ಉತ್ತರ ಪ್ರದೇಶ ಗೆಲ್ಲಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್, ಬಿಜೆಪಿಗೆ ಸಡ್ಡು?
* ಮುಂದಿನ ವರ್ಷದ ಉತ್ತರ ಪ್ರದೇಶ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್
* ಉತ್ತರ ಪ್ರದೇಶ ಗೆಲ್ಲಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್
* ಬಿಜೆಪಿ ಮತ್ತು ಆರ್ಎಸ್ಎಸ್ನ ಸುಳ್ಳು ಪ್ರಚಾರಗಳನ್ನು ಬಯಲು ಮಾಡಲು ಹೊಸ ಪಡೆ
ಲಖನೌ(ಸೆ.13): ಮುಂದಿನ ವರ್ಷದ ಉತ್ತರ ಪ್ರದೇಶ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್, ಆರ್ಎಸ್ಎಸ್ ಮಾದರಿಯಲ್ಲೇ ಸೈದ್ದಾಂತಿಕ ಕಾರ್ಯಕರ್ತರ ಪಡೆ ರಚನೆಗೆ ಮುಂದಾಗಿದೆ.
ಬಿಜೆಪಿ ಮತ್ತು ಆರ್ಎಸ್ಎಸ್ನ ಸುಳ್ಳು ಪ್ರಚಾರಗಳನ್ನು ಬಯಲು ಮಾಡಲು ಇದೊಂದೇ ಮಾರ್ಗ ಎಂದು ಪ್ರತಿಪಾದಿಸುತ್ತಿರುವ ಕಾಂಗ್ರೆಸ್ ನಾಯಕತ್ವ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತರಬೇತಿಯನ್ನೂ ನೀಡುತ್ತಿದೆ. ಇದಕ್ಕಾಗಿ 14 ಅಧ್ಯಾಯಗಳು ಇರುವ ಕಿರು ಹೊತ್ತಿಗೆಯನ್ನು ತನ್ನ ಕಾರ್ಯಕರ್ತರಿಗೆ ವಿತರಣೆ ಮಾಡುತ್ತಿದೆ.
ಅದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ದೇಶ ವಿರೋಧಿಗಳು, ಬಿಜೆಪಿ ಮಾತ್ರವೇ ರಾಷ್ಟ್ರೀಯವಾದಿ ಪಕ್ಷ, ದೇಶದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಗೆ ಪ್ರಧಾನಿಯಾಗಲು ಅವಕಾಶ ನೀಡಲಿಲ್ಲ. ಪಟೇಲ್ ಪ್ರಧಾನಿಯಾಗಿದ್ದರೆ ದೇಶ ಹಲವು ಸಮಸ್ಯೆಗಳಿಗೆ ಸಿಲುಕುತ್ತಿರಲಿಲ್ಲವೇ? ಕಳೆದ 70 ವರ್ಷಗಳಲ್ಲಿ ದೇಶಕ್ಕಾಗಿ ಕಾಂಗ್ರೆಸ್ ಏನೂ ಮಾಡಲಿಲ್ಲವೇ? ಭಗತ್ ಸಿಂಗ್ ಅವರನ್ನು ಬ್ರಿಟಿಷರು ನೇಣುಗಂಭಕ್ಕೆ ಏರಿಸುವುದರಿಂದ ತಪ್ಪಿಸಲು ಕಾಂಗ್ರೆಸ್ ಮತ್ತು ಮಹಾತ್ಮ ಗಾಂಧೀಜಿ ತಡೆಯಲು ಯತ್ನಿಸಲಿಲ್ಲವೇ? ವಿಶೇಷ ಸ್ಥಾನಮಾನ ಪ್ರಾಪ್ತಿ ಮಾಡಿ ಕಾಶ್ಮೀರವನ್ನು ದೇಶದಿಂದ ನೆಹರೂ ಹೊರಗಿಟ್ಟರೇ? ಎಂಬುದು ಸೇರಿದಂತೆ ಹಲವು ವಿಚಾರಗಳ ಬಿಜೆಪಿ ಮತ್ತು ಆರ್ಎಸ್ಎಸ್ ಸುಳ್ಳುಗಳು ಮತ್ತು ವಾಸ್ತವಾಂಶಗಳ ಬಗ್ಗೆ ವಿವರಣೆ ನೀಡಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.