ಅಧಿಕಾರಿಗಳು, ಶಾಸಕರು ಫೇಲ್; ಒಡವೆ ಮಾರಿ ಗ್ರಾಮಸ್ಥರೇ ನಿರ್ಮಿಸಿದ್ರು ರಸ್ತೆ!
ಹಲವು ದಶಕಗಳಿಂದ ಹಳ್ಳಿಯ ಗ್ರಾಮಸ್ಥರು ರಸ್ತೆ ನಿರ್ಮಿಸಿಕೊಂಡುವಂತೆ ಮನವಿ ಮೇಲೆ ಮನವಿ ನೀಡಿದ್ದಾರೆ. ಚುನಾವಣೆಗೂ ಮುನ್ನ ಮತಕ್ಕಾಗಿ ಆಗಮಿಸಿದ ಶಾಸಕರ ಬಳಿ ಪರಿ ಪರಿಯಾಗಿ ವಿನಂತಿಸಿಕೊಂಡಿದ್ದಾರೆ. ಧರಣಿ ಕೂತಿದ್ದಾರೆ. ಪಂಚಾಯಿತಿ, ತಾಲೂಕು ಕಚೇರಿಗಳನ್ನು ಅಲೆದಾಡಿದ್ದಾರೆ. ಆದರೆ ಇವರತ್ತ ಯಾರೂ ಕೂಡ ಕಣ್ಣೆತ್ತಿ ನೋಡಿಲ್ಲ. ಇದೀಗ ಗ್ರಾಮಸಸ್ಥರೆ ತಮ್ಮ ಒಡವೆ ಸೇರಿದಂತೆ ಇರುವುದೆಲ್ಲಾ ಮಾರಿ ಸ್ವತಃ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ.
ಚಿಂತಮಲ(ಆ.27): ಸ್ವಾತಂತ್ರ್ಯ ಬಂದು 74 ವರ್ಷಗಳು ಉರುಳಿದರೂ ಭಾರತದ ಹಲವು ಹಳ್ಳಿಗಳಿಗೆ ಇನ್ನೂ ರಸ್ತೆ, ವಿದ್ಯುತ್ ಸಂಪರ್ಕವೇ ಇಲ್ಲ. ಸರ್ಕಾರ, ಸ್ಥಳೀಯ ಆಡಳಿತದ ಗಮನಸೆಳೆಯುವ ಹಲವು ಪ್ರಯತ್ನಗಳು ಮಾಡಿದರೂ ಹಲವು ಹಳ್ಳಿಗಳತ್ತ ಅಧಿಕಾರಿಗಳು, ಶಾಸಕರು, ಮಂತ್ರಿಗಳು ಸೊಪ್ಪು ಹಾಕಿಲ್ಲ. ಕೊನೆಗೆ ಯಾವ ದಾರಿ ಕಾಣದಾಗ ಸ್ವತಃ ಹಳ್ಳಿಯ ಜನಗಳೇ ಒಂದು ನಿರ್ಧಾರಕ್ಕೆ ಬರುವುದು ಸರ್ವೆ ಸಾಮಾನ್ಯ. ಇದೀಗ ಆಂಧ್ರ ಪ್ರೇದಶದ ಸಾಲೂರು ಮಂಡಲದ ಕೊಡಮ ಪಂಚಾಯಿತಿ ವಲಯದಲ್ಲಿ ಬರುವ ಚಿಂತಮಲಾ ಬುಡ ಕಟ್ಟು ಹಳ್ಳಿಯ ಜನರು ಇದೇ ರೀತಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ.
ನಕ್ಸಲ್ ಸೇರಲು ಅನುಮತಿ ನೀಡಿ ಎಂದು ರಾಷ್ಟ್ರಪತಿಗೆ ಪತ್ರ; ಯವಕನ ಸಮಸ್ಯೆ ಪರಿಹರಿಸಲು ಕೋವಿಂದ್ ಸೂಚನೆ
ಹೆಸರೇ ಹೇಳುವಂತೆ ಚಿಂತಮಲಾ ಹಳ್ಳಿ ಬೆಟ್ಟ ಗುಡ್ಡಗಳಿಂದ ಕೂಡಿ ಹಳ್ಳಿ. ಹೆಚ್ಚು ಕಾಡಿನಿಂದ ಕೂಡಿರುವ ಪ್ರದೇಶ. 150 ಬುಡಕಟ್ಟ ಕುಟುಂಬಗಳು ವಾಸಿಸುವ ಈ ಹಳ್ಳಿಗೆ ರಸ್ತೆಯೇ ಇಲ್ಲ. ಕಾಲು ದಾರಿ ಮೂಲಕ ಕಾಡು, ಬೆಟ್ಟ ಗಡ್ಡುಗಳ ತಪ್ಪಲಿನಿಂದ ಪಟ್ಟಣಕ್ಕೆ ಬರಬೇಕು. ಆರೋಗ್ಯ ಹದಗೆಟ್ಟರೆ ಪ್ರಾಣ ಹೋದರೂ ಚಿಕಿತ್ಸೆ ಮಾತ್ರ ಸಿಗಲ್ಲ. ಆಸ್ಪತ್ರೆ ದಾಖಲಿಸಲು ಯಾವ ವ್ಯವಸ್ಥೆಯೂ ಇಲ್ಲ. ರಸ್ತೆ ಇಲ್ಲ ಅಂದರೆ ಇನ್ನೂ ಮೂಲ ಸೌಕರ್ಯದ ಮಾತು ಪಕ್ಕಕ್ಕೂ ಸುಳಿಯಲ್ಲ.
ಕಳೆದ ಹಲವು ದಶಕಗಳಿಂದ ಈ ಬುಡಕಟ್ಟು ಹಳ್ಳಿ ಜನ ರಸ್ತೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಯಾರೂ ಕೂಡ ಇವರ ಮನವಿಗೆ ಸ್ಪಂದಿಸಿಲ್ಲ. ಇದೀಗ ಈ ಹಳ್ಳಿಯ ಜನ ಪ್ರತಿ ಮನಯಿಂದ ಕನಿಷ್ಠ 2000 ರೂಪಾಯಿ ಸಂಗ್ರಹಿಸಿದ್ದಾರೆ. ಬಡತನದಲ್ಲಿರುವ ಈ ಕುಟುಂಬಗಳು ತಮ್ಮಲ್ಲಿರುವ ಒಡವೆ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಿದ್ದಾರೆ. ಹಲವರು ಊಟವನ್ನೇ ಬಿಟ್ಟು ಹಣ ಒದಗಿಸಿದ್ದಾರೆ.
ಹೀಗಿ 10 ಲಕ್ಷ ರೂಪಾಯಿ ಸಂಗ್ರಹ ಮಾಡಿ ಸ್ವತಃ ರಸ್ತೆ ಕಾಮಾಗಾರಿ ಆರಂಭಿಸಿದ್ದಾರೆ. ಗುಡ್ಡ, ಬೆಟ್ಟಗಳನ್ನು ಕಡಿದು, ರಸ್ತೆ ಕಾಮಗಾರಿ ಶುರು ಮಾಡಿದ್ದಾರೆ. ಬುಡುಕಟ್ಟ ಜನಾಂಗ ಹಲವರು ಹಗಲಿರುಳು ರಸ್ತೆಗಾಗಿ ಶ್ರಮಿಸುತ್ತಿದ್ದಾರೆ. ಬೆಟ್ಟ ಗುಡ್ಡಗಳನ್ನು ಕಡಿದು ದಾರಿ ಮಾಡಲು ಹರಸಾಹಸ ಪಡಬೇಕಾಗಿದೆ. ಸುಮಾರು 5 ಕಿ.ಮೀ ರಸ್ತೆಗಾಗಿ ಈ ಗ್ರಾಮಸ್ಥರು ಊಟ ನಿದ್ರೆ ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಇದೀಗ ಗ್ರಾಮಸ್ಥರ ಕಾಮಗಾರಿ ಕುರಿತು ಮಾಧ್ಯಮದಲ್ಲಿ ಸುದ್ದಿಯಾದರೂ ಯಾವ ಅಧಿಕಾರಿಗಳು ಕೂಡ ಸೌಜನ್ಯಕ್ಕಾದರೂ ಇತ್ತ ಸುಳಿದಿಲ್ಲ.