ಅರ್ಧದಷ್ಟು ಭಾರತೀಯರಿಗೆ ನಿರುದ್ಯೋಗದ್ದೇ ಚಿಂತೆ: ಸಮೀಕ್ಷೆ| ಆದರೂ ದೇಶ ಸರಿಯಾದ ದಿಕ್ಕಲ್ಲಿದೆ: 69% ಜನರ ಅಭಿಪ್ರಾಯ

ನವದೆಹಲಿ[ಡಿ.28]: ಭಾರತದ ಬಹುತೇಕ ಅರ್ಧದಷ್ಟುನಗರವಾಸಿಗಳಿಗೆ ನಿರುದ್ಯೋಗ ಚಿಂತೆಯಾಗಿ ಕಾಡುತ್ತಿದೆ ಎಂಬ ಸಂಗತಿ ಜಾಗತಿಕ ಸಂಶೋಧನಾ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಇದೇ ವೇಳೆ, ಶೇ.69ರಷ್ಟುಭಾರತೀಯರು ತಮ್ಮ ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಪ್ಸೋಸ್‌ ಎಂಬ ಸಂಸ್ಥೆ 28 ದೇಶಗಳಲ್ಲಿ ನಡೆಸಿರುವ ‘ವಿಶ್ವವನ್ನು ಕಾಡುತ್ತಿರುವ ಚಿಂತೆ ಯಾವುದು’ ಎಂಬ ಮಾಸಿಕ ಸಮೀಕ್ಷೆಯ ಪ್ರಕಾರ, ಶೇ.46ರಷ್ಟುನಗರ ಭಾರತೀಯರು ತಮಗೆ ನಿರುದ್ಯೋಗ ಅಥವಾ ಉದ್ಯೋಗ ಅಲಭ್ಯತೆ ಚಿಂತೆಯಾಗಿ ಕಾಡುತ್ತಿದೆ ಎಂದು ನವೆಂಬರ್‌ನಲ್ಲಿ ಹೇಳಿದ್ದಾರೆ. ಅಕ್ಟೋಬರ್‌ಗೆ ಹೋಲಿಸಿದರೆ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದವರ ಪ್ರಮಾಣದಲ್ಲಿ ಶೇ.3ರಷ್ಟುಹೆಚ್ಚಳ ಕಂಡುಬಂದಿದೆ.

ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರ, ಅಪರಾಧ ಹಾಗೂ ಹಿಂಸೆ, ಬಡತನ ಮತ್ತು ಸಾಮಾಜಿಕ ಅಸಮಾನತೆ, ಹವಾಮಾನ ಬದಲಾವಣೆ ವಿಷಯಗಳು ಭಾರತವನ್ನು ಕಾಡುತ್ತಿರುವ ಇತರೆ ವಿಷಯಗಳಾಗಿವೆ.

ವಿಶೇಷ ಎಂದರೆ, ವಿಶ್ವದಾದ್ಯಂತ ಬಹುತೇಕ ಜನರಿಗೆ ತಮ್ಮ ದೇಶದ ಬಗ್ಗೆ ನಿರಾಶಾವಾದ ಇದೆ. ಜಾಗತಿಕ ಸರಾಸರಿಯ ಪ್ರಕಾರ ಶೇ.61ರಷ್ಟುಮಂದಿ ತಮ್ಮ ದೇಶ ತಪ್ಪು ದಾರಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಅದಕ್ಕೆ ತದ್ವಿರುದ್ಧವಾಗಿ 69% ಭಾರತೀಯರು ತಮ್ಮ ದೇಶ ಸರಿಯಾದ ದಿಕ್ಕಿನಲ್ಲಿದೆ ಎಂಬ ಅಭಿಪ್ರಾಯ ತಿಳಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.