Amaravati Express : ಗೋವಾದ ದೂದ್ ಸಾಗರ್ ಬಳಿ ಹಳಿ ತಪ್ಪಿದ ಅಮರಾವತಿ!
ವಾಸ್ಕೋಡಗಾಮಾ-ಹೌರಾ ನಡುವೆ ಪ್ರಯಾಣಿಸುವ ಅಮರಾವತಿ ಎಕ್ಸ್ ಪ್ರೆಸ್
ಗೋವಾದ ದೂದ್ ಸಾಗರ್ ಬಳಿ ಹಳಿ ತಪ್ಪಿದ ರೈಲು
ಸುರಕ್ಷಿತವಾಗಿರುವ ಎಲ್ಲಾ ಪ್ರಯಾಣಿಕರು
ಪಣಜಿ (ಜ. 18): ಪಶ್ಚಿಮ ಬಂಗಾಳದಲ್ಲಿ ಬಿಕನೇರ್ ಎಕ್ಸ್ ಪ್ರೆಸ್ ಹಳಿ ತಪ್ಪಿ 9 ಜನ ಸಾವಿಗೀಡಾಗಿರುವ ಸುದ್ದಿ ಇನ್ನೂ ನೆನಪಿನಲ್ಲಿ ಇರುವ ಸಮಯದಲ್ಲಿಯೇ ಗೋವಾದಲ್ಲಿ ರೈಲು ಹಳಿತಪ್ಪಿದ ವರದಿಯಾಗಿದೆ. ವಾಸ್ಕೋಡಗಾಮಾ ಹಾಗೂ ಪಶ್ಚಿಮ ಬಂಗಾಳದ ಹೌರಾ ನಡುವೆ ಸಂಚರಿಸುವ ಅಮರಾವತಿ ಎಕ್ಸ್ ಪ್ರೆಸ್ ಗೋವಾದ ದೂದ್ ಸಾಗರ್ ಬಳಿ ಹಳಿ ತಪ್ಪಿದ್ದು, ಪ್ರಾಣಾಪಾಯ ಸಂಭವಿಸಿಲ್ಲ. ಬೆಳಿಗ್ಗೆ 8.56 ರ ಸುಮಾರಿಗೆ ದೂಧಸಾಗರ್ ಮತ್ತು ಕಾರಂಜೋಲ್ ನಡುವೆ ಈ ಘಟನೆ ನಡೆದಿದ್ದು, ರೈಲಿನ ಮುಂಭಾಗದ ಜೋಡಿ ಚಕ್ರಗಳು ಹಳಿತಪ್ಪಿದ್ದರಿಂದ ಅವಗಢ ಸಂಭವಿಸಿದೆ.
ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಯಾವುದೇ ರೀತಿಯ ಸಾವುನೋವು ಅಥವಾ ಗಾಯಗಳ ಬಗ್ಗೆ ಇದುವರೆಗೆ ವರದಿಯಾಗಿಲ್ಲ. "ರೈಲಿನ ಸಂಪೂರ್ಣ ರೇಕ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಪಘಾತ ಪರಿಹಾರ ರೈಲು (ಎಆರ್ ಟಿ) ಬೆಂಬಲದೊಂದಿಗೆ ಇದನ್ನು ಸರಿ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನಇಂಜಿನ್ ನಲ್ಲಾದ ಸಮಸ್ಯೆಯಿಂದಾಗಿ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಪಟನಾದಿಂದ ಗುವಾಹಟಿಗೆ ಹೊರಟಿದ್ದ ಬಿಕನೇರ್ ಎಕ್ಸ್ ಪ್ರೆಸ್ ಅಪಘಾತಕ್ಕೀಡಾಗಿ 9 ಮಂದಿ ಸಾವಿಗೀಡಾಗಿದ್ದರು. ಆ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ನೈಋತ್ಯ ರೈಲ್ವೆ ವಿಭಾಗದ ರೈಲು ಬೆಳಿಗ್ಗೆ 6.30 ಕ್ಕೆ ವಾಸ್ಕೋಡಗಾಮಾದಿಂದ ಹೊರಟು 8.50 ಕ್ಕೆ ದೂಧಸಾಗರ್ ಅನ್ನು ದಾಟಿತ್ತು ಎಂದು ಹೇಳಿದೆ. ರೈಲು ಹಳಿ ತಪ್ಪಿದ ತಕ್ಷಣ ಎಆರ್ ಟಿ ಮತ್ತು ವೈದ್ಯಕೀಯ ಸಲಕರಣೆಗಳ ವ್ಯಾನ್ ಕ್ಯಾಸಲ್ ರಾಕ್ ನಿಂದ ಬೆಳಗ್ಗೆ 9.45ಕ್ಕೆ ಹೊರಟು 10.35ಕ್ಕೆ ಸ್ಥಳಕ್ಕೆ ತಲುಪಿದೆ ಎಂದು ರೈಲ್ವೇಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಹುಬ್ಬಳಿಯ ಡಿಆರ್ ಎಂ ಅರವಿಂದ್ ಮಾಳಖೇಡೆ ಹಾಗೂ ಹಿರಿಯ ಅಧಿಕಾರಿಗಳ ವಿಭಾಗೀಯ ತಂಡ ಬೆಳಗ್ಗೆ 9.50ಕ್ಕೆ ಸ್ವಯಂ ಚಾಲಿತ ಎಆರ್ ಟಿಯ ಮೂಲಕ ಹುಬ್ಬಳ್ಳಿಯಿಂದ ತೆರಳಿ ಸ್ಥಳಕ್ಕೆ ಧಾವಿಸಿದ್ದಾರೆ. ರೈಲು ಅವಗಢದಿಂದ ಆಘಾತಕ್ಕೆ ಈಡಾಗಿದ್ದ ಎಲ್ಲಾ ಪ್ರಯಾಣಿಕರಿಗೆ ನೀರು ಮತ್ತು ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಪಶ್ಚಿಮ ಬಂಗಾಳದಲ್ಲಿ ನಡೆದ ರೈಲು ಅಫಘಾತದ ಬಳಿಕ ಸ್ಥಳಕ್ಕೆ ಧಾವಿಸಿದ್ದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಇಂಜಿನ್ ನ ಬಿಡಿಭಾಗಗಳನ್ನು ಬೇರೆ ಬೇರೆ ಮಾಡಿ ತನಿಖೆಗೆ ಒಳಪಡಿಸಿದ ಬಳಿಕವೇ ಇಂಜಿನ್ ನ ಯಾವ ಭಾಗದಲ್ಲಿ ಸಮಸ್ಯೆಆಗಿದೆ ಎನ್ನುವುದನ್ನು ತಿಳಿಯಲು ಸಾಧ್ಯ ಎಂದು ಹೇಳಿದ್ದರು. ಅದೇ ವೇಳೆ ಆಸ್ಪತ್ರೆಗೆ ದಾಖಲಾಗಿದ್ದ 45ಕ್ಕೂ ಅಧಿಕ ಪ್ರಯಾಣಿಕರನ್ನು ಅವರು ಭೇಟಿ ಮಾಡಿ ಸಾಂತ್ವನ ಹೇಳಿದ್ದರು.
Bikaner Express : ಹಳಿ ತಪ್ಪಿದ ಬಿಕನೇರ್ ಎಕ್ಸ್ ಪ್ರೆಸ್, ಸಾವಿನ ಸಂಖ್ಯೆ 6ಕ್ಕೆ ಏರಿಕೆ
"ಪ್ರಾಥಮಿಕ ತನಿಖೆಯಲ್ಲಿ ಇಂಜಿನ್ನ ಉಪಕರಣದಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಸೂಚಿಸುತ್ತವೆ, ವೇಗದ ಕುರಿತಾಗಿ ಇರುವ ನಿಯಮ ಅಥವಾ ಟ್ರ್ಯಾಕ್ಗಳಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಸಮಸ್ಯೆ ಏನೆಂದು ಇಂಜಿನ್ ನ ಬಿಡಿಭಾಗಗಳನ್ನು ಬೇರ್ಪಡಿಸಿದ ಬಳಿಕವೇ ತಿಳಿದುಕೊಳ್ಳಬಹುದು. ಅಪಘಾತವಾಗಿರುವ ಕಾರಣ ಇಂಜಿನ್ ನ ಮೇಲೆ ಮಾರ್ಕ್ ಗಳು ಇರುತ್ತವೆ. ಇದನ್ನು ತನಿಖೆ ಮಾಡಿದ ಬಳಿಕ ಸೂಕ್ತ ಕಾರಣ ಏನು ಎನ್ನುವುದು ತಿಳಿಯಲಿದೆ; ಎಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದರು.
ಸಿಮೆಂಟ್ ಕಂಬಕ್ಕೆ ಗುದ್ದಿದ ರಾಜಧಾನಿ ಎಕ್ಸ್ ಪ್ರೆಸ್: ಈ ನಡುವೆ ಕೆಲ ದಿನಗಳ ಹಿಂದೆ ಗುಜರಾತ್ ನ ವಲ್ಸದ್ ನಲ್ಲಿ ಮುಂಬೈ-ದೆಹಲಿ ರಾಜಧಾನಿ ಎಕ್ಸ್ ಪ್ರೆಸ್, ಸಿಮೆಂಟ್ ಕಂಬಕ್ಕೆ ಗುದ್ದಿದ್ದು ಕೂಡ ಸುದ್ದಿಯಾಗಿತ್ತು. ದಕ್ಷಿಣ ಗುಜರಾತ್ ನ ವಲ್ಸದ್ ನ ರೈಲ್ವೇ ಟ್ರ್ಯಾಕ್ ನಲ್ಲಿ ಕೆಲ ಕಿಡಿಗೇಡಿಗಳು ರೈಲಿನ ಹಳಿ ತಪ್ಪಿಸುವ ಉದ್ದೇಶದಲ್ಲಿ ಸಿಮೆಂಟ್ ಕಂಬವನ್ನು ಇಟ್ಟಿದ್ದರು. ರೈಲು ವೇಗದಲ್ಲಿದ್ದ ಕಾರಣ ಗುದ್ದಿದ ರಭಸಕ್ಕೆ ಸಿಮೆಂಟ್ ಕಂಬ ಟ್ರ್ಯಾಕ್ ನ ಪಕ್ಕ ಹಾರಿಹೋಗಿತ್ತು. ಇದರಿಂದ ರೈಲಿಗೆ ಯಾವುದೇ ಹಾನಿಯಾಗಿರಲಿಲ್ಲ. ದೂರು ದಾಖಲಿಸಿಕೊಂಡಿರುವ ಪೊಲೀಸರು ಕಿಡಿಗೇಡಿಗಳ ಹುಡುಕಾಟದಲ್ಲಿದ್ದಾರೆ.