ಕೊಡಕರದಲ್ಲಿ 40 ವರ್ಷ ಹಳೆಯ ಕಟ್ಟಡ ಕುಸಿದು ಮೂವರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಕಟ್ಟಡ ಕುಸಿದಿದೆ ಎಂದು ಶಂಕಿಸಲಾಗಿದೆ. ಕಟ್ಟಡದಲ್ಲಿ ವಾಸವಾಗಿದ್ದವರ ಸಂಖ್ಯೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ.

ತ್ರಿಶೂರು (ಜೂ.27): ಕೇರಳದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಪ್ರಾಕೃತಿಕ ವಿಕೋಪಗಳು ಅಲ್ಲಲ್ಲಿ ನಡೆಯುತ್ತಿದೆ. ಇದೀಗ ತ್ರಿಶೂರ್ ಜಿಲ್ಲೆಯ ಕೊಡಕರ ಪಟ್ಟಣದಲ್ಲಿ 40 ವರ್ಷ ಹಳೆಯ ಎರಡು ಅಂತಸ್ತಿನ ಕಟ್ಟಡ ಕುಸಿದು ಮೂವರು ವಲಸೆ ಕಾರ್ಮಿಕರು ದುರ್ಮರಣ ಹೊಂದಿರುವ ದುರ್ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಪಶ್ಚಿಮ ಬಂಗಾಳ ಮೂಲದ ರೂಪೆಲ್, ರಾಹುಲ್ ಮತ್ತು ಅಲಿಮ್ ಎಂದು ಗುರುತಿಸಲಾಗಿದೆ. ಅವಶೇಷಗಳಿಂದ ಅವರ ಶವಗಳನ್ನು ಹೊರತೆಗೆದುಕೊಳ್ಳಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಟ್ಟಡವು ಕೆಂಪು ಕಲ್ಲಿನಿಂದ ನಿರ್ಮಿತವಾಗಿದ್ದು, ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಪೂರ್ಣವಾಗಿ ಕುಸಿದಿದೆ. ಈ ಕಟ್ಟಡದಲ್ಲಿ ಸುಮಾರು 17 ಮಂದಿ ವಾಸಿಸುತ್ತಿದ್ದರು. ಅಪಘಾತ ಸಂಭವಿಸಿದ ವೇಳೆ ಬಹುತೇಕರು ಬೆಳಿಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಸಮಯವಾಗಿತ್ತು. ಉಳಿದವರು ತಮ್ಮ ಸಮಯಪ್ರಜ್ಞೆಯಿಂದ ಹೊರ ಓಡಿ ಬಂದು ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಆದರೆ ಕಟ್ಟಡದಲ್ಲಿ ವಾಸಿಸುತ್ತಿದ್ದವರ ಸಂಖ್ಯೆಯ ಕುರಿತು ಭಿನ್ನಾಭಿಪ್ರಾಯ ಉಂಟಾಗಿದೆ. ಕಾರ್ಮಿಕರನ್ನು ನೇಮಿಸಿದ್ದ ಗುತ್ತಿಗೆದಾರನ ಪ್ರಕಾರ ಕಟ್ಟಡದಲ್ಲಿ 10 ಮಂದಿ ಮಾತ್ರ ವಾಸಿಸುತ್ತಿದ್ದರು ಎಂದರೆ, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ 17 ಮಂದಿ ಇದ್ದರೆಂದು ತಿಳಿಸಿದ್ದಾರೆ. ಕೊಡಕರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೀಶ್ ಕೆ.ಜಿ. ಅವರು ಸೌತ್ ಫಸ್ಟ್‌ಗೆ ನೀಡಿದ ಮಾಹಿತಿಯಲ್ಲಿ, ಒಟ್ಟು 30 ಮಂದಿ ಈ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಮಳೆಯ ಕಾರಣದಿಂದಾಗಿ, ಹೆಚ್ಚಿನವರು ತಮ್ಮ ಊರಿಗೆ ಮರಳಿದ್ದರು ಎಂದು ಹೇಳಿದ್ದಾರೆ.

ಕಟ್ಟಡ ಕುಸಿದ ಕೂಡಲೇ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರು. ಆದರೆ ಅವಶೇಷಗಳಡಿ ಸಿಲುಕಿದ್ದ ಮೂವರಿಗೆ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಕಟ್ಟಡ ಕುಸಿದ ಘಟನೆ ಇಂದು ಬೆಳಿಗ್ಗೆ ಸುಮಾರು 6 ಗಂಟೆಗೆ ನಡೆದಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಹೃದಯ ಬಡಿತ ಕಡಿಮೆಯಾಗಿದ್ದು, ಅವರ ಪ್ರಾಣಕ್ಕೆ ಅಪಾಯವಿದೆ. ಚಿಕಿತ್ಸೆ ಮುಂದುವರೆದಿದೆ. ಒಬ್ಬ ವ್ಯಕ್ತಿಯನ್ನು ಅವಶೇಷಗಳಿಂದ ಹೊರತೆಗೆದಿದ್ದೇವೆ. ಆದರೆ ಅವರ ಬದುಕುವ ಸಾಧ್ಯತೆಗಳು ಕಡಿಮೆ. ಆಸ್ಪತ್ರೆಗೆ ದಾಖಲಿಸಿರುವವರ ಆರೋಗ್ಯ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಉಪಾಧ್ಯಕ್ಷ ರಾಜೀಶ್ ಮಾಹಿತಿ ನೀಡಿದ್ದಾರೆ. ಈ ನಡುವೆ, ತಹಶೀಲ್ದಾರ್ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿ ಕಟ್ಟಡ ಕುಸಿತದ ಕುರಿತು ಸ್ಪಷ್ಟನೆ ಕೇಳಿದ್ದಾರೆ.