ್ತಾನೆ.
5- ಕಾನೂನಿಗೆ ವಿರುದ್ಧವಾಗಿ ವಿವಾಹವಾದರೆ, ಆರು ತಿಂಗಳ ಜೈಲು ಮತ್ತು ರೂ 50 ಸಾವಿರದವರೆಗೆ ದಂಡ ವಿಧಿಸಬಹುದು. ಇದಲ್ಲದೇ ನಿಯಮಗಳಿಗೆ ವಿರುದ್ಧವಾಗಿ ವಿಚ್ಛೇದನ ಪಡೆದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
6- ಪುರುಷ ಮತ್ತು ಮಹಿಳೆಯ ನಡುವಿನ ಎರಡನೇ ಮದುವೆಯನ್ನು ಅವರ ಪಾರ್ಟ್ನರ್ ಯಾರೂ ಜೀವಂತವಾಗಿರದಿದ್ದಾಗ ಮಾತ್ರ ಮಾಡಬಹುದು.
7- ಮದುವೆಯಾದ ಬಳಿಕವೂ ಪುರುಷ ಅಥವಾ ಮಹಿಳೆ ಬೇರೊಬ್ಬರೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದರೆ, ಅದನ್ನು ವಿಚ್ಛೇದನಕ್ಕೆ ಆಧಾರವಾಗಿ ಬಳಸಬಹುದು.
8- ನಂಪುಂಸಕತೆ ಅಥವಾ ಉದ್ದೇಶಪೂರ್ವಕವಾಗಿ ಸೇಡು ತೀರಿಸಿಕೊಳ್ಳುವ ಕಾರಣದಿಂದ ಯಾರಾದರೂ ಮದುವೆಯಾಗಿದ್ದರೆ, ವಿಚ್ಛೇದನಕ್ಕಾಗಿ ಯಾರಾದರೂ ನ್ಯಾಯಾಲಯಕ್ಕೆ ಹೋಗಬಹುದು.
9- ಪುರುಷ, ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದರೆ ಅಥವಾ ಮದುವೆಯಾದ ಬಳಿಕ ಮಹಿಳೆ ಬೇರೊಬ್ಬರಿಂದ ಗರ್ಭಿಣಿಯಾಗಿದ್ದರೆ, ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ಪುರುಷ ಅಥವಾ ಮಹಿಳೆ ಮತಾಂತರಗೊಂಡರೆ, ಅದನ್ನು ವಿಚ್ಛೇದನ ಅರ್ಜಿಗೆ ಆಧಾರವಾಗಿ ಮಾಡಬಹುದು.
ಏಕರೂಪ ಸಂಹಿತೆಗೆ ಉತ್ತರಾಖಂಡ ಸಂಪುಟ ಅಸ್ತು: ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡನೆ
10- ಆಸ್ತಿಗೆ ಸಂಬಂಧಿಸಿದಂತೆ ಪುರುಷರು ಮತ್ತು ಮಹಿಳೆಯರು ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ. ಇದರಲ್ಲಿ ಯಾವುದೇ ರೀತಿಯ ತಾರತಮ್ಯ ಇರುವುದಿಲ್ಲ. ಇದಲ್ಲದೇ, ಉಯಿಲು ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಹಲವು ವಿಧದ ನಿಯಮಗಳನ್ನು ಸಹ ಸೇರಿಸಲಾಗಿದೆ.
ಏಕರೂಪ ನಾಗರಿಕ ಸಂಹಿತೆ ಕರಡು ಬಿಲ್ಗೆ ಉತ್ತರಾಖಂಡ ಸಂಪುಟ ಅನುಮೋದನೆ, ಫೆ.6ಕ್ಕೆ ಮಂಡನೆ!