Bikaner Express : ಹಳಿ ತಪ್ಪಿದ ಬಿಕನೇರ್ ಎಕ್ಸ್ ಪ್ರೆಸ್, ಸಾವಿನ ಸಂಖ್ಯೆ 6ಕ್ಕೆ ಏರಿಕೆ
ಹಳಿತಪ್ಪಿದ ಬಿಕನೇರ್ ಎಕ್ಸ್ ಪ್ರೆಸ್
6 ಮಂದಿ ಸಾವು, 50 ಮಂದಿಯ ರಕ್ಷಣೆ, 15 ಮಂದಿಯ ಸ್ಥಿತಿ ಗಂಭೀರ
ಪಶ್ಚಿಮ ಬಂಗಾಳದದಲ್ಲಿ ಅವಗಢ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮೋದಿ ಕರೆ
ಕೋಲ್ಕತಾ (ಜ. 13): ಪಟನಾದಿಂದ (Patna ) ಗುವಾಹಟಿಗೆ (Guwahat) ತೆರಳುತ್ತಿದ್ದ ಬಿಕನೇರ್ ಎಕ್ಸ್ ಪ್ರೆಸ್ (Bikaner express) ಗುರುವಾರ ಸಂಜೆ 5 ಗಂಟೆಗೆ ಪಶ್ಚಿಮ ಬಂಗಾಳದ (West Bengal) ಜಲಪಾಯಿಗುರಿ ಜಿಲ್ಲೆಯಲ್ಲಿ ಹಳಿ ತಪ್ಪಿದೆ. ಈ ಅವಗಢದಲ್ಲಿ ಕನಿಷ್ಠ 4 ರಿಂದ 5 ಬೋಗಿಗಳು ತಲೆಕೆಳಗಾಗಿ ಉರುಳಿದ್ದು, 6 ಮಂದಿ ಸಾವಿಗೀಡಾಗಿದ್ದಾರೆ. ಈವರೆಗೂ 50 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದ್ದು, 15 ಮಂದಿಯ ಸ್ಥಿತಿ ಗಂಭೀರವಾಗಿದೆ. 308 ಪ್ರಯಾಣಿಕರು ರೈಲಿನಲ್ಲಿದ್ದು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸಾವು ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಗಂಭೀರವಾಗಿ ಪೆಟ್ಟಾದವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಾಯಾನ್ ಗುರಿ ಆಸ್ಪತ್ರೆಯಿಂದ ಜಲಪಾಯಿಗುರಿ ಜಿಲ್ಲಾಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.
ಜಲಪಾಯಿಗುರಿ ಜಿಲ್ಲೆಯ ಮೈನಾಗುರಿಯ ದೊಮೊಹನಿಯಲ್ಲಿ ಅವಗಢಕ್ಕೆ ತುತ್ತಾಗಿದೆ ಎಂದು ಭಾರತೀಯ ರೈಲ್ವೇಸ್ ಪ್ರಕಟಣೆಯಲ್ಲಿ ತಿಳಿಸಿದೆ. ಬಿಕನೇರ್ ನಿಂದ ಬಂದಿದ್ದ ರೈಲು, ಪಟನಾ ಮಾರ್ಗವಾಗಿ ಗುವಾಹಟಿಗೆ ತೆರಳುತ್ತಿತ್ತು. ಈಶಾನ್ಯ ಫ್ರಂಟಿಯರ್ ರೈಲು ವಿಭಾಗಕ್ಕೆ ಬರುವ ಬಿಕನೇರ್ ಎಕ್ಸ್ ಪ್ರೆಸ್, ಅಪಘಾತಕ್ಕೆ ಈಡಾಗುತ್ತಿದ್ದಂತೆ ರೈಲ್ಷೇ ರಕ್ಷಣಾ ವಿಭಾಗ ಕೂಡ ತುರ್ತಾಗಿ ಸ್ಥಳಕ್ಕೆ ತೆರಳಿದೆ. 51 ಅಂಬುಲೆನ್ಸ್ ಗಳು ರಕ್ಷಣಾ ಕಾರ್ಯಾಚರಣೆಯಲ್ಲಿದ್ದು, ಸ್ವೀಪರ್ ಕೋಚ್ ನ ಎಸ್ 12 ಹಾಗೂ ಅದರ ಅಕ್ಕಪಕ್ಕದ ಬೋಗಿಗಳು ಉರುಳಿಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೋಗಿಗಳು ಹಳಿತಪ್ಪಿದಾಗ ಒಮ್ಮೆಲೆ ಭಾರೀ ಕಂಪನವಾದಂತಾಯಿತು. ಅವಗಢವಾಗುವ ಸಮಯದಲ್ಲಿ ರೈಲು 40 ಕಿಲೋಮೀಟರ್ ವೇಗದಲ್ಲಿದ್ದ ಕಾರಣ, ಹೆಚ್ಚಿನ ಸಾವು ನೋವ ಆಗಿರುವ ಸಾಧ್ಯತೆ ಕಡಿಮೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. "ಗುವಾಹಟಿ-ಬಿಕನೇರ್ ಎಕ್ಸ್ ಪ್ರೆಸ್ 15633 (ಅಪ್) ಇಂದು ಸಂಜೆ 5 ಗಂಟೆಯ ವೇಳೆಗೆ ಹಳಿ ತಪ್ಪಿದೆ. 12 ಬೋಗಿಗಳ ಮೇಲೆ ಪರಿಣಾಮ ಬೀರಿದ್ದು, ಪರಿಹಾರ ರೈಲು ಹಾಗೂ ವೈದ್ಯಕೀಯ ವ್ಯಾನ್ ನೊಂದಿಗೆ ಡಿಆರ್ ಎಂ ಹಾಗೂ ಎಡಿಆರ್ ಎಂ ಸ್ಥಳಕ್ಕೆ ತೆರಳಿದೆ' ಎಂದು ಭಾರತೀಯ ರೈಲ್ವೇ (Indian Railways) ತಿಳಿಸಿದೆ.
"ಕೋವಿಡ್ ನಿಯಮಾವಳಿಯ ಕಾರಣ, ರೈಲಿನಲ್ಲಿ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ಹಾಗಾಗಿ ಸಾವು ನೋವುಗಳ ಸಂಖ್ಯೆ ಕಡಿಮೆ ಇರುವ ಸಾಧ್ಯತೆ ಇದೆ' ಎಂದು ನಾರ್ಥ್ ಈಸ್ಟ್ ಫ್ರಂಟಿಯರ್ ರೈಲ್ವೆಯ ಅಲಿಪುರ್ದಾರ್ ವಿಭಾಗದ (Alipuarduar section ) ವಿಭಾಗೀಯ ರೈಲ್ವೆ ವ್ಯವಸ್ಥಾಪಕ ದಿಲೀಪ್ ಕುಮಾರ್ ಸಿಂಗ್ (Dilip Kumar Singh)ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿಗೆ ಮೋದಿ ಕರೆ: ಅಪಘಾತ ಸಂಭವಿಸುತ್ತಿದ್ದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕರೆ ಮಾಡಿರುವ ಪ್ರಧಾನಿ ಮೋದಿ, ಪ್ರಸ್ತುತ ಪರಿಸ್ಥಿತಿಯ ಸಂಪೂರ್ಣ ವಿವರ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಉನ್ನತ ಮಟ್ಟದ ರೈಲ್ವೇ ಭದ್ರತೆ ತನಿಖೆಯನ್ನು ನಡೆಸಲು ಆದೇಶಿಸಲಾಗಿದೆ.
ಪರಿಹಾರ ಘೋಷಣೆ: ಅವಗಢದ ಬೆನ್ನಲ್ಲಿಯೇ ಪರಿಹಾರ ಘೋಷಣೆ ಮಾಡಲಾಗಿದ್ದು, ಮೃತಪಟ್ಟವರಿಗೆ 5 ಲಕ್ಷ ರೂಪಾಯಿ, ಗಂಭೀರ ಗಾಯವಾದವರಿಗೆ 1 ಲಕ್ಷ ರೂಪಾಯಿ ಹಾಗೂ ಸಣ್ಣ ಗಾಯವಾದವರಿಗೆ 25 ಸಾವಿರ ರೂಪಾಯಿ ಘೋಷಣೆ ಮಾಡಲಾಗಿದೆ.