ಸ್ಟೇಷನ್ ಮಾಸ್ಟರ್ಗೆ ನಿದ್ದೆ: ರೈಲು ಎರಡು ತಾಸು ಸ್ತಬ್ಧ!
* ಉತ್ತರ ಪ್ರದೇಶದ ಔರಯಾ ಜಿಲ್ಲೆ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆ
* ಸ್ಟೇಷನ್ ಮಾಸ್ಟರ್ ಕುಡಿದು ನಿದ್ದೆಗೆ: ರೈಲು ಸ್ತಬ್ಧ
* ಇದರಿಂದ ಹಲವು ರೈಲುಗಳು ಒಂದುವರೆ ಗಂಟೆ ಕಾಲ ವಿಳಂಬ
* ಪಾನಮತ್ತನಾಗಿ ಮಲಗಿದ ಎಎಸ್ಎಂ ಅಮಾನತು
ಲಖನೌ(ಜು.18): ಸಹಾಯಕ ಸ್ಟೇಷನ್ ಮಾಸ್ಟರ್ ಒಬ್ಬರು ಕುಡಿತದ ಅಮಲಿನಲ್ಲಿ ನಿದ್ದೆಗೆ ಜಾರಿದ ಪರಿಣಾಮ ಒಂದುವರೆ ಗಂಟೆಗಳ ಕಾಲ ರೈಲು ಸೇವೆಗಳು ವ್ಯತ್ಯಯವಾದ ಘಟನೆ ದೆಹಲಿ-ಹೌರಾ ರೈಲು ಮಾರ್ಗದಲ್ಲಿ ಬುಧವಾರ ನಡೆದಿದೆ. ಇದರಿಂದಾಗಿ ವೈಶಾಲಿ ಎಕ್ಸ್ಪ್ರೆಸ್, ಸಂಗಮ್ ಎಕ್ಸ್ಪ್ರೆಸ್ ಫರಕ್ಕಾ ಮತ್ತು ಮಗಧ ಎಕ್ಸ್ಪ್ರೆಸ್ ಮತ್ತು ಇನ್ನಿತರ ಸರಕು ಸಾಗಣೆಯ ರೈಲುಗಳು ಹಲವು ರೈಲ್ವೆ ನಿಲ್ದಾಣಗಳಲ್ಲೇ ಒಂದುವರೆ ತಾಸುಗಳ ಕಾಲ ನಿಲ್ಲಬೇಕಾಯಿತು.
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ರೈಲ್ವೆ ನಿಲ್ದಾಣವೊಂದರಲ್ಲಿ ಸಹಾಯಕ ಸ್ಟೇಷನ್ ಮಾಸ್ಟರ್(ಎಎಸ್ಎಂ) ಆಗಿರುವ ಅನಿರುದ್್ಧ ಕುಮಾರ್ ಅವರು ಕೆಲಸದ ಅವಧಿ ವೇಳೆ ಪಾನಮತ್ತರಾಗಿ ಮಲಗಿದ್ದರು. ಹೀಗಾಗಿ ರೈಲ್ವೆ ನಿಲ್ದಾಣದ ರೈಲುಗಳ ಆಗಮನ ಮತ್ತು ನಿರ್ಗಮನದ ಯಾವುದೇ ಮಾಹಿತಿಗಳನ್ನು ಅವರು ರವಾನಿಸಲಿಲ್ಲ. ಜೊತೆಗೆ ಹಿರಿಯ ಅಧಿಕಾರಿಗಳ ಕರೆಗಳಿಗೂ ಅನಿರುದ್್ಧ ಉತ್ತರಿಸದಿದ್ದಾಗ, ಹಿರಿಯ ಅಧಿಕಾರಿಗಳೇ ಸ್ಥಳಕ್ಕೆ ಬಂದು ನೋಡಿದ್ದಾರೆ. ಈ ವೇಳೆ ಎಎಸ್ಎಂ ಪಾನಮತ್ತರಾಗಿ ನಿದ್ದೆಗೆ ಜಾರಿರುವುದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದ್ದು, ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.