ಹೃದಯಾಘಾತದಿಂದ ತಂದೆಯ ಸಾವು, ಶವಕ್ಕೆ ಕುಂಕುಮ ಹಚ್ಚಿ ಆಟವಾಡುತ್ತಿದ್ದ ಪುಟ್ಟ ಮಕ್ಕಳು!
ಕಾಶಿನಗರದ ಲಖೀಂಪುರ ಖೇರಿಯಲ್ಲಿ ಎರಡು ವರ್ಷದ ಅವಳಿ ಹೆಣ್ಣು ಮಕ್ಕಳೊಂದಿಗೆ ಆಟವಾಡುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಆದರೆ, ತಂದೆಯೊಂದಿಗೆ ಆಟವಾಡುತ್ತಿದ್ದ ಇಬ್ಬರೂ ಪುಟ್ಟ ಅವಳಿ ಮಕ್ಕಳಿಗೆ ಏನೂ ಅರ್ಥವಾಗಲಿಲ್ಲ. ಅಪ್ಪ ಮಲಗಿದ್ದಾರೆ ಎಂದುಕೊಂಡು ಅಮ್ಮನ ಸಿಂಧೂರವನ್ನು ಅಪ್ಪನ ಶವದ ಮೇಲೆ ಹಚ್ಚಿ ಮುಗ್ಧವಾಗಿ ಎಬ್ಬಿಸುತ್ತಲೇ ಇದ್ದರು. ತಾಯಿ ಕರ್ತವ್ಯ ಮುಗಿಸಿ ಮನೆಗೆ ಬಂದಾಗ ಪತಿಗೆ ಹೃದಯಾಘಾತವಾಗಿರುವುದು ತಿಳಿದು ಬಂದಿದೆ. ಈ ವಿಡಿಯೋ ನೋಡಿದರೆ ಕರುಳು ಚುರುಕ್ ಎನಿಸದೇ ಇರದು. ಪತಿ ಪತ್ನಿ ಇಬ್ಬರೂ ವೈದ್ಯರಾಗಿ ಕೆಲಸ ಮಾಡುತ್ತಿದ್ದರು.
ಲಕ್ನೋ (ಜುಲೈ 29): ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಮನಕಲಕುವ ಘಟನೆಯಲ್ಲಿ ಸರ್ಕಾರಿ ವೈದ್ಯರೊಬ್ಬರು ಹೃದಯಾಘಾತದಿಂದ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಈ ವೇಳೆ ಅವರು ಕೋಣೆಯಲ್ಲಿ ತನ್ನ ಇಬ್ಬರು ಪುಟ್ಟ ಅವಳಿ ಮಕ್ಕಳ ಜೊತೆ ಆಟವಾಡುತ್ತಿದ್ದರು. ಆದರೆ, ಅಪ್ಪನ ಸಾವು ಮಕ್ಕಳಿಗೆ ಅರ್ಥವಾಗಲಿಲ್ಲ. ಇಬ್ಬರೂ ಪುಟ್ಟ ಹೆಣ್ಣು ಮಕ್ಕಳು ತಂದೆಯ ಮೃತದೇಹದ ಮೇಲೆ ಹತ್ತಿ ಕುಣಿದು ಆಟವಾಡಲು ಆರಂಭಿಸಿದ್ದಾರೆ. ಪತಿಯ ಸಾವಿನ ಬಗ್ಗೆ ಒಂಚೂರು ಮಾಹಿತಿ ಇರದೇ ಇದ್ದ ಪತ್ನಿ, ಕೆಲಸ ಮುಗಿಸಿ ಮನೆಗೆ ಬಂದಾಗ ಈ ಹೃದಯ ವಿದ್ರಾವಕ ದೃಶ್ಯ ಕಂಡು ಆಘಾತಕ್ಕೆ ಒಳಗಾಗಿದ್ದಾಳೆ. ಈ ಸಂಪೂರ್ಣ ವಿಷಯವು ಕಾಶಿನಗರ ಪೊಲೀಸ್ ಠಾಣೆಯ ಸದರ್ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ಸರ್ಕಾರಿ ವೈದ್ಯ ದಂಪತಿ ರಾಜೇಶ್ ಮೋಹನ್ ಗುಪ್ತಾ ಮತ್ತು ಡಾ.ವೀಣಾ ಗುಪ್ತಾ ಕಳೆದ 5 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಎಂಬಿಬಿಎಸ್ ಆಗಿರುವ ವೈದ್ಯ ರಾಜೇಶ್ ಮೋಹನ್ ಗುಪ್ತಾ ನಗರದಿಂದ ಸುಮಾರು 3 ಕಿಮೀ ದೂರದಲ್ಲಿರುವ ಬಾಜುಡಿಹಾ ಗ್ರಾಮದಲ್ಲಿ ನಿಯೋಜನೆಗೊಂಡಿದ್ದರೆ, ಅವರ ಪತ್ನಿ ನಗರದ ಸಿಎಚ್ಸಿಯಲ್ಲಿ ನಿಯೋಜನೆಗೊಂಡಿದ್ದಾರೆ.
ಮನೆಯ ಬಾಗಿಲನ್ನು ಮುರಿದು ಒಳಹೊಕ್ಕಿದ್ದರು: ಇದು ಜುಲೈ 26 ರಂದು ನಡೆದ ಘಟನೆಯಾಗಿದೆ. ಪ್ರತಿದಿನದಂತೆ ಜುಲೈ 26 ರಂದು ಮಧ್ಯಾಹ್ನ 1.30ರ ಸುಮಾತಿಗೆ ವೀಣಾ ಗುಪ್ತಾ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯ ಬಾಗಿಲು ಲಾಕ್ ಆಗಿರುವುದು ಕಂಡಿದ್ದರು. ಈ ವೇಳೆ ಮನೆಯ ಹೊರಗಡೆಯಿಂದ ಪತಿಯ ಹೆಸರನ್ನು ಕೂಗಿ ಕರೆಯಲು ಆರಂಭಿಸಿದರು. ಆದರೆ, ಒಳಗಡೆಯಿಂದ ಮಕ್ಕಳ ಮಾತುಗಳ ಹೊರತಾಗಿ ಬೇರೇನೂ ಕೇಳುಸುತ್ತಿರಲಿಲ್ಲ. ಈ ವೇಳೆ ವೀಣಾ ಗುಪ್ತಾ, ಮನೆಯ ಮೇಲೆ ವಾಸವಾಗಿದ್ದ ಮಾಲೀಕರನ್ನು ಕರೆದಿದ್ದರು. ಆಗಲೂ ಕೂಡ ಮನೆ ಬಾಗಿಲು ತೆರೆಯಲಿಲ್ಲ. ಈ ವೇಳೆ, ಸ್ಥಳೀಯ ಜನರ ಸಹಾಯದೊಂದಿಗೆ ಮನೆಯ ಬಾಗಿಲನ್ನು ಮುರಿದು ಒಳಹೊಕ್ಕಾಗ ಆಘಾತಕಾರಿ ದೃಶ್ಯ ಕಂಡಿತ್ತು.
BENGALURU CRIME; ಸುಂದರಿ ಪತ್ನಿಗೆ ಆ್ಯಸಿಡ್ ಎರಚಿ ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ
ಸಿಪಿಆರ್ ಮಾಡಿದ ಪತ್ನಿ: ಬಾಗಿಲು ಒಡೆದು ಒಳಹಿಕ್ಕಿದಾಗ ಪತಿ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಮತ್ತು ಇಬ್ಬರು ಅವಳಿ ಹೆಣ್ಣುಮಕ್ಕಳು ತಮ್ಮ ತಂದೆಯ ಮೈಮೇಲೆ ಸಿಂಧೂರವನ್ನು ಕೈ ಮತ್ತು ಕೆನ್ನೆಗೆ ಹಚ್ಚಿಕೊಂಡು ಆಟವಾಡುತ್ತಿರುವುದನ್ನು ವೀಣಾ ನೋಡಿದ್ದಾರೆ. ಮುಗ್ಧ ಹುಡುಗಿಯರು ತಂದೆಯ ಕಾಲು ಮತ್ತು ಹೊಟ್ಟೆಯ ಮೇಲೂ ಸಿಂಧೂರವನ್ನು ಹಾಕುತ್ತಿದ್ದರು. ಇದನ್ನೆಲ್ಲಾ ನೋಡಿದ ವೈದ್ಯ ಪತ್ನಿ ಪತಿಯನ್ನು ರಕ್ಷಿಸಿ ಎಂದು ಗೋಗರೆದಿದ್ದು, ಪತಿಗೆ ಹೃದಯಾಘಾತವಾಗಿದೆ ಎಂದು ಶಂಕಿಸಿ ಪ್ರಜ್ಞೆ ತಪ್ಪಿದ ಪತಿಯನ್ನು ತಾನೇ ರಕ್ಷಿಸಲು ಯತ್ನಿಸಿ ಎದೆಗೆ ಒತ್ತಿ ಸಿಪಿಆರ್ ನೀಡಲು ಪ್ರಯತ್ನಿಸಿದ್ದಾರೆ.
Breaking ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ NIAಗೆ ಹಸ್ತಾಂತರ
ಹೃದಯಾಘಾತದಿಂದ ಸಾವು: ಮತ್ತೊಂದೆಡೆ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಡಾ. ರಾಜೇಶ್ ಮೋಹನ್ ಗುಪ್ತಾ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮೂವರು ವೈದ್ಯರ ಮೇಲ್ವಿಚಾರಣೆಯಲ್ಲಿ ಮೃತ ವೈದ್ಯರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ತಿಳಿದುಬಂದಿದೆ. ಮೃತ ವೈದ್ಯ ರಾಜೇಶ್ ಮೋಹನ್ ಗುಪ್ತಾ ಬನಾರಸ್ ನಿವಾಸಿಯಾಗಿದ್ದು, ಅವರ ಪತ್ನಿ ವೀಣಾ ಗುಪ್ತಾ ಲಕ್ನೋ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ವೈದ್ಯರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.