ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು!
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ 2 ದಿನಗಳ ಕಾಲ ಬಾಂಗ್ಲಾದೇಶಕ್ಕೆ ನೀಡಿದ್ದ ಭೇಟಿ| ಬಾಂಗ್ಲಾ ಪ್ರವಾಸ: ಮೋದಿ ವಿರುದ್ಧ ಆಯೋಗಕ್ಕೆ ಟಿಎಂಸಿ ದೂರು
ನವದೆಹಲಿ(ಮಾ.31): ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ 2 ದಿನಗಳ ಕಾಲ ಬಾಂಗ್ಲಾದೇಶಕ್ಕೆ ನೀಡಿದ್ದ ಭೇಟಿಯ ವೇಳೆ ಪಶ್ಚಿಮ ಬಂಗಾಳದಲ್ಲಿ ಜಾರಿಯಲ್ಲಿರುವ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮಾ.28ರ ದಿನಾಂಕವಿರುವ ಈ ದೂರಿನ ಪ್ರತಿ ಮಂಗಳವಾರ ಬಹಿರಂಗವಾಗಿದೆ.
‘ಮಾ.26ರಂದು ಪ್ರಧಾನಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿ 50ನೇ ಸ್ವಾತಂತ್ರ್ಯೋತ್ಸವ ಹಾಗೂ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಜನ್ಮಶತಮಾನೋತ್ಸವದಲ್ಲಿ ಪಾಲ್ಗೊಂಡಿದ್ದರು. ಇದಕ್ಕೆ ನಮ್ಮ ತಕರಾರಿಲ್ಲ. ಆದರೆ, ಮಾ.27ರಂದು ಅಲ್ಲಿ ಅವರು ಮಾಡಿದ ಭಾಷಣಗಳು ಚುನಾವಣಾ ಪ್ರಚಾರ ಭಾಷಣಗಳಾಗಿದ್ದವು.
ಆ ಭಾಷಣಗಳಿಗೂ ಬಾಂಗ್ಲಾ ಸ್ವಾತಂತ್ರ್ಯೋತ್ಸವಕ್ಕೂ, ಮುಜಿಬುರ್ ರೆಹಮಾನ್ಗೂ ಯಾವುದೇ ಸಂಬಂಧವಿಲ್ಲ. ಅವು ನೇರವಾಗಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿರುವ ಕೆಲ ಕ್ಷೇತ್ರಗಳ ಮತದಾರರ ಮೇಲೆ ಪ್ರಭಾವ ಬೀರುವಂತಿವೆ. ತನ್ಮೂಲಕ ಪ್ರಧಾನಿ ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.