UP Elections: 70 ಕ್ಷೇತ್ರಗಳಲ್ಲಿ ಸೋತ ಅಭ್ಯರ್ಥಿ ಗೆಲ್ಲಿಸುವ ಷಡ್ಯಂತ್ರ: ಟಿಕಾಯತ್ ಗಂಭೀರ ಆರೋಪ
* ರೈತ ಮುಖಂಡ ರಾಕೆಶ್ ಟಿಕಾಯತ್ ಗಂಭೀರ ಆರೋಪ
* ಇವಿಎಂ ಇಟ್ಟ ಕೇಂದ್ರಗಳ ಕಾವಲು ಕಾಯುವಂತೆ ಟಿಕಾಯತ್ ಮನವಿ
* ಸೋತ ಅಭ್ಯರ್ಥಿಗಳನ್ನು ಗೆಲ್ಲಿಸುವ ಷಡ್ಯಂತ್ರ
ಲಕ್ನೋ(ಮಾ.06): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನಕ್ಕೂ ಮುನ್ನ, ರೈತ ಮುಖಂಡ ರಾಕೇಶ್ ಟಿಕಾಯತ್ ಮಹತ್ವದ ಹೇಳಿಕೆ ನೀಡಿದ್ದಾರೆ. ಮತ ಎಣಿಕೆಯಲ್ಲಿ ಭಾರೀ ಅಕ್ರಮ ನಡೆದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಟಿಕಾಯತ್, ರಾಜ್ಯದಲ್ಲಿ ಕನಿಷ್ಠ 70 ಸ್ಥಾನಗಳಲ್ಲಿ ಸೋಲನುಭವಿಸಿದ ಅಭ್ಯರ್ಥಿಗೆ ಗೆಲುವಿನ ಪ್ರಮಾಣ ಪತ್ರ ನೀಡಬಹುದು ಎಂದಿದ್ದಾರೆ. ಇದೇ ವೇಳೆ ಮತದಾನದ ನಂತರ ಇವಿಎಂ ಇರಿಸಿರುವ ಸ್ಥಳಗಳಲ್ಲಿ ಕಾವಲು ಕಾಯುವಂತೆ ರೈತರಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್, ಬಿಜೆಪಿ ಸರಕಾರ ಮತ ಎಣಿಕೆಯಲ್ಲಿ ಅಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅಕ್ರಮವೆಸಗಿ ಕನಿಷ್ಠ 70 ಸ್ಥಾನಗಳನ್ನು ಗೆಲ್ಲಲು ಸಿದ್ಧತೆ ನಡೆಸಲಾಗುತ್ತಿದೆ ಎಂದಿರುವ ಅವರು ಮತ ಎಣಿಕೆಗೆ ಒಂದು ರಾತ್ರಿ ಮೊದಲು ರೈತರು ಹಾಗೂ ಇತರೆ ಮತದಾರರು ಮತ ಎಣಿಕೆ ಸ್ಥಳದ ಸುತ್ತ ಜಮಾಯಿಸುವಂತೆ ಮನವಿ ಮಾಡಿದ್ದಾರೆ. ನಿಮ್ಮ ಮೇಲ್ವಿಚಾರಣೆಯಲ್ಲಿ ಎಣಿಕೆಯನ್ನು ಮಾಡಿ. ಅಕ್ರಮ ಎಸಗಿದ್ದಾರೆಂಬ ಅನುಮಾನ ಹುಟ್ಟಿದರೆ, ಶಾಂತಿಯುತವಾಗಿ ಮತ್ತೆ ಎಣಿಕೆಯನ್ನು ಮಾಡಿ ಎಂದಿದ್ದಾರೆ
ಎಣಿಕೆಯಲ್ಲಿ ದೊಡ್ಡ ಅಕ್ರಮ ನಡೆದಿರುವುದು ಕಾಣಬಹುದು ಎಂದು ರಾಕೇಶ್ ಟಿಕಾಯತ್ ಆತಂಕ ವ್ಯಕ್ತಪಡಿಸಿದರು. ಮಾರ್ಚ್ 9 ಮತ್ತು 10ರ ರಜಾ ದಿನಗಳನ್ನು ಇಟ್ಟುಕೊಂಡು ಎಣಿಕೆ ಮೇಲೆ ನಿಗಾ ಇಡುವಂತೆ ರೈತರಿಗೆ ತಿಳಿಸಲಾಗಿದೆ ಎಂದರು. ಪ್ರತಿ ಜಿಲ್ಲೆಯಿಂದ ಕನಿಷ್ಠ ಒಬ್ಬ ಅಭ್ಯರ್ಥಿಯನ್ನು ಅಕ್ರಮ ನಡೆಸಿ ಗೆಲ್ಲಿಸುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಟಿಕಾಯತ್ ಹೇಳಿದರು. ಸೋತ ಅಭ್ಯರ್ಥಿಗೂ ಗೆಲುವಿನ ಪ್ರಮಾಣ ಪತ್ರ ನೀಡಲಾಗುವುದು ಎಂದು ಆರೋಪಿಸಿದರು
ಉತ್ತರ ಪ್ರದೇಶ ವಿಧಾನಸಭೆಗೆ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಇಲ್ಲಿಯವರೆಗೆ 6 ಹಂತದ ಮತದಾನ ನಡೆದಿದೆ. ಏಳನೇ ಮತ್ತು ಅಂತಿಮ ಹಂತದ ಮತದಾನ ಮಾರ್ಚ್ 7 ಸೋಮವಾರ ನಡೆಯಲಿದೆ. ರಾಜ್ಯದ 9 ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ಈ ಮತದಾನ ನಡೆಯಲಿದೆ. ಶನಿವಾರ ಸಂಜೆ 6 ಗಂಟೆಗೆ ಚುನಾವಣಾ ಪ್ರಚಾರ ಅಂತ್ಯಗೊಂಡಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಶಕ್ತಿಮೀರಿ ಪ್ರಚಾರ ನಡೆಸಿವೆ. ಬಿಜೆಪಿ ಭದ್ರಕೋಟೆ ವಾರಣಾಸಿ ಸೇರಿದಂತೆ ಪೂರ್ವಾಂಚಲ್ನ 9 ಜಿಲ್ಲೆಗಳನ್ನು ಸೇರಿಸಲಾಗಿದೆ. ಇದುವರೆಗೆ ಯುಪಿಯ 403 ಸ್ಥಾನಗಳ ಪೈಕಿ 349 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಎಲ್ಲಾ ಹಂತಗಳ ಮತ ಎಣಿಕೆಯು ಮಾರ್ಚ್ 10 ರಂದು ಏಕಕಾಲದಲ್ಲಿ ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ನೀಡಿ: ಮೋದಿ
ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ನೀಡಬೇಕು. ಇದರಿಂದ ರಾಜ್ಯವನ್ನು ಆರ್ಥಿಕ ಅಭಿವೃದ್ಧಿಯ ನಿಟ್ಟಿನಿಲ್ಲಿ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಬುದ್ಧಿಜೀವಿಗಳು ಮತ್ತು ಇತರ ಪ್ರಮುಖ ವ್ಯಕ್ತಿಗಳೊಂದಿಗೆ ಅವರು ಸಂವಾದ ನಡೆಸಿದ್ದಾರೆ
ಈ ಸಂವಾದದಲ್ಲಿ ಪದ್ಮಭೂಷಣ ಪ್ರಶಸ್ತಿ ವಿಜೇತ ಹಿಂದೂಸ್ತಾನಿ ಗಾಯಕ ಚನ್ನುಲಾಲ್ ಮಿಶ್ರಾ, ಬಿಎಚ್ಯುನ ಉಪಕುಲಪತಿ ಸುಧೀರ್ ಜೈನ್, ವಾರಾಣಸಿಯ ಪ್ರಮುಖ ಪಾನ್ ಮಾರಾಟಗಾರ ಅಶ್ವಿನಿ ಚೌರಾಸಿಯಾ ಹಾಗೂ ಶುಕ್ರವಾರ ಮೋದಿ ಟೀ ಕುಡಿದಿದ್ದ ಅಂಗಡಿಯ ಮಾರಾಟಗಾರ ಪಪ್ಪು ಸೇರಿದಂತೆ ಸುಮಾರು 200 ಜನÜ ಈ ಸಂವಾದಲ್ಲಿ ಭಾಗವಹಿಸಿದ್ದರು.
ನಂತರ ವಾರಾಣಸಿಯ ಖಜೂರಿಯಲ್ಲಿ ನಡೆಸಿದ ಚುನಾವಣಾ ರಾರಯಲಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಸ್ವಚ್ಛ ಭಾರತ ಅಭಿಯಾನ, ವೋಕಲ್ ಫಾರ್ ಲೋಕಲ್ ಅಭಿಯಾನಗಳ ಕುರಿತು ಹಾಸ್ಯ ಮಾಡುತ್ತಿದ್ದಾರೆ. ಉಕ್ರೇನ್ ಬಿಕ್ಕಟ್ಟನ್ನೂ ಸಹ ವಿಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ಆದರೆ ಬಿಜೆಪಿ ವಿಶ್ವಮಟ್ಟದಲ್ಲಿ ದೇಶ ಗುರುತಿಸಿಕೊಳ್ಳುವಂತೆ ಮಾಡಿದೆ ಎಂದು ಅವರು ಹೇಳಿದರು.