ಭಾರತ- ಮ್ಯಾನ್ಮಾರ್ ಗಡಿಯಲ್ಲಿದ್ದ ಮುಕ್ತ ಓಡಾಟ ರದ್ದುಗೊಳಿಸಿದ ಕೇಂದ್ರ ಸರ್ಕಾರ
ಭಾರತ- ಮ್ಯಾನ್ಮಾರ್ ನಡುವೆ ಮುಕ್ತ ಓಡಾಟ ರದ್ದತಿಗೆ ಕೇಂದ್ರದ ನಿರ್ಧಾರ. ಗಡಿಗೆ ಬೇಲಿ ಅಳವಡಿಕೆ ಘೋಷಣೆ ಬೆನ್ನಲ್ಲೇ ತೀರ್ಮಾನ
ನವದೆಹಲಿ (ಫೆ.9): ಭಾರತ ಹಾಗೂ ಮ್ಯಾನ್ಮಾರ್ ನಡುವೆ ಕಳೆದ ಆರು ವರ್ಷಗಳಿಂದ ಇರುವ ಮುಕ್ತ ಓಡಾಟ ವ್ಯವಸ್ಥೆಯನ್ನು ರದ್ದುಗೊಳಿಸುವ ಮಹತ್ವದ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ದೇಶದ ಆಂತರಿಕ ಭದ್ರತೆ ಹಾಗೂ ಜನಸಂಖ್ಯಾ ಸ್ವರೂಪವನ್ನು ಕಾಯ್ದುಕೊಳ್ಳುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.
ಭಾರತ- ಮ್ಯಾನ್ಮಾರ್ ನಡುವಣ 1643 ಕಿ.ಮೀ. ಗಡಿಗೆ ಬೇಲಿ ಹಾಕಲು ತೀರ್ಮಾನಿಸಲಾಗಿದೆ ಎಂದು ಅಮಿತ್ ಶಾ ಎರಡು ದಿನಗಳ ಹಿಂದಷ್ಟೇ ಹೇಳಿದ್ದರು. ಅದರ ಬೆನ್ನಲ್ಲೇ ಮುಕ್ತ ಓಡಾಟ ರದ್ದತಿ ಘೋಷಣೆಯನ್ನು ಅವರು ಮಾಡಿದ್ದಾರೆ.
ವಿದೇಶಿ ವಿದ್ಯಾರ್ಥಿಗಳಿಗೆ ಕರ್ನಾಟಕವೇ ನಂ.1 ಆಯ್ಕೆ, ನಮ್ ರಾಜ್ಯದಲ್ಲಿ ವಿವಿಧ ದೇಶಗಳ 6000 ವಿದ್ಯಾರ್ಥಿಗಳು
‘ಆಕ್ಟ್ ಈಸ್ಟ್ ಪಾಲಿಸಿ’ಯ ಭಾಗವಾಗಿ 2018ರಲ್ಲಿ ಭಾರತ- ಮ್ಯಾನ್ಮಾರ್ ನಡುವೆ ಮುಕ್ತ ಓಡಾಟ ವ್ಯವಸ್ಥೆ ಜಾರಿಗೆ ಬಂದಿತ್ತು. ಇದರ ಪ್ರಕಾರ, ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಉಭಯ ದೇಶಗಳ ವಾಸಿಗಳು 16 ಕಿ.ಮೀ.ವರೆಗೆ ಯಾವುದೇ ದಾಖಲೆ ಇಲ್ಲದೆ ಮುಕ್ತವಾಗಿ ಓಡಾಡಬಹುದಾಗಿದೆ.
ಮುಂದುವರಿದ ಜಾತಿಗಳು ಮೀಸಲು ಪಟ್ಟಿಯಿಂದ ಹೊರಬನ್ನಿ, ಎಸ್ಸಿ-ಎಸ್ಟಿ ಒಳಮೀಸಲು ತೀರ್ಪು ಕಾಯ್ದಿರಿಸಿದ ಸುಪ್ರೀಂ
ಆದರೆ ಈ ವ್ಯವಸ್ಥೆಯ ಲಾಭ ಪಡೆದು ಮ್ಯಾನ್ಮಾರ್ನ ಬುಡಕಟ್ಟು ಉಗ್ರಗಾಮಿಗಳು ದೇಶದೊಳಕ್ಕೆ ಪ್ರವೇಶಿಸುತ್ತಿದ್ದಾರೆ. ಭಾರತಕ್ಕೆ ಮಾದಕವಸ್ತುಗಳನ್ನು ಸಾಗಿಸಲಾಗುತ್ತಿದೆ. ಅಲ್ಲದೆ ಅಕ್ರಮ ವಲಸಿಗರು ದೇಶದೊಳಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಮ್ಯಾನ್ಮಾರ್ನ ಜುಂಟಾ ಆಳ್ವಿಕೆ ವಿರುದ್ಧ ಇರುವ ಬಂಡುಕೋರರು ಕೂಡ 2021ರ ತರುವಾಯ ಭಾರಿ ಪ್ರಮಾಣದಲ್ಲಿ ದೇಶಕ್ಕೆ ಆಗಮಿಸುತ್ತಿದ್ದಾರೆ ಎಂದು ಈಶಾನ್ಯ ರಾಜ್ಯಗಳು ಆರೋಪಿಸಿದ್ದವು. ಅದರ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.