ಸಾರ್ವಜನಿಕ ಸಮಾರಂಭದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಹೊಗಳಿದ್ದ ನಿತಿನ್‌ ಗಡ್ಕರಿ, ಮಧ್ಯಪ್ರದೇಶದಲ್ಲಿ ನಿರ್ಮಾಣವಾಗಿರುವ ಕೆಟ್ಟ ರಸ್ತೆಗಳ ಬಗ್ಗೆ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿದ್ದಾರೆ. 

ಭೋಪಾಲ್‌ (ನ.9): ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರ ಮಾತುಗಳು ಕೇಂದ್ರ ಸರ್ಕಾರಕ್ಕೆ ಇರಿಸುಮುರಿಸು ಉಂಟಾಗುವುದು ಹೊಸದೇನಲ್ಲ. ಒಂದು ದಿನದ ಹಿಂದೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ಗೆ ದೇಶ ಋಣಿಯಾಗಿರಬೇಕು ಎಂದಿದ್ದ ಅವರು, ಗುರುವಾರ ಕೆಟ್ಟ ರಸ್ತೆಗಳು ನಿರ್ಮಾಣವಾದ ಬಗ್ಗೆ ಜನರ ಕ್ಷಮೆಯಾಚಿಸಿ ಸುದ್ದಿಯಾಗಿದ್ದಾರೆ. ಮಧ್ಯಪ್ರದೇಶದ ಹೆದ್ದಾರಿಯ ಒಂದು ಭಾಗವನ್ನು ಅತ್ಯಂತ ಕೆಟ್ಟದಾಗಿ ನಿರ್ಮಾಣ ಮಾಡಲಾಗಿತ್ತು. ಇದಕ್ಕಾಗಿ ಸ್ಥಳೀಯ ಜನರ ಕ್ಷಮೆ ಕೇಳಿದ ಅವರು, ಈ ಪ್ರಾಜೆಕ್ಟ್‌ಗೆ ಹೊಸ ಗುತ್ತಿಗೆಯನ್ನು ನೀಡಲಾಗಿದೆ ಎನ್ನುವ ಮಾಹಿತಿ ನೀಡಿದರು. "ನನಗೆ ದುಃಖ ಮತ್ತು ನೋವಾಗಿದೆ. ತಪ್ಪಾಗಿದ್ದರೆ ಕ್ಷಮೆಯಾಚಿಸಲು ನಾನು ಹಿಂಜರಿಯುವುದಿಲ್ಲ. ಮಂಡ್ಲಾದಿಂದ ಜಬಲ್‌ಪುರ ಹೆದ್ದಾರಿಯಲ್ಲಿ, ಬರೇಲಾದಿಂದ ಮಂಡ್ಲಾವರೆಗಿನ 63 ಕಿ.ಮೀ ಉದ್ದದ ಸುಮಾರು ₹ 400 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಹೆದ್ದಾರಿಯ ಬಗ್ಗೆ ನನಗೆ ತೃಪ್ತಿ ಇಲ್ಲ ಎಂದು ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಧ್ಯಪ್ರದೇಶದ ಜಬಲ್ಪುರದಲ್ಲಿ ಹೇಳಿದ್ದಾರೆ.

ಕೇಂದ್ರ ಸಚಿವರು ಕೆಟ್ಟ ರಸ್ತೆಗಾಗಿ ಕ್ಷಮೆ ಕೇಳುತ್ತಿದ್ದಂತೆ, ಸಮಾರಂಭದಲ್ಲಿದ್ದ ಜನರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಕೂಡ ವೇದಿಕೆಯ ಮೇಲಿದ್ದರು.

“ ಆ ರಸ್ತೆಯಲ್ಲಿ ಸಮಸ್ಯೆ ಇದೆ ಮತ್ತು ನಿಮ್ಮಲ್ಲಿ ಅನೇಕರು ತೊಂದರೆಗಳನ್ನು ಎದುರಿಸಿದ್ದೀರಿ. ನಾನು ಇಲ್ಲಿಗೆ ಬರುವ ಮೊದಲು ನನ್ನ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರಿಗೆ ಯಾವ ಕೆಲಸ ಬಾಕಿ ಇದೆ, ಅದರ ಬಗ್ಗೆ ಚರ್ಚಿಸುವಂತೆ ಹೇಳಿದ್ದೇನೆ. ಪರಸ್ಪರ ಒಮ್ಮತದ ನಂತರ ಯೋಜನೆಯನ್ನು ಸ್ಥಗಿತಗೊಳಿಸಿ ಮತ್ತು ಹಳೆಯ ಕೆಲಸವನ್ನು ಸರಿಪಡಿಸುವಂತೆ ಹೇಳಿದ್ದಾರೆ. ಅದಕ್ಕಾಗಿ ಹೊಸ ಟೆಂಡರ್‌ ಕರೆಯುವಂತೆ ತಿಳಿಸಿದ್ದೇನೆ. ಶೀಘ್ರದಲ್ಲಿಯೇ ಖಂಡಿತವಾಗಿ ಹೊಸದಾದ ಉತ್ತಮವಾದ ಹೆದ್ದಾರಿ ನಿರ್ಮಾಣವಾಗಲಿದೆ. ನೀವು ಇಲ್ಲಿಯವರೆಗೆ ಏನು ಎದುರಿಸಿದ್ದೀರೋ, ಅದಕ್ಕಾಗಿ ನಾನು ನಿಮ್ಮ ಕ್ಷಮೆ ಯಾಚಿಸುತ್ತೇನೆ ಎಂದು ಗಡ್ಕರಿ ಹೇಳಿದರು. ಗಡ್ಕರಿ ಮತ್ತು ಶಿವರಾಜ್‌ ಸಿಂಗ್‌ ಚೌಹಾಣ್ ಒಟ್ಟಿಗೆ ಎಂಟು ರಸ್ತೆ ಯೋಜನೆಗಳಿಗೆ ಚಾಲನೆ ನೀಡಿದರು.

Add Asianetnews Kannada as a Preferred SourcegooglePreferred

ದೇಶ ಮನಮೋಹನ್‌ ಸಿಂಗ್‌ಗೆ ಋಣಿಯಾಗಿರಬೇಕು ಎಂದಿದ್ದೇಕೆ ನಿತಿನ್‌ ಗಡ್ಕರಿ?

ತಾವು ಸಚಿವರಾಗಿದ್ದ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ರಸ್ತೆಗಳ ನಿರ್ಮಾಣಕ್ಕಾಗಿ 6 ಲಕ್ಷ ಕೋಟಿ ಹಣ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಕೆಲಸ ಮತ್ತಷ್ಟು ವೇಗವಾಗಲು ಭೂ ಸ್ವಾಧೀನ ಮತ್ತು ಅರಣ್ಯಗಳನ್ನು ಅಡ್ಡಿಗಳನ್ನು ತೆರವು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ಬೆಂಗ್ಳೂರಿಗೆ ‘ಸ್ಕೈ, ಟ್ರಾಲಿ ಬಸ್‌’ ಸೇವೆ: ಕೇಂದ್ರ ಸಚಿವ ಗಡ್ಕರಿ

ಗಡ್ಕರಿಯವರ ಸರಳ ಮಾತುಗಳು ಅವರನ್ನು ಬಿಜೆಪಿಯೊಳಗೆ ಆಗಾಗ್ಗೆ ತೊಂದರೆಗೆ ಸಿಲುಕಿಸುತ್ತವೆ. 2004 ಮತ್ತು 2014 ರ ನಡುವೆ ಎರಡು ಕಾಂಗ್ರೆಸ್ ಸರ್ಕಾರಗಳನ್ನು ಮುನ್ನಡೆಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರ್ಥಿಕ ಸುಧಾರಣೆಗಳಿಗಾಗಿ ದೇಶವು ಋಣಿಯಾಗಿದೆ ಎಂದು ಅವರು ಮಂಗಳವಾರ ಹೇಳಿದ್ದರು. ದೇಶಕ್ಕೆ ಹೊಸ ದಿಕ್ಕನ್ನು ನೀಡಿದ ಉದಾರೀಕರಣಕ್ಕಾಗಿ ದೇಶವು ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ" ಎಂದು ಖಾಸಗಿ ಪ್ರಶಸ್ತ ಪ್ರದಾನ ಸಮಾರಂಭದಲ್ಲಿ ಗಡ್ಕರಿ ಹೇಳಿದ್ದರು.