ಟಿಟಿಡಿ ಸರ್ಕಾರಿ ಹಿಡಿತದಿಂದ ಮುಕ್ತ: ತಿರುಪತಿ ಲೋಕ ಕದನಕ್ಕೆ ಬಿಜೆಪಿ ಪ್ರಣಾಳಿಕೆ!
ಏ.17ರಂದು ನಡೆಯಲಿರುವ ತಿರುಪತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ- ಜನಸೇನಾ ಮೈತ್ರಿಕೂಟ ಚುನಾವಣೆ ಪ್ರಣಾಳಿಕೆ ಬಿಡುಗಡೆ| ತಿರುಪತಿ ದೇವಾಲಯ ನಿರ್ವಹಿಸುತ್ತಿರುವ ಟಿಟಿಡಿ ಟ್ರಸ್ಟ್ ಅನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವುದಾಗಿ ಭರವಸೆ
ತಿರುಪತಿ(ಏ.13): ಏ.17ರಂದು ನಡೆಯಲಿರುವ ತಿರುಪತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ- ಜನಸೇನಾ ಮೈತ್ರಿಕೂಟ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ತಿರುಪತಿ ದೇವಾಲಯ ನಿರ್ವಹಿಸುತ್ತಿರುವ ಟಿಟಿಡಿ ಟ್ರಸ್ಟ್ ಅನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವುದಾಗಿ ಭರವಸೆ ನೀಡಿದೆ.
ಕರ್ನಾಟಕದ ಮಾಜಿ ಮುಖ್ಯಕಾರ್ಯದರ್ಶಿ ರತ್ನ ಪ್ರಭಾ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಬಿಜೆಪಿ ರಾಜ್ಯ ಅಧ್ಯಕ್ಷ ಸೋಮು ವೀರಾಜು ಹಾಗೂ ಇತರ ಮುಖಂಡರ ಉಪಸ್ಥಿತಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಟಿಟಿಡಿಯ ಆಸ್ತಿಗಳನ್ನು ನಿರ್ವಹಿಸಲು ‘ಧರ್ಮಾಚಾರ್ಯ ಮಂಡಳಿ’ಯನ್ನು ರಚಿಸಲಾಗುವುದು.
ಸರ್ಕಾರದ ಬದಲು ಸಾಧು ಸಂತರನ್ನು ಒಳಗೊಂಡ ಸಂಸ್ಥೆಯೊಂದು ಟಿಟಿಡಿ ಟ್ರಸ್ಟ್ ಅನ್ನು ಮೇಲ್ವಿಚಾರಣೆ ಮಾಡಲಿದೆ. ರಾಜ್ಯದ ಇತರ ದೇವಾಲಯಗಳಲ್ಲಿಯೂ ಇದೇ ರೀತಿಯ ವ್ಯವಸ್ಥೆಯನ್ನು ತರಲಾಗುವುದು ಎಂದು ಪ್ರಾಣಾಳಿಕೆಯಲ್ಲಿ ತಿಳಿಸಲಾಗಿದೆ.